ಯೇಸು ಪ್ರತಿಮೆ ವಿಚಾರದಲ್ಲಿ ಬಿಜೆಪಿ ಏನಾದ್ರೂ ಮಾಡಲಿ, ಅದು ಭಕ್ತನಿಗೂ ಭಗವಂತನಿಗೂ ಬಿಟ್ಟ ವಿಚಾರ: ಡಿಕೆಶಿ

ಯೇಸು ಪ್ರತಿಮೆಯನ್ನು ಎರಡು ವರ್ಷದ ಹಿಂದೆ ಕಟ್ಟಲು ಹೋದಾಗ ನಾನೇ ಅವರನ್ನು ತಡೆದು ಕಾನೂನುಬದ್ಧವಾಗಿ ಮಾಡುವಂತೆ ಮಾರ್ಗದರ್ಶನ ನೀಡಿದೆ. ನಂತರ ನನ್ನ ಕೈಲಾದ ಸಹಾಯ ನಾನು ಮಾಡಿದೆ. ಉಳಿದದ್ದು ಭಕ್ತನಿಗೂ ಹಾಗೂ ಭಗವಂತನಿಗೆ ಬಿಟ್ಟ ವಿಚಾರ. ಬಿಜೆಪಿಯವರು ಏನು ಬೇಕೋ ಅದನ್ನು ಮಾಡಿಕೊಳ್ಳಲಿ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಗುರುವಾರ ತಮ್ಮ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಹೇಳಿದ್ದಿಷ್ಟು…

‘ರಾಜ್ಯದಲ್ಲಿ ಏನೇನಾಗುತ್ತಿದೆ ಅಂತಾ ಕೇವಲ ರಾಜ್ಯದ ಜನರು ಮಾತ್ರ ನೋಡುತ್ತಿಲ್ಲ. ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಜನರು ಗಮನಹರಿಸುತ್ತಿದ್ದಾರೆ. ವಿಶ್ವಕ್ಕೆ ಬಸವ ತತ್ವವನ್ನು ಸಾರಬೇಕು ಎಂದು ನಾವೇ ಹೇಳುತ್ತೇವೆ. ಅದನ್ನು ನಾವೇ ಪಾಲಿಸದಿದ್ದರೆ ಹೇಗೆ. ಅಧಿಕಾರ ಇದ್ದಾಗ ಉತ್ತಮ ಕಾರ್ಯ ಮಾಡುವ ಬದಲು, ಯೇಸು ಪ್ರತಿಮೆ ವಿಚಾರದಲ್ಲಿ ನಮ್ಮ ಅಶೋಕ ಚಕ್ರವರ್ತಿ ಸಾಹೇಬ್ರು, ಅಶ್ವಥ್ ನಾರಾಯಣ್, ಈಶ್ವರಪ್ಪ, ರೇಣುಕಾಚಾರ್ಯ ಅವರು ತಮಗೆ ಬೇಕಾದಂತೆ ಹೇಳುತ್ತಿದ್ದಾರೆ. ಅವರಿಗೆ ಏನುಬೇಕೋ ಹೇಳಿಕೊಳ್ಳಲಿ. ಮಾತನಾಡುವವರನ್ನು ನಾನು ಬೇಡಾ ಎಂದು ಹೇಳುವುದಕ್ಕೆ ಆಗುತ್ತದಾ?
ಅವರಿಗೆ ಅಧಿಕಾರ ಇದೆ. ಅದನ್ನು ಅವರು ಒಳ್ಳೆಯದಕ್ಕಾದರೂ ಬಳಸಬಹುದು, ಕೆಟ್ಟದಕ್ಕಾದರೂ ಬಳಸಬಹುದು. ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ.

ಎರಡು ವರ್ಷಗಳ ಹಿಂದೆಯೇ ಏಸು ಪ್ರತಿಮೆ ಮಾಡಲು ಮುಂದಾಗಿದ್ದರು. ನಾನೇ ಅಲ್ಲಿಗೆ ಹೋದಾಗ ಕೇಳಿದೆ. ಹಾಗೆಲ್ಲಾ ಜಾಗ ಕಾನೂನುಬದ್ಧವಾಗಿಲ್ಲದಿದ್ದರೆ ಪ್ರತಿಮೆ ಮಾಡಲು ಹೋಗಬೇಡಿ. ಭವಿಷ್ಯದಲ್ಲಿ ತೊಂದರೆ ಆಗುತ್ತದೆ ಅಂತಾ ತಡೆದು ಜಾಗ ಕಾನೂನುಬದ್ಧವಾಗಿ ಇದೆಯೇ ಇಲ್ಲವೇ ಎಂದು ಪರಿಶೀಲಿಸಿ, ಅದಕ್ಕೆ ಬೇಕಾದ ನೆರವನ್ನು ನಾನು ಮಾಡಿದ್ದೇನೆ.

