ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಆಂದೋಲನ ಹುಟ್ಟುಹಾಕಿದ್ದೇ ಬಿಜೆಪಿ: ಪ್ರಶಾಂತ್ ಭೂಷಣ್
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನಡವಳಿಕೆಗಳನ್ನು ಪ್ರಶ್ನಿಸಿದ್ದ ಸಾಮಾಜಿಕ ಹೋರಾಟಗಾರ, ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್ ಅವರು ಅಣ್ಣಾ ಹಜಾರೆ ನೇತೃತ್ವದಲ್ಲಿ 2013ರಲ್ಲಿ ಹುಟ್ಟಿಕೊಂಡ ಭ್ರಷ್ಟಾಚಾರದ ವಿರುದ್ಧ ಭಾರತ (India Agaist curroption – IAC) ಆಂದೋಲನವನ್ನು ಹುಟ್ಟುಹಾಕಿದ್ದೇ ಬಿಜೆಪಿ ಮತ್ತು ಆರೆಸ್ಸೆಸ್ ಎಂದು ಹೇಳಿದ್ದಾರೆ.
ಇತ್ತೀಚೆಗೆ ಇಂಡಿಯಾ ಟುಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಯುಪಿಎ ಸರ್ಕಾರವನ್ನು ಬೀಳಿಸಲು ಭ್ರಷ್ಟಾಚಾರ ವಿರೋಧಿ ಆಂದೋಲನ ರೂಪಿಸಿದ್ದ ಭ್ರಷ್ಟಾಚಾರದ ವಿರುದ್ಧ ಭಾರತ (ಐಎಸಿ) ಅನ್ನು ಹುಟ್ಟು ಹಾಕಿದ್ದೇ ಬಿಜೆಪಿ ಮತ್ತು ಆರೆಸ್ಸೆಸ್ ಎಂದು ಹೇಳಿದ್ಧಾರೆ.
ಭ್ರಷ್ಟಾಚಾರದ ವಿರುದ್ಧದ ಆ ಆಂದೋಲನದ ಹಿಂದೆ ಬಿಜೆಪಿ-ಆರೆಸ್ಸೆಸ್ ಇದ್ದುದರಲ್ಲಿ ಯಾವುದೇ ಸಂಶಯವಿಲ್ಲ. ಆ ಬಗ್ಗೆ ಅಣ್ಣಾ ಹಜಾರೆ ಅವರಿಗೆ ಅರಿವಿರಲಿಲ್ಲ ಎನ್ನಿಸುತ್ತದೆ. ಆದರೆ, ಅದು ಕೇಜ್ರಿವಾಲ್ ಅವರಿಗೆ ಗೊತ್ತಿತ್ತು. ನಾವು ಕೇಜ್ರಿವಾಲ್ ಅವರ ಗುಣವನ್ನು ಬೇಗ ಅರ್ಥ ಮಾಡಿಕೊಳ್ಳುವುದರಲ್ಲಿ ವಿಫಲವಾದೆವು. ನಾವು ಅರಿತುಕೊಳ್ಳುವುದರೊಳಗೆ ಮತ್ತೊಬ್ಬ ಬ್ರಹ್ಮ ರಾಕ್ಷಸನನ್ನು ಸೃಷ್ಟಿ ಮಾಡಿಬಿಟ್ಟಿದ್ದೆವು” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಎಎಪಿ ವಿರುದ್ಧದ ಹೋರಾಟಕ್ಕೆ ಕೈಜೋಡಿಸಲು ಅಣ್ಣಾ ಹಜಾರೆಗೆ ಪತ್ರ ಬರೆದ ಬಿಜೆಪಿ
ಪ್ರಶಾಂತ್ ಭೂಷಣ್ ಅವರು 2013ಲ್ಲಿ ಐಎಸಿಯಲ್ಲಿ ಕೋರ್ ಕಮಿಟಿ ಮೆಂಬರ್ ಆಗಿದ್ದರು. ಐಎಸಿ ಅಂದೋಲನವು ನಂತರದಲ್ಲಿ ಆಮ್ ಆದ್ಮಿ ಪಕ್ಷವಾಗಿ ಪರಿವರ್ತನೆಯಾಯಾತು. ನಂತರದಲ್ಲಿ ಆಮ್ ಆದ್ಮಿ ಪಕ್ಷದಲ್ಲಿ ಹಿರಿಯ ಚಿಂತಕರು ಮತ್ತು ಕೇಜ್ರಿವಾಲ್ ಬಣದ ನಡುವೆ ಭಿನ್ನಾಭಿಪ್ರಯಗಳು ಬೆಳೆದು ಪ್ರಶಾಂತ್ ಭೂಷಣ್ ಸೇರಿದಂತೆ ಹಲವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು.
ಅಲ್ಲದೆ, ಐಎಸಿ ಮತ್ತು ಎಎಪಿ ಹುಟ್ಟಿನ ಹಿಂದೆ ಬಿಜೆಪಿ ಕೆಲಸ ಮಾಡಿದೆ ಎಂದು ಹಲವಾರು ಆರೋಪಗಳು ಕೇಳಿಬರುತ್ತಿದ್ದವು. ಇದು ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರದ್ದುಗೊಳಿಸಿದ ಸಂದರ್ಭದಲ್ಲಿ ಕೇಜ್ರಿವಾಲ್ ಅದನ್ನು ಸ್ವಾಗತಿಸಿದ್ದರು. ಇದು ಇಂತಹ ಆರೋಪಗಳಿಗೆ ಮತ್ತಷ್ಟು ಪುಷ್ಠಿ ನೀಡಿತ್ತು. ಆರೋಪಗಳ ನಡುವೆ, ಪ್ರಶಾಂತ್ ಭೂಷಣ್ ಅವರು ಆ ಆರೋಪವನ್ನು ಸತ್ಯವೆಂದು ದೃಢಪಡಿಸಿದ್ದಾರೆ.
ಪ್ರಶಾಂತ್ ಭೂಷಣ್ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್ಗಾಂಧಿ, ಐಎಸಿ ಆಂದೋಲನ ಮತ್ತು ಆಮ್ ಆದ್ಮಿ ಪಕ್ಷ ಎರಡೂ ಕೂಡ ದೇಶದಲ್ಲಿ ಪ್ರಜಾತಂತ್ರವನ್ನು ದಮನ ಮಾಡಲು ಆರೆಸ್ಸೆಸ್ ಮತ್ತು ಬಿಜೆಪಿ ಹುಟ್ಟು ಹಾಕಲಾಗಿದ್ದ ಸಂಗತಿ ನಮಗೆ ಗೊತ್ತಿತ್ತು. ಆಮ್ ಆದ್ಮಿಯ ಸಂಸ್ಥಾಪಕರೊಬ್ಬರೇ ಈಗ ಇದನ್ನು ಖಚಿತಪಡಿಸಿದ್ದಾರೆ ಎಂದು ಟ್ವಿಟ್ ಮಾಡಿದ್ದಾರೆ.
ಇದನ್ನೂ ಓದಿ: ‘ಕೇಜ್ರಿವಾಲ್ ಮೋಸ ಮಾಡಿದ್ದಾರೆ’ : ಆಮ್ ಆದ್ಮಿ ಪಕ್ಷವನ್ನು ವಿರೋಧಿಸಿದ ಅಣ್ಣಾ!