ಬೆಂಗಳೂರು, ದೆಹಲಿ ಸೇರಿದಂತೆ ಎಲ್ಲಡೆ ಮೆಟ್ರೋ ಆರಂಭ; ಕೊಲ್ಕತ್ತಾಕ್ಕಿಲ್ಲ ಗ್ರೀನ್ ಸಿಗ್ನಲ್
ಕೊರೊನಾ ಕಾರಣದಿಂದ ದೇಶಾದ್ಯಂತ ಹೇರಲಾಗಿದ್ದ ಲಾಕ್ಡೌನ್ನಿಂದಾಗಿ ಸಂಚಾರ ಸ್ಥಗಿತಗೊಳಿಸಿದ್ದ ದೇಶದ ಹಲವು ನಗರಗಳ ಮೆಟ್ರೋ ಇಂದಿನಿಂದ ಮತ್ತೆ ಕಾರ್ಯಾರಂಭಕ್ಕೆ ಮುಂದಾಗಿವೆ. ಇಂದಿನಿಂದ ಬೆಂಗಳೂರು, ದೆಹಲಿ, ಚೆನ್ನೈ ಸೇರಿದಂತೆ ದೇಶಾದ್ಯಂತ ಮೆಟ್ರೋ ಸಂಚಾರ ಸೇವೆ ಆರಂಭಗೊಂಡಿದೆ. ಆದರೆ, ಕೊಲ್ಕತ್ತಾದಲ್ಲಿ ಮೆಟ್ರೋ ಆರಂಭಕ್ಕೆ ಪ.ಬಂಗಾಳ ಸರ್ಕಾರ ಗ್ರೀನ್ ಸಿಗ್ನಲ್ ನೀಡದೇ ಇರುವುದರಿಂದಾಗಿ ಸಂಚಾರ ಆರಂಭವಾಗಿಲ್ಲ.
ಅನ್ಲಾಕ್-4ರ ಮಾರ್ಗಸೂಚಿಯಡಿಯಲ್ಲಿ ಕೇಂದ್ರ ಸರ್ಕಾರ ನಗರಗಳಲ್ಲಿನ ಮೆಟ್ರೋಗಳ ಆರಂಭಕ್ಕೆ ಅವಕಾಶ ನೀಡಿದ್ದು, ಕೊಲ್ಕತ್ತಾ ಹೊರತು ಪಡಿಸಿ ಉಳಿದ ಎಲ್ಲಾ ನಗರಗಳಲ್ಲಿಯೂ ಮೆಟ್ರೋ ಸಂಚಾರ ಆರಂಭವಾಗಿದೆ. ಬೆಂಗಳೂರಿನಲ್ಲಿ ಸದ್ಯ ನೇರಳೇ ಮಾರ್ಗದಲ್ಲಿ ಮಾತ್ರ ಸಂಚಾರ ಆರಂಭವಾಗಿದ್ದು, ಸೆ.11 ರಿಂದ ಹಸಿರು ಮಾರ್ಗದಲ್ಲಿಯೂ ಸಂಚಾರ ಆರಂಭವಾಗಲಿದೆ
ಬೆಂಗಳೂರಿನ ನಮ್ಮ ಮೆಟ್ರೋ ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ಮತ್ತು ಸಾಯಂಕಾಲ 4.30ರಿಂದ 7.30ರವರೆಗೆ 5 ನಿಮಿಷಗಳ ಅಂತರದಲ್ಲಿ ಮೆಟ್ರೋ ಸಂಚರಿಸಲಿದ್ದು. ಉಳಿದ ಸಮಯದಲ್ಲಿ 10 ನಿಮಿಷಕ್ಕೊಂದರಂತೆ ಚಲಿಸಲಿವೆ.
ಇಂದು ಬೆಳಗ್ಗೆ ಬೈಯಪ್ಪನಹಳ್ಳಿ ನಿಲ್ದಾಣದಿಂದ 8 ಗಂಟೆಗೆ ಮೆಟ್ರೊ ಸಂಚಾರ ಆರಂಭವಾಗಿದ್ದು, ಜನ ದಟ್ಟಣೆಯಲ್ಲಿ ಕೊರೊನಾ ಹರಡಬಹುದಾದ ಭಯದಿಂದ ಪ್ರಯಾಣಿಕರ ಸಂಖ್ಯೆ ಅತ್ಯಂತ ವಿರಳವಾಗಿದೆ. ಮೆಟ್ರೊ ಸಂಚಾರ ಆರಂಭಿಸಿದಾಗ 10ರಿಂದ 12 ಮಂದಿ ಪ್ರಯಾಣಿಕರಿದ್ದರು ಎಂದು ಬಿಎಂಆರ್ ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ ಎಲ್ ಯಶವಂತ್ ಚವಣ್ ತಿಳಿಸಿದ್ದಾರೆ.
