ದೆಹಲಿ ಹಿಂಸಾಚಾರ: ದ್ವೇಷ ಭಾಷಣದ ಪ್ರಕರಣವನ್ನು ವಿಚಾರಣೆ ನಡೆಸುವಂತೆ ದೆಹಲಿ ಹೈಕೋರ್ಟ್ಗೆ ಸುಪ್ರೀಂ ಸೂಚನೆ
ದೆಹಲಿ ಹಿಂಸಾಚಾರ: ದ್ವೇಷ ಭಾಷಣ ಮನವಿಯನ್ನು ಆಲಿಸುವಂತೆ ಸುಪ್ರೀಂ ಕೋರ್ಟ್ ಹೈಕೋರ್ಟ್ಗೆ ಶುಕ್ರವಾರ ಕೇಳಿದೆ
ಬಿಜೆಪಿ ಮುಖಂಡರಾದ ಅನುರಾಗ್ ಠಾಕೂರ್, ಕಪಿಲ್ ಮಿಶ್ರಾ, ಅಭಯ್ ವರ್ಮಾ ಮತ್ತು ಪರ್ವೇಶ್ ವರ್ಮಾ ವಿರುದ್ಧ ದ್ವೇಷ ಹರಡುವಂತಹ ಭಾಷಣಗಳನ್ನು ಮಾಡಿದ್ದಕ್ಕಾಗಿ ಎಫ್ಐಆರ್ ದಾಖಲಿಸಬೇಕು ಎಂದು ದೆಹಲಿ ಗಲಭೆಯಿಂದ ನೊಂದವರು ಮನವಿ ಮಾಡಿದ್ದರು.
ಸಂತ್ರಸ್ತರ ಮನವಿಯನ್ನು ವಿಚಾರಣೆ ನಡೆಸುವಂತೆ ದೆಹಲಿ ಹೈಕೋರ್ಟ್ಗೆ ಶುಕ್ರವಾರ ಸುಪ್ರೀಂ ಕೋರ್ಟ್ ಸೂಚಿಸಿದೆ.
ದೆಹಲಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಧಿರುಭಾಯಿ ನಾರನ್ಭಾಯ್ ಪಟೇಲ್ ಮತ್ತು ಸಿ ಹರಿಶಂಕರ್ ಅವರ ದ್ವಿಸದಸ್ಯ ನ್ಯಾಯಪೀಠವು ಕಳೆದ ವಾರ ಈ ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 13 ಕ್ಕೆ ಮುಂದೂಡಿದೆ.
ದ್ವೇಷದ ಭಾಷಣಗಳ ವಿರುದ್ಧ ಎಫ್ಐಆರ್ ದಾಖಲಿಸುವ ಬೇಡಿಕೆಯನ್ನು ಹಾಗೂ ಜಾಮಿಯಾ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಆಲಿಸುವಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಗಲಭೆ ಸಂತ್ರಸ್ತರ ಮನವಿಯನ್ನು ಆಲಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ಹಾಗೂ ನ್ಯಾಯಮೂರ್ತಿಗಳಾದ ಬಿಆರ್ ಗವಾಯ್, ಸೂರ್ಯಕಾಂತ್ ಅವರ ತ್ರಿಸದನ ಪೀಠವು ದೆಹಲಿಯಲ್ಲಿ ಶಾಂತಿ ನೆಲೆಸುವುದಕ್ಕಾಗಿ ಮುಂದಿರುವ ಆಯ್ಕೆಗಳು ಹಾಗೂ ರಾಜಕೀಯ ಮುಖಂಡರ ಭಾಷಣಗಳನ್ನು ಆಲಿಸುವಂತೆ ದೆಹಲಿ ಹೈಕೋರ್ಟ್ಅನ್ನು ಒತ್ತಾಯಿಸಿದೆ.
ಎಫ್ಐಆರ್ ದಾಖಲಿಸಲು ವಾತಾವರಣವು ಅನುಕೂಲಕರವಾಗಿದೆಯೇ ಎಂದು ಕೋರ್ಟ್ ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ಸಾಲಿಸಿಟರ್ ಜನರಲ್ ತುಷಾರ್ ಮಹ್ತಾ,”ಒಂದು ಅಥವಾ ಎರಡು ಭಾಷಣಗಳು ಗಲಭೆಗೆ ಕಾರಣವಾಗಬಹುದು ಎಂದು ನಂಬುವುದು ತಪ್ಪು.” ಪರಿಸ್ಥಿತಿ ಅನುಕೂಲಕರವಾಗಿಲ್ಲ. ಕಳೆದ ಕೆಲವು ದಿನಗಳಲ್ಲಿ ದೆಹಲಿಯಲ್ಲಿ ಯಾವುದೇ ಹಿಂಸಾಚಾರ ನಡೆದಿಲ್ಲವಾದರೂ, ಎಫ್ಐಆರ್ ದಾಖಲಿಸಿದರೆ ಅದು ಹೊಸ ಹಿಂಸಾಚಾರಕ್ಕೆ ಕಾರಣವಾಗಬಹುದು. “ಎರಡೂ ಕಡೆಯವರು ದ್ವೇಷದ ಭಾಷಣಗಳಲ್ಲಿ ಪಾಲ್ಗೊಂಡಿದ್ದಾರೆ. ನಾವು ಎರಡೂ ಕಡೆಯ ನಾಯಕರ ವಿರುದ್ಧ ಎಫ್ಐಆರ್ ದಾಖಲಿಸಿದರೆ ಅದು ಶಾಂತಿಗೆ ಭಂಗ ತರುತ್ತದೆ.” ಎಂದು ಸಿಜೆಐಗೆ ತಿಳಿಸಿದ್ದಾರೆ.
ಆದಾಗ್ಯೂ,: “ಎಫ್ಐಆರ್ನಿಂದ ಯಾರೂ ಪೂರ್ವಾಗ್ರಹ ಪೀಡಿತರಾಗಿಲ್ಲ. ಯಾರೂ ಜೈಲಿಗೆ ಹೋಗುವುದಿಲ್ಲ. ನೀವು ಎರಡೂ ಕಡೆ ವಿರುದ್ಧ ಎಫ್ಐಆರ್ಗಳನ್ನು ತಕ್ಕಮಟ್ಟಿಗೆ ನೋಂದಾಯಿಸಿಕೊಂಡರೆ ಯಾವುದೇ ತೊಂದರೆ ಉಂಟಾಗುವುದಿಲ್ಲ” ಎಂದು ಸಿಜೆಐ ಹೇಳಿದರು. ಆದರೆ, ‘ಎಫ್ಐಆರ್ಗಳನ್ನು ನೋಂದಾಯಿಸುವ ಯಾವುದೇ ಪ್ರಯತ್ನವು ಹಿಂಸಾಚಾರಕ್ಕೆ ನಾಂದಿ ಹಾಡುತ್ತದೆ’ ಎಂದು ಮೆಹ್ತಾ ಒತ್ತಾಯಿಸಿದರು.
“ಯಾವುದೇ ಎಫ್ಐಆರ್ಗಳನ್ನು ದಾಖಲಿಸಲಾಗಿಲ್ಲ ಎಂಬ ಅಭಿಪ್ರಾಯ ಸುಳ್ಳು. ಗಲಭೆಗೆ ಸಂಬಂಧಿಸಿದಂತೆ ನಾವು 268ಕ್ಕೂ ಹೆಚ್ಚು ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ಪೊಲೀಸರು 7,000 ದ್ವೇಷ ಭಾಷಣಗಳ ವೀಡಿಯೊಗಳನ್ನು ಸಂಗ್ರಹಿಸಿದ್ದಾರೆ. ಆದರೆ, ಎಲ್ಲರ ಮೇಲೂ ಎಫ್ಐಆರ್ ಸಲ್ಲಿಸಲು ಸಮಯ ಸರಿಯಾಗಿಲ್ಲ” ಎಂದು ಅವರು ಹೇಳಿದ್ದಾರೆ.
ಅರ್ಜಿದಾರ ಹರ್ಷ ಮಾಂಡರ್ ಅವರು ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ‘ಜನರನ್ನು ಪ್ರಚೋದಿಸಿದ್ದಾರೆ’ ಮತ್ತು ಅದು ಗಲಭೆಗೆ ಕಾರಣವಾಯಿತು ಎಂದು ಮೆಹ್ತಾ ಆರೋಪಿಸಿದರು. ಅವರ ಅರೋಪವನ್ನು ನಿರಾಕರಿಸಿದ ಮಾಂಡರ್ ಅವರ ವಕೀಲ ಕರುಣಾ ನಂದಿ, ‘ಮಾಂಡರ್ ಅಮೆರಿಕಾದಲ್ಲಿದ್ದಾರೆ’ ಎಂದು ಹೇಳಿದರು. ವಾದಗಳನ್ನು ಆಲಿಸಿದ ನಂತರ ಸಿಜೆಐ ಹೆಚ್ಚಿನ ವಿಚಾರಣೆಗೆ ಪಟ್ಟಿಮಾಡಿದ್ದು, ಅವರ ಭಾಷಣದ ವಿಡಿಯೋವನ್ನು ಕೋರಿದೆ.
