ಕಾರ್ನಾಡ್ ನೆನಪು: ತಲೆದಂಡ ಮತ್ತು ಮಾಸ್ತಿ ನಾಟಕಗಳ ಬಗ್ಗೆ ಪಿ.ಲಂಕೇಶ್ ಬರಹ
ಜ್ಞಾನಪೀಠ ಪುರಸ್ಕೃತರೆಂಬುದಷ್ಟೇ ಅವರ ಹಿರಿಮೆಯಲ್ಲ. ಅವರ ನಾಟಕ ಪ್ರತಿಭೆಯ ಕುರಿತು ಅರಿಯಬೇಕೆಂದರೆ, ಅವರ ತಲೆದಂಡ ನಾಟಕದ ಕುರಿತು ಪಿ.ಲಂಕೇಶ್ರವರು 1990ರಲ್ಲಿ ಬರದ ಪುಟ್ಟ ಬರಹ ಓದಬೇಕು.
ಮೇಲಿನದನ್ನು ಬರೆದು ಬೇಸರವಾಗಿರುವಾಗ ಮೊನ್ನೆ ಆದ ಒಂದು ಸಣ್ಣ ಸಂಗತಿ, ತಮಾಷೆಯ ಸಂಗತಿ ಹೇಳುತ್ತೇನೆ. ನಾನು ಒಬ್ಬನೇ ಕೂತು ಅದೇನೋ ಲೆಕ್ಕಾ ಹಾಕುತ್ತಿದೆ. ಗಿರೀಶ್ ಕಾರ್ನಾಡರ ‘ತಲೆದಂಡ’ ನಾಟಕವನ್ನು ಆಗತಾನೇ ಓದಿ ಮುಗಿಸಿದ್ದೆ. ಗಿರೀಶ್ ಕಾರ್ನಡ್ ಎಂಥ ವಿಚಿತ್ರ ಮನುಷ್ಯರೆಂಬುದು ಅನೇಕರಿಗೆ ಗೊತ್ತಿಲ್ಲ. ಈತ ಮನಸ್ಸು ಮಾಡಿದರೆ ವಿಕ್ರಮ್ ಶೇಟ್, ಸಲ್ಮಾನ್ ರಶ್ದಿ, ನಾಯ್ಪಾಲ್ ತರಹದ ಇಂಗ್ಲಿಷ್ ಲೇಖಕರಾಗಿ ಮೆರೆಯಬಹುದಿತ್ತು. ನಮ್ಮಲ್ಲಿ ಇಂಗ್ಲಿಷ್ ಭಾಷೆಯನ್ನು ಅದರೆಲ್ಲ ಚೆಂದದೊಂದಿಗೆ ಬಳಸಬಲ್ಲ ವ್ಯಕ್ತಿ ಗಿರೀಶ್. ಇಂಗ್ಲಿಷ್ ಲೇಖಕರ ಆದಾಯ, ಖ್ಯಾತಿ, ವೈಭವ ಅನೇಕರಿಗೆ ಗೊತ್ತಿರಲಿಕ್ಕಿಲ್ಲ, ಕನ್ನಡದಲ್ಲಿ ನೂರು ನಾಟಕ ಬರೆದರೂ ದೊರೆಯದಷ್ಟು ಹಣ ಇಂಗ್ಲಿಷ್ ಕಿರುನಾಟಕದಿಂದ ದೊರೆಯಬಲ್ಲದು. ಆದರೆ ಗಿರೀಶ್ ಅದಕ್ಕೆಲ್ಲ ಆಸೆ ಪಡಲಿಲ್ಲ. ಮತ್ತೆ ಮತ್ತೆ ಕನ್ನಡದಲ್ಲೇ ಬರೆಯುತ್ತಾರೆ. ಬರೆಯುತ್ತಾ ಅವರ ಕನ್ನಡ ಶೈಲಿ ಜನಸಾಮಾನ್ಯರ ಮಾತುಗಳನ್ನು, ಸಾಮಾನ್ಯರ ಮಾತಿನ ಗತ್ತು, ಕಮರನ್ನು ಪಡೆಯುತ್ತದೆ. ಅವರ ‘ತಲೆದಂಡ’ ನಾಟಕದಲ್ಲಿನ ಬಸವಣ್ಣ, ಬಿಜ್ಜಳ ರಾಜ, ಮಂತ್ರಿಯ ಗತ್ತನ್ನೆಲ್ಲ ಬಿಟ್ಟು ಎಲ್ಲ ಮನುಷ್ಯರಂತೆ, ಅಗಾಧ ಸಮಸ್ಯೆಗಳ ಎದುರಿಸುವ ದಿಟ್ಟರಂತೆ ಕಂಡುಬರುತ್ತಾರೆ.
ಇಲ್ಲಿಯ ‘ತಲೆದಂಡ’ ವಸ್ತುವಿಗಿಂತಲೂ ಪವಾಡ ಅರ್ಥಪೂರ್ಣವಾಗಿದೆ. ಹನ್ನೆರಡನೆ ಶತಮಾನದ ಕ್ಷೌರಿಕ ಜಾತಿಗೆ ಸೇರಿದ ವ್ಯಕ್ತಿಯೊಬ್ಬ (ಈತ ಜೈನ ಎಂದು ನಾನು ಓದಿದ್ದೆ) ಬಸವಣ್ಣನವರ ಮಾಂತ್ರಿಕ ಸ್ಪರ್ಶದಿಂದ ದೊರೆಯಾಗುವುದೇ ಅಲ್ಲದೆ, ಪವಾಡವೊಂದನ್ನು ಕಾಣುತ್ತಾನೆ-ಜೋಳ ಮುತ್ತಾಗುವ, ಬಸವಣ್ಣನವರು ತಮ್ಮ ಧಾರಾಳವನ್ನು ಚಾಣಾಕ್ಷತೆಯಿಂದ ಮುಚ್ಚಿಹಾಕುವ ಪವಾಡವಲ್ಲ; ಶತಮಾನಗಳಿಂದ ಕೆಳಜಾತಿಯವರು, ಕೀಳುಜನ ಎನ್ನಿಸಿಕೊಂಡಿದ್ದ, ಎಂದುಕೊಂಡಿದ್ದ ಜನ ಮನುಷ್ಯರಾಗುವ, ವಿಚಾರವಂತರಾಗುವ, ಕಲಿಗಳಾಗುವ, ದೊರೆಗಳಾಗುವ ಪವಾಡ.