ಸದ್ಗುರು ಶ್ರೀ ಜಗ್ಗಿ ವಾಸುದೇವ್ ಅವರ ‘ಕಾವೇರಿ ಕೂಗು’ ಅಭಿಯಾನಕ್ಕೆ ಚಾಲನೆ…
ಜೀವನದಿಯಾದ ಕಾವೇರಿಯ ರಕ್ಷಣೆ ಹಾಗೂ ಪೂರ್ಣ ವೈಭವದಿಂದ ಹರಿಯುವಂತೆ ಮಾಡಲು ಸದ್ಗುರು ಶ್ರೀ ಜಗ್ಗಿ ವಾಸುದೇವ್ ಅವರ ಕಾವೇರಿ ಕೂಗು ಅಭಿಯಾನಕ್ಕೆ ಕಾವೇರಿಯ ಉಗಮಸ್ಥಾನ ತಲಕಾವೇರಿಯಲ್ಲಿ ಇಂದು ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಸದ್ಗುರು ಶ್ರೀ ಜಗ್ಗಿ ವಾಸುದೇವ್ ಅವರ ಜೊತೆ, ಉಡುಪಿ-ಚಿಕ್ಕಮಗಳೂರು ಸಂಸದೆ ಕು. ಶೋಭಾ ಕರಂದ್ಲಾಜೆ ಹಾಗೂ ಶಾಸಕ ಶ್ರೀ ಕೆ. ಜಿ .ಬೋಪಯ್ಯ ಅವರು ಪಾಲ್ಗೊಂಡಿದ್ದರು.
ಈಶ ಫೌಂಡೇಷನ್ನ ಜಗ್ಗಿ ವಾಸುದೇವ್ ನೇತೃತ್ವದಲ್ಲಿ ಕಾವೇರಿ ಜಲಾನಯನ ಪ್ರದೇಶದ 100 ತಾಲ್ಲೂಕುಗಳಲ್ಲಿ ಬೈಕ್ ರ್ಯಾಲಿ ನಡೆಯಲಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ 25 ಕೋಟಿ ಸಸಿಗಳನ್ನು ನೆಡುವುದು, ಅರಣ್ಯ ಕೃಷಿಯನ್ನು ಉತ್ತೇಜಿಸುವುದು, ನದಿ ಮತ್ತು ಮಣ್ಣಿನ ಸಂರಕ್ಷಣೆಯ ಜೊತೆಗೆ ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಲ್ಲಿ ಅಭಿಯಾನ ಕೈಗೊಳ್ಳಲಾಗುತ್ತಿದೆ.
‘ರಾಜ್ಯದಲ್ಲಿನ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನರ್ಸರಿಗಳನ್ನು ಸ್ಥಾಪಿಸಲಾಗುವುದು. ಇದು ಬೃಹತ್ ಅಭಿಯಾನವಾಗಿದ್ದು, ಸಾರ್ವಜನಿಕರೂ ಕೈಜೋಡಿಸಬೇಕಾಗಿದೆ. ಒಬ್ಬರು ಕನಿಷ್ಠ ಒಂದು ಸಸಿಗೆ 42 ರೂ ನೀಡಬೇಕು. ಈ ಸಸಿಗಳನ್ನು ರೈತರಿಗೆ ಉಚಿತವಾಗಿ ನೀಡಲಾಗುತ್ತದೆ. ಈ ಅಭಿಯಾನ ಯಶಸ್ವಿಯಾಗಬೇಕೆಂದರೆ ಜನರ ಬೆಂಬಲ ಅಗತ್ಯವಾಗಿದೆ. ಈ ಅಭಿಯಾನವು ಜನಾಂದೋಲನವಾಗಿ ರೂಪುಗೊಳ್ಳಬೇಕಿದೆ’ ಎಂದು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಷಾ ವಿನಂತಿಸಿದರು.