ಬಿಪಿಜೆ ಮುಖಂಡ ಕಪಿಲ್ ಮಿಶ್ರಾ ಅವರ ಭಾಷಣವು ದೆಹಲಿ ಹಿಂಸಾಚಾರಕ್ಕೆ ಕಾರಣವಾಗಿದ್ದು, 48 ಜನರನ್ನು ಬಲಿ ತೆಗೆದುಕೊಂಡಿದೆ. ನೂರಾರು ಜನರು ಗಾಯಗೊಂಡಿದ್ದಾರೆ ಮತ್ತು ಕನಿಷ್ಠ 20,000 ಮಂದಿ ನಿರಾಶ್ರಿತರಾಗಿದ್ದಾರೆ. ಅವರ ವಿರುದ್ಧ ಎಫ್ಐಆರ್ ದಾಖಲಿಸಲು ಹಿಂದೇಟು ಹಾಕಲಾಗುತ್ತಿದೆ ಎಂದು ಅರ್ಜಿದಾರರ ಸಲಹೆಗಾರ ಕಾಲಿನ್ ಗೊನ್ಸಾಲ್ವೆಸ್ ಆರೋಪಿಸಿದ್ದಾರೆ.
ಕಪಿಲ್ ಮಿಶ್ರಾ, ಠಾಕೂರ್ ಮತ್ತು ವರ್ಮಾಸ್ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಅವರು ಕೋರಿದ್ದಾರೆ. ಮಿಶ್ರಾ ಅವರ ಭಾಷಣದ ವಿಷಯ ಮತ್ತು ಉದ್ದೇಶವು ದೆಹಲಿ ಗಲಬೆಗೆ ಕಾರಣವಾಗಿದೆ ಎಂದು ಸಿಜೆಐ ಒಪ್ಪಿಕೊಂಡಿದೆ.
ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೌರತ್ವ ತಿದ್ದುಪಡಿ ಕಾಯಿದೆಯನ್ನು ಬೆಂಬಲಿಸಿ ನಡೆದ ಪ್ರತಿಭಟನೆ ನಡೆಸಿದ ಕಾರ್ಯಕರ್ತರೇ ಕಾರಣ ಎಂಬುದು ತಿಳಿದಿರುವ ವಿಚಾರ. ಆದರೆ, ಇದೂವರೆಗೂ ಸಿಎಎ ಬೆಂಬಲಿತ ಕಾರ್ಯಕರ್ತರ ವಿರುದ್ಧ ಒಂದೂ ಎಫ್ಐಆರ್ ದಾಖಲಾಗಿಲ್ಲ. ಆದರೆ, ಶಾಂತಿಯುತವಾಗಿ ಸಿಎಎ ವಿರುದ್ಧ ಪ್ರತಿಭಟನೆ ನಡೆಸಿದ್ದವರ ಮೇಲೆ ಎಫ್ಐಆರ್ ದಾಖಲಿಸಿ, ಸರಣಿಯಾಗಿ ಬಂಧಿಸಲಾಗುತ್ತಿದೆ.
ಜಾಮಿಯಾ ವಿವಿ, ಜೆಎನ್ಯು ವಿವಿಗಳಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಯಾವುದೇ ಹಿಂಸಾಚಾರ ನಡೆದಿರಲಿಲ್ಲ. ಆದರೆ, ಪ್ರತಿಭಟನೆಯಲ್ಲಿ ಪಾಲ್ಗೊಂಡವರ ಮೇಲೆ ಎಬಿವಿಪಿ ಗೂಂಡಾಗಳು ದಾಳಿ ಮಾಡಿದ್ದರು. ಪ್ರತಿಭಟನಾ ಸಂದರ್ಭದಲ್ಲಿ ಪೊಲೀಸರು ಸಿಎಎ ಬೆಂಬಲಿತರಿಗೆ ಬೆಂಬಲಿಸಿ ಹಿಂಸಾಚಾರಕ್ಕೆ ನೆರವು ನೀಡಿದ್ದ ವಿಡಿಯೋ ಫೋಟೋಗಳು ಹರಿದಾಡಿದ್ದವು.
ಪ್ರಭುತ್ವ ಪ್ರಚೋದಿತ ಹಿಂಸಾಚಾರದಲ್ಲಿ ಬಲಿಯಾದವರ ವಿರುದ್ಧವೇ ಎಫ್ಐಅರ್ಗಳನ್ನು ದಾಖಲಿಸಲಾಗುತ್ತಿದೆ. ಸಿಎಎ ವಿರೋಧಿ ಕಾರ್ಯಕರ್ತರನ್ನು ಬಂಧಿಸಲಾಗುತ್ತಿದೆ. ಈಗಾಗಲೇ ಬಂಧಿಸಲಾಗಿರುವ ನಾಲ್ಕು ತಿಂಗಳ ಗರ್ಭಿಣಿ ಸಪೂರಾಗೆ ಜಾಮೀನು ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.