ರಾಜಕೀಯ ವೈಷಮ್ಯಕ್ಕೆ ಎತ್ತಿನಗಾಡಿ ಭಸ್ಮ : ‘ಕೈ’ ಪರ ಪ್ರಚಾರ ಮಾಡಿದ್ದೇ ತಪ್ಪಾಯ್ತಾ..?
ಕೆ.ಆರ್.ಪೇಟೆ ಕ್ಷೇತ್ರದ ರಾಜಕೀಯ ವೈಷಮ್ಯಕ್ಕೆ ಎತ್ತಿನಗಾಡಿ ಭಸ್ಮವಾದ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕಟ್ಟೆ ಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೌದು… ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದ ಕಾರಣಕ್ಕೆ ಎತ್ತಿನಗಾಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಸೋಮನಾಥಪುರ ಗ್ರಾಮದ ಜಯರಾಂ ಎಂಬುವರಿಗೆ ಸೇರಿದ ಎತ್ತಿನ ಗಾಡಿ ಸುಟ್ಟು ಕರಕಲಾಗಿದೆ.
ಕಟ್ಟೆ ಕ್ಯಾತನಹಳ್ಳಿ ಗ್ರಾಮದ ಧನಂಜಯಗೆ ಸೇರಿದ ಎತ್ತಿನಗಾಡಿ ಎಂದು ಭಾವಿಸಿ ಸೋಮನಾಥಪುರದ ಜಯರಾಂ ಎನ್ನುವವರ ಎತ್ತಿನ ಗಾಡಿಗೆ ಬೆಂಕಿ ಹಚ್ಚಿದ್ದಾರೆ. ಧನಂಜಯರ ಜಮೀನಿನಲ್ಲಿ ಕಬ್ಬು ತುಂಬುವ ಸಲುವಾಗಿ ಜಯರಾಂ ಕಟ್ಟೆ ಕ್ಯಾತನಹಳ್ಳಿಗೆ ಎತ್ತಿನಗಾಡಿ ತಂದಿದ್ದರು. ಧನಂಜಯ ಕಾಂಗ್ರೆಸ್ ಪರ ಪ್ರಚಾರ ನಡೆಸುತ್ತಿದ್ದಾರೆಂದು ಜಯರಾಂ ಅವರ ಎತ್ತಿನಗಾಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.
ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.