ಆ ಜಾಗಕ್ಕೆ ಅನೇಕ ವರ್ಷಗಳ ಚರಿತ್ರೆ ಇದೆ. ಅಲ್ಲಿ ಬೇಸುವಿನ ವಿಗ್ರಹ, ಶಿಲುಬೆ ಎಲ್ಲ ಮುಂಚೆಯಿಂದಲೂ ಇದೆ. ಅಲ್ಲಿ ಜನ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ. ಪ್ರತಿಮೆ ನಿರ್ಮಾಣ ವಿಚಾರ ಒಳ್ಳೆಯ ಕೆಲಸ. ಹೀಗಾಗಿ ಅವರಿಗೆ ಮಾರ್ಗದರ್ಶನ ನೀಡಿದೆ. ನಾನು ಏನು ಮಾಡಬೇಕೋ ಮಾಡಿದ್ದೇನೆ. ಮಿಕ್ಕಿದ್ದು ಭಕ್ತನಿಗೂ ಭಗವಂತನಿಗೂ ಬಿಟ್ಟ ವಿಚಾರ. ಯಾವುದೇ ಧರ್ಮ ಇರಲಿ. ಅವರಿಗೆ ಏನು ಬೇಕೋ ಅದನ್ನು ಮಾಡಲಿ.

ರೆವೆನ್ಯೂ ಮಿನಿಸ್ಟರ್ ಸಾಹೇಬ್ರು ಅಶೋಕಣ್ಣಾ ಅವರು ಈ ವಿಚಾರದಲ್ಲಿ ತನಿಖೆ ಮಾಡುತ್ತೇವೆ, ವರದಿ ಬಂದ ನಂತರ ಕ್ರಮ ಕೈಗೊಳ್ಳುತ್ತೇವೆ ಅಂತಾ ಹೇಳಿದ್ದಾರೆ. ಅಲ್ಲಿ ತಹಶೀಲ್ದಾರರನ್ನು ವರ್ಗಾವಣೆ ಮಾಡಿದ್ದಾರೆ. ಅವರು ಯಾರನ್ನು ಬೇಕಾದರೂ ಅಲ್ಲಿಗೆ ತಂದು ಕೂರಿಸಲು ಅದರ ಬಗ್ಗೆ ಚಿಂತಿಸಲು ನನಗೆ ಸಮಯವಿಲ್ಲ. ನಾನುಂಟು ಹಾಗೂ ನಮ್ಮ ಜನ ಉಂಟು. ಆ ಬಗ್ಗೆ ಮಾತ್ರ ನಾನು ಯೋಚಿಸುತ್ತೇನೆ. ನಿನ್ನೆಯೂ ಸಭೆ ನಡೆಸಿದ್ದಾರಂತೆ. 13ನೇ ತಾರೀಕು ಪ್ರತಿಭಟನೆ ಮಾಡುತ್ತಾರಂತೆ, ಮಾಡಲಿ.

ಬಿಜೆಪಿ ಆರೆಸ್ಸೆಸ್ ಎಂಬುದು ಬೇಡ. ರಾಜ್ಯದಲ್ಲಿ ಒಂದು ಸರ್ಕಾರ ಇದೆ. ಈ ರಾಜ್ಯದಲ್ಲಿ ಎಷ್ಟು ಮಠಗಳು, ಮಸೀದಿಗಳು, ಚರ್ಚ್ ಗಳು, ಗುರುದ್ವಾರ, ಬೌದ್ಧ ಹಾಗೂ ಜೈನ ಧರ್ಮದ ಸಂಘಗಳಿಗೆ ಯಾರು, ಯಾವ ಬೆಟ್ಟದಲ್ಲಿ ಯಾರಿಗೆ ಎಷ್ಟು ಜಾಗ ನೀಡಿದ್ದಾರೆ ಅಂತಾ ಪಟ್ಟಿ ತರಿಸಿಕೊಳ್ಳಲಿ. ನಂತರ ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲಿ. ಈ ಶಿವಕುಮಾರ್ ತಪ್ಪು ಮಾಡಿದ್ದರೆ ಶಿಕ್ಷೆ ನೀಡಿಲಿ, ಬೇರೆ ಯಾರಾದರೂ ತಪ್ಪು ಮಾಡಿದ್ದರೆ ಅವರಿಗೂ ಶಿಕ್ಷೆ ನೀಡಲಿ. ಅವರಿಗಿರುವ ಪರಮಾಧಿಕಾರವನ್ನು ಯಾರಾದರೂ ಕಿತ್ತುಕೊಳ್ಳಲು ಆಗುತ್ತಾ. ನಾನು ಕಿತ್ತುಕೊಳ್ಳುವ ಪ್ರಯತ್ನವನ್ನೂ ಮಾಡಲ್ಲ, ಆ ಬಗ್ಗೆ ಪ್ರತಿಕ್ರಿಯೆಯನ್ನು ನೀಡುವುದಿಲ್ಲ.