ಬೆಂಗಳೂರಿನ ನಮ್ಮ ಮೆಟ್ರೋದ ನಿಯಮಗಳು ಇಂತಿವೆ:
ದಟ್ಟಣೆ ತಪ್ಪಿಸಲು ಟೋಕನ್ ಮಾರಾಟವನ್ನು ನಿಷೇಧಿಸಲಾಗಿದ್ದು, ಮೆಟ್ರೋದಲ್ಲಿ ಓಡಾಟ ನಡೆಸುವವರು ಸ್ಮಾರ್ಟ್ ಕಾರ್ಡ್ ಬಳಸಿ ಪ್ರಯಾಣ ಮಾಡಬೇಕು. ಕಾರ್ಡ್ ರಿಚಾರ್ಜ್ ಮಾಡಿಸಿದ ಏಳು ದಿನದೊಳಗೆ ಆ ಕಾರ್ಡ್ ಮೂಲಕ ಪ್ರಯಾಣ ಮಾಡಬೇಕು. ಈ ಮೊದಲು ರಿಚಾರ್ಜ್ ಮಾಡಿದ ಸ್ಮಾರ್ಟ್ ಕಾರ್ಡ್ ಬಳಸಲು 60 ದಿನಗಳ ಸಮಯವಿತ್ತು. ಈಗ ಕೇವಲ 7 ದಿನಕ್ಕೆ ಇಳಿಸಲಾಗಿದೆ. ನಿಲ್ದಾಣಗಳಲ್ಲಿ ಒದಗಿಸಲಾದ ಯುಪಿಐ, ಕ್ಯೂಆರ್ಕೋಡ್ ಅಥವಾ ಪೇಟಿಎಂ ಮೂಲಕ ರಿಚಾರ್ಜ್ ಮಾಡಿಕೊಲ್ಳಬಹುದು. ಸೆ.7ರಿಂದ ಮೊಬೈಲ್ ಆ್ಯಪ್ ಬಳಸುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ. ಸ್ಮಾರ್ಟ್ ಕಾರ್ಡ್ಗಳನ್ನು ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಗೇಟ್ ರೀಡರ್ನಿಂದ 3 ಸೆಂ.ಮೀ ದೂರದಿಂದಲೇ ಪ್ರಸ್ತುತಪಡಿಸಬೇಕು.
ಇದನ್ನೂ ಓದಿ: ಡ್ರಗ್ಸ್ ಮಾಫಿಯಾ: ನಟಿ ರಾಗಿಣಿಯಿಂದ ಅಂತರ ಕಾಯ್ದುಕೊಳ್ಳಲು ಬಿಜೆಪಿ ಯತ್ನ!
ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರು ಹತ್ತಲು ಮತ್ತು ಇಳಿಯಲು 60 ಸೆಕೆಂಡುಗಳ ಕಾಲ ರೈಲು ನಿಲ್ಲಿಸಲಾಗುತ್ತದೆ. ಮೆಜೆಸ್ಟಿಕ್ ನಿಲ್ದಾಣದಲ್ಲಿ ಮಾತ್ರ 75 ಸೆಕೆಂಡುಗಳು ರೈಲು ನಿಲುಗಡೆ ಮಾಡುವುದಾಗಿ ನಿಗಮ ತಿಳಿಸಿದೆ.
ಕಂಟೈನ್ ಮೆಂಟ್ ವಲಯಗಳಲ್ಲಿ ಬರುವ ಮೆಟ್ರೋ ನಿಲ್ದಾಣಗಳಲ್ಲಿ ಮೆಟ್ರೋ ನಿಲುಗಡೆಯನ್ನು ನಿರ್ಬಂಧಿಸಲಾಗಿದ್ದು, ಆ ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನ ಬಾಗಿಲುಗಳನ್ನು ತೆರೆಯುವುದಿಲ್ಲ. ಆಗ ಪ್ರಯಾಣಿಕರು ತಮಗೆ ಹತ್ತಿರದ ನಿಲ್ದಾಣವನ್ನು ಅವಲಂಬಿಸಲಬೇಕಾಗುತ್ತದೆ.
ಮೆಟ್ರೋ ಪ್ರಯಾಣಿಕರಿಗೆ ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯವಾಗಿದೆ. ಪ್ರವೇಶ ದ್ವಾರ, ನಿರ್ಗಮನ ದ್ವಾರ ಹಾಗೂ ಪ್ಲಾಟ್ ಫಾರ್ಮ್ನಲ್ಲಿ ಹಳದಿ ಗುರುತಿನ ಜಾಗದಲ್ಲಿ ನಿಲ್ಲಬೇಕು ಜೊತೆಗೆ ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ 2 ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಪ್ರಯಾಣಿಕರಿಗೆ ಕೇವಲ ಒಂದು ಬ್ಯಾಗ್ ತರಲು ಮಾತ್ರ ಅನುಮತಿ ನೀಡಲಾಗಿದೆ. ರೈಲಿನಲ್ಲಿ ಗುರುತಿಸಿರುವ ಆಸನಗಳಲ್ಲಿ ಮಾತ್ರ ಕೂರಲು ಅವಕಾಶವಿದೆ. ಸೀನುವಿಕೆ, ಕೆಮ್ಮು ಮತ್ತು ಉಸಿರಾಟದ ಲಕ್ಷಣಗಳು, 37 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿನ ತಾಪಮಾನ ಇರುವವರ ಪ್ರವೇಶ ನಿರ್ಬಂಧಿಸಲಾಗುತ್ತದೆ.
ಇದನ್ನೂ ಓದಿ: ಆರಂಭವಾದ ಒಂದೂವರೆ ತಿಂಗಳಿಗೇ ಬೆಂಗಳೂರಿನ ಕೊರೊನಾ ಕೇರ್ ಸೆಂಟರ್ ಮುಚ್ಚಲು ನಿರ್ಧಾರ!