ವೈಯಕ್ತಿಕ ಅಸುರಕ್ಷತೆ; ಮಹಿಳಾ IAS ಅಧಿಕಾರಿ ರಾಜೀನಾಮೆ
ಐಎಎಸ್ ಅಧಿಕಾರಿ ರಾಣಿ ನಗರ್ (34) ಎಂಬುವವರು ‘ಸರ್ಕಾರಿ ಕರ್ತವ್ಯದಲ್ಲಿ ವೈಯಕ್ತಿಕ ಸುರಕ್ಷತೆ’ ಕಾರಣ ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಣಿ ನಗರ್ ಪ್ರಸ್ತುತ ಆರ್ಕೈವ್ಸ್ ವಿಭಾಗದ ನಿರ್ದೇಶಕಿ ಹಾಗೂ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಹೆಚ್ಚುವರಿ ನಿರ್ದೇಶಕಿಯಾಗಿ ಉಸ್ತುವಾರಿ ವಹಿಸಿಕೊಂಡಿದ್ದರು.
ಹರಿಯಾಣ ಕೇಡರ್ನ 2014 ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿದ್ದ ರಾಣಿ ನಗರ್, ಸರ್ಕಾರಿ ಕರ್ತವ್ಯದಲ್ಲಿ ವೈಯಕ್ತಿಕ ಸುರಕ್ಷತೆ ಇಲ್ಲದಿರುವುದೇ ತನ್ನ ರಾಜಿನಾಮೆಗೆ ಕಾರಣ ಎಂದು ಉಲ್ಲೇಖಿಸಿದ್ದಾರೆ.
ರಾಣಿ ನಗರ್ ಅವರು ಈ ಹಿಂದೆ ಲಾಕ್ಡೌನ್ ತೆಗೆದುಹಾಕಿದ ನಂತರ ರಾಜೀನಾಮೆ ನೀಡುವುದಾಗಿ ಇತ್ತೀಚೆಗೆ ತನ್ನ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದ್ದರು. ಅವರು ತಮ್ಮ ರಾಜೀನಾಮೆಯನ್ನು ರಾಜ್ಯ ಮುಖ್ಯ ಕಾರ್ಯದರ್ಶಿ ಕೇಶ್ನಿ ಆನಂದ್ ಅರೋರಾ ಅವರಿಗೆ ಕಳುಹಿಸಿದ್ದು, ಅದನ್ನು ಕೇಂದ್ರ ಸರ್ಕಾರಕ್ಕೆ ರವಾನಿಸುವಂತೆ ಮನವಿ ಮಾಡಿದ್ದಾರೆ.
ರಾಣಿ ಅವರ ಪತ್ರವನ್ನು ಮುಖ್ಯ ಕಾರ್ಯದರ್ಶಿ ಕಚೇರಿಯಲ್ಲಿ ಸ್ವೀಕರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ ಅವರು ತಮ್ಮ ರಾಜೀನಾಮೆ ಪ್ರತಿಗಳನ್ನು ರಾಷ್ಟ್ರಪತಿ, ಪ್ರಧಾನಿ, ಹರಿಯಾಣ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗೆ ಇ-ಮೇಲ್ ಮೂಲಕ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
“ಈ ರಾಜೀನಾಮೆಯನ್ನು ಸಲ್ಲಿಸಲು ಕಾರಣ ಸರ್ಕಾರಿ ಕರ್ತವ್ಯದ ವೈಯಕ್ತಿಕ ಸುರಕ್ಷತೆ” ಎಂದು ಅವರು ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಪತ್ರದಲ್ಲಿ “ಭಾರತೀಯ ಆಡಳಿತ ಸೇವೆಯ ಹುದ್ದೆಗೆ ನಾನು ರಾಜೀನಾಮೆ ನೀಡುವುದನ್ನು ತಕ್ಷಣದಿಂದ ಜಾರಿಗೆ ತರುತ್ತೇನೆ, ಅದು ಮೇ 4, 2020 ರಿಂದ ಮುಂಜಾನೆ ಜಾರಿಗೆ ಬರುತ್ತದೆ” ಎಂದು ಅವರು ಬರೆದಿದ್ದಾರೆ. ಈ ಪತ್ರವನ್ನು ಅವರ ಫೇಸ್ಬುಕ್ ಪುಟದಲ್ಲಿಯೂ ಪೋಸ್ಟ್ ಮಾಡಲಾಗಿದ್ದು.
______________________________________________________________________
ಇದನ್ನೂ ಓದಿ: ಅಸಿಸ್ಟೆಂಟ್ ಕಲೆಕ್ಟರ್ ಆಗಿ ಸೇವೆಗೆ ಸೇರಿದ ಕೇರಳದ ಮೊದಲ ಬಡುಕಟ್ಟು ಹುಡುಗಿ!
______________________________________________________________________
ಇದರ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ ರಾಜೀನಾಮೆಯನ್ನು “ಆಘಾತಕಾರಿ ಘಟನೆ” ಎಂದು ಹೇಳಿದ್ದಾರೆ. ರಾಜ್ಯದ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುರ್ಜೆವಾಲಾ “ಮಹಿಳಾ ಐಎಎಸ್ ಅಧಿಕಾರಿ ತಾನು ಅಸುರಕ್ಷಿತ ಎಂದು ಭಾವಿಸಿ ರಾಜೀನಾಮೆ ನೀಡಿದ್ದಾರೆ” ಎಂದು ಹೇಳಿದ್ದಾರೆ.
“ಮಹಿಳಾ ಐಎಎಸ್ ಅಧಿಕಾರಿ ಸರ್ಕಾರಿ ಕರ್ತವ್ಯದಲ್ಲಿ ವೈಯಕ್ತಿಕ ಸುರಕ್ಷತೆಯನ್ನು ಕಾರಣವೆಂದು ಉಲ್ಲೇಖಿಸಿ ರಾಜೀನಾಮೆ ನೀಡಿದರೆ, ಹರಿಯಾಣದಲ್ಲಿ ಯಾರು ಸುರಕ್ಷಿತವಾಗಿರುತ್ತಾರೆ. ಇದು ನಿಮ್ಮ ಸರ್ಕಾರದ ಮೇಲಿನ ವಿಶ್ವಾಸವಿಲ್ಲವೇ, ಇದು ನಿಮ್ಮ ವೈಫಲ್ಯಕ್ಕೆ ಜೀವಂತ ಪುರಾವೆಯಲ್ಲವೇ” ಎಂದು ಸುರ್ಜೆವಾಲಾ ಮುಖ್ಯಮಂತ್ರಿ ಖಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಣಿ ನಗರ್ ಅವರು ಜೂನ್ 2018 ರಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಟ್ಟದ ಅಧಿಕಾರಿಯೊಬ್ಬರು ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಈ ಆರೋಪಗಳ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಿತ್ತು, ಆದರೆ ಅಧಿಕಾರಿಯ ವಿರುದ್ಧ ಆರೋಪಗಳು ಸಾಬಿತಾಗಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ತನ್ನ ಫೇಸ್ಬುಕ್ ಪುಟದ ಹಿಂದಿನ ಪೋಸ್ಟ್ನಲ್ಲಿ ಹಿರಿಯ ಅಧಿಕಾರಿ ವಿರುದ್ಧ ಹಲವಾರು ದೂರುಗಳಿದ್ದರೂ, ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿಕೊಂಡಿದ್ದರು.
ಕಳೆದ ವರ್ಷ ಅವರು ಅಧಿಕಾರಿಯ ವಿರುದ್ಧ ನ್ಯಾಯಾಲಯದಲ್ಲಿ ದೂರು ನೀಡಿದ್ದರು ಮತ್ತು ಅವರ ಹಾಗೂ ಅವರ ಸಹೋದರಿಯ ಜೀವಕ್ಕೆ ಬೆದರಿಕೆ ಇದೆ ಎಂದು ಉಲ್ಲೇಖಿಸಿದ್ದರು.
ಡಿಸೆಂಬರ್ 2017 ರಲ್ಲಿ, ಸಿರ್ಸಾ ಜಿಲ್ಲೆಯ ದಬಾವಲಿಯ ಉಪವಿಭಾಗ ಮ್ಯಾಜಿಸ್ಟ್ರೇಟ್ ಆಗಿ ನೇಮಕಗೊಂಡ ಅವರ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.
ರಾಣಿ ತನ್ನ ಫೇಸ್ಬುಕ್ ಪುಟದಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಅವರ ದೂರಿಗೆ ಪೊಲೀಸರು “ತ್ವರಿತ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ” ಎಂದು ಆರೋಪಿಸಿದ್ದಾರೆ.