ನನ್ನ ಕ್ಷೆತ್ರದ ಜನರಲ್ಲಿ ಒಬ್ಬ ದೇವಸ್ಥಾನ ಕಟ್ಟಬೇಕು ಅಂತಾ ಬಂದ್ರೆ ಮತ್ತೊಬ್ಬ ಚರ್ಚ್ ಕಟ್ಟಬೇಕು ಅಂತಾ ಬರ್ತಾರೆ. ನಾನು ನನ್ನ ಕೈಲಾದ ಮಟ್ಟಿಗೆ ಇಟ್ಟಿಗೆಯನ್ನೋ, ಕಿಟಕಿಯನ್ನೋ, ಬಾಗಿಲನ್ನೋ ನೀಡುತ್ತೇನೆ. ಶಾಲೆ ಕಟ್ಟುತ್ತೇನೆ ಅಂತಾ ಬಂದರೆ ಅವರಿಗೆ ಕುರ್ಚಿ ಕೊಡಿಸೋದೋ, ಹೀಗೆ ನಮ್ಮ ಕೆಲಸ ನಾವು ಮಾಡಿಕೊಂಡು ಬರುತ್ತೀವಿ.

ಈ ವಿಚಾರದಲ್ಲಿ ನಮ್ಮ ಪಕ್ಷದ ಯಾವ ನಾಯಕರೂ ಮಾತನಾಡುತ್ತಿಲ್ಲ ಎಂಬ ಪ್ರಶ್ನೆ ಬರುವುದಿಲ್ಲ. ಅವರು ಮಾತನಾಡುವ ಅಗತ್ಯ ಏನಿದೆ. ನನಗೆ ಧ್ವನಿ ಇಲ್ಲ ಅಥವಾ ನನಗೆ ಯಾವುದಾದರೂ ನಾಯಕರ ಬೆಂಬಲವಾಗಿ ನಿಂತು ಮಾತನಾಡಲಿ ಎಂದು ನಾನು ಕೇಳಿಲ್ಲ. ಈ ವಿಚಾರದಲ್ಲಿ ಅನಗತ್ಯ ಗೊಂದಲ ಬೇಡ.’
ಇನ್ನು ಪಕ್ಷದ ಪ್ರಮುಖ ಹುದ್ದೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನನಗೆ ಯಾವುದೇ ಗಿಫ್ಟ್ ಬೇಡ. ನನಗೆ ಯಾವುದೇ ಆತುರ ಇಲ್ಲ. ನೀವು ಕೂಡ ನನ್ನ ತಲೆ ಕೆಡಿಸಬೇಡಿ. ಅದರ ಬಗ್ಗೆ ಮಾತನಾಡಬೇಡಿ. ನಾನು ಹೈಕಮಾಂಡ್ ಬಳಿ ಏನೂ ಕೇಳುವುದಕ್ಕೆ ಹೋಗಿಲ್ಲ. ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಬೆಳಗ್ಗೆಯಿಂದ ಸಾಯಂಕಾಲದವರೆಗೆ ಬರೋ ನೋಟೀಸ್ ಗಳಿಗೆ ಉತ್ತರ ಕೊಡುವುದೇ ಸಾಕಾಗಿದೆ.

ಜಾರ್ಖಂಡ್ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸುವಂತಿ ಆಹ್ವಾನ ಬಂದಿತ್ತು. ಕಾರ್ಯಕ್ರಮಕ್ಕೆ ಹೋದೆ, ಅವರಿಗೆ ಶುಭಕೋರಿದೆ. ಮತ್ತೆ ವಾಪಸ್ ಬಂದಿದ್ದೇನೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights