ಕೊರೊನಾ ನಿಯಮಗಳೆಲ್ಲಾ ಗಾಳಿಗೆ ತೂರಿ ಮೆಜೆಸ್ಟಿಕ್ ನಲ್ಲಿ ಸೇರಿದ ನೂರಾರು ಮಂದಿ…!
ಕೊರೊನಾ ಲಾಕ್ ಡೌನ್ ನಿಂದಾಗಿ ಖಾಲಿ ಖಾಲಿ ಹೊಡೆಯುತ್ತಿದ್ದ ಮೆಜೆಸ್ಟಿಕ್ ಸದ್ಯ ಜನರಿಂದ ತುಂಬಿ ತುಳುಕುತ್ತಿದೆ. ಎಲ್ಲಿ ನೋಡಿದ್ರಲ್ಲಿ ಜನಗಳು. ಚಿಕ್ಕ ಮಕ್ಕಳಿಂದ ವಯಸ್ಕರೆಲ್ಲಾ ನೂರಾರು ಸಂಖ್ಯೆಯಲ್ಲಿ ಮೆಜೆಸ್ಟಿಕ್ ನಲ್ಲಿ ಸೇರಿದ್ದು ಕೊರೊನಾ ನಿಯಮಗಳನ್ನ ಗಾಳಿಗೆ ತೂರಿದ್ದಾರೆ.
ಹೌದು… ಈಗಾಗಲೇ ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದೆ. ಇದರ ನಡುವೆಯೂ ವಲಸೆ ಕಾರ್ಮಿಕರನ್ನು ಊರುಗಳಿಗೆ ಕಳುಹಿಸುವ ನಿರ್ಧಾರ ಮಾಡಲಾಗಿದೆ. ಆದರೆ ಇದಕ್ಕೂ ಷರತ್ತನ್ನ ಸರ್ಕಾರ ವಿಧಿಸಿತ್ತು. ಆದರೆ ನಿಯಮಗಳನ್ನು ಪಾಲಿಸಿದ ಜನ ಬೆಳಿಗ್ಗೆ 6 ಗಂಟೆಯಿಂದಲೇ ನೂರಾರು ಸಂಖ್ಯೆಯಲ್ಲಿ ಮೆಜಿಸ್ಟಿಕ್ ಸೇರಿದ್ದಾರೆ.
ತಮ್ಮ ಊರುಗಳಿಗೆ ತೆರಳಲು ಕಾರ್ಮಿಕರಲ್ಲದೆ, ವಿದ್ಯಾರ್ಥಿಗಳು ಸೇರಿ ಸಾಕಷ್ಟು ಜನರು ಮೆಜೆಸ್ಟಿಕ್ ಬಿಎಂಟಿಸಿ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಇಲ್ಲಿಂದ ಬಸ್ಗಳಲ್ಲಿ ಜನರನ್ನು ಊರಿಗೆ ಕೊಂಡೊಯ್ಯುವ ಕಾರ್ಯ ನಡೆಯಲಿದೆ. ಕೆಎಸ್ಆರ್ಟಿಸಿ ವತಿಯಿಂದ 150 ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಗೆ ಬಸ್ಗಳು ಸಂಚರಿಸಿದೆ. ಬೆಳಗ್ಗೆ 9 ಗಂಟೆಯಿಂದ ಬಸ್ಗಳು ಹೊರಟಿವೆ. ವಿಶೇಷ ಎಂದರೆ, ಬಸ್ ಏರಲು ಜನರೇ ಲಿಸ್ಟ್ ಮಾಡಿದ್ದಾರೆ. ಒಂದು ಬಸ್ನಲ್ಲಿ 30 ಜನರು ಕೂರಲು ಅವಕಾಶ ಇದೆ.
ಕಾರ್ಮಿಕರಿಗೆ ತಮ್ಮ ತಮ್ಮ ಸ್ಥಳಗಳಿಗೆ ತೆರಳಲು ಬಸ್ ವ್ಯವಸ್ಥೆ ಮಾಡಿರುವುದಾಗಿ ಸರ್ಕಾರ ಹೇಳಿತ್ತು. ಆದರೆ, ಇದಕ್ಕೆ ಹೆಚ್ಚಿನ ದರ ವಿಧಿಸಲಾಗುತ್ತಿದೆ ಎನ್ನುವ ಮಾತು ಕೇಳಿ ಬಂದಿತ್ತು. ಬಸ್ ಗಳ ಟಿಕೆಟ್ ದರವನ್ನು ನಿಗದಿಗೊಳಿಸಿದ ಸರ್ಕಾರಕ್ಕೆ ವಿರೋಧ ಪಕ್ಷದ ನಾಯಕರು ಮಾತಿನ ಛಾಟಿ ಬೀಸಿದರು. ತಕ್ಷಣ ಎಚ್ಚೆತ್ತ ರಾಜ್ಯ ಸರ್ಕಾರವು ಮೂಲ ದರವನ್ನು ನಿಗದಿಪಡಿಸುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದರು.