ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟವನ್ನು ಬೆಂಬಲಿಸುತ್ತೇವೆ: ಸದನದಲ್ಲಿ ಹೋರಾಟ ನಡೆಸುತ್ತೇವೆ: ಹೆಚ್‌.ಡಿ.ರೇವಣ್ಣ

ರಾಜ್ಯ ಸರ್ಕಾರದ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಜೆಡಿಎಸ್‌ ವಿರೋಧಿಸುತ್ತದೆ. ರೈತರ ಹೋರಾಟವನ್ನು ಜೆಡಿಎಸ್‌ ಬೆಂಬಲಿಸುತ್ತದೆ ಎಂದು ಮಾಜಿ ಸಚಿವ ಹೆಚ್‌ಡಿ ರೇವಣ್ಣ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ರೈತ, ದಲಿತ, ಕಾರ್ಮಿಕ ಸಂಘಟನೆಗಳ ಐಕ್ಯ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ರೇವಣ್ಣ, ರಾಜ್ಯ ಸರ್ಕಾರ ಜಾರಿಗೊಳಿಸಿರುವ ರೈತ ವಿರೋಧಿ ಸುಗ್ರೀವಾಜ್ಞೆಯನ್ನು ಜೆಡಿಎಸ್‌ ಪಕ್ಷ ವಿರೋಧಿಸುತ್ತದೆ. ಪಕ್ಷದ ವರಿಷ್ಠರಾದ ದೇವೇಗೌಡರು ರಾಜ್ಯಸಭೆಯಲ್ಲಿ ಕೃಷಿ ಮಸೂದೆಯ ವಿರುದ್ಧ ಮತ ಹಾಕಿದ್ದಾರೆ. ರಾಜ್ಯದಲ್ಲಿಯೂ ರೈತ ವಿರೋಧಿ ಮಸೂದೆಯನ್ನು ನಾವು ವಿರೋಧಿಸುತ್ತೇವೆ ಎಂದಿದ್ದಾರೆ.

ಉಳ್ಳವರಿಗೆ ಅನುಕೂಲ ಮಾಡಿಕೊಡಲು ರಾಜ್ಯದ ಬಿಜೆಪಿ ಸರ್ಕಾರ ಎಪಿಎಂಸಿ ಮತ್ತು ಭೂಸುಧಾರಣಾ ಕಾಯ್ದೆಗಳಿಗೆ ತಿದ್ದುಪಡಿ ತಂದಿದೆ. ಇದು ರೈತರ ಹಕ್ಕುಗಳನ್ನು ಕಸಿದುಕೊಂಡು ಅವರನ್ನು ಬೀದಿಪಾಲು ಮಾಡುತ್ತದೆ. ಇದರ ವಿರುದ್ಧ ಪಕ್ಷವು ರಾಜ್ಯಾದ್ಯಂತ ಮತ್ತು ಅಧಿವೇಶನದಲ್ಲಿಯೂ ಹೋರಾಟ ನಡೆಸಲಿದೆ ಎಂದಿದ್ದಾರೆ.

ರಾಜ್ಯದಲ್ಲಿ ಉಳುವವನೇ ಭೂಮಿಯ ಒಡೆಯ ಎಂಬ ಕಾಯ್ದೆ ಜಾರಿಯಲ್ಲಿದೆ. ಅದು ರೈತರಿಗೆ ಹಲವಾರು ಹಕ್ಕುಗಳನ್ನು ನೀಡಿದೆ. ಆ ಹಕ್ಕುಗಳನ್ನು ಕಸಿದುಕೊಂಡು ಇಂದಿನ ಸರ್ಕಾರ ಕಾನೂನು ಮಾಡಲು ಹೊರಟಿದೆ. ಸರ್ಕಾರದ ನಡೆ ಸರಿಯಲ್ಲ ಎಂದು ಅವರು ಆರೋಪಿಸಿದ್ದಾರೆ.

ರೈತರಿಗೆ ಅನುಕೂಲವಾಗುವ ಕಾಯ್ದೆಗಳು, ಯೋಜನೆಗಳು ಜಾರಿಯಾಗಬೇಕು. ಅದಕ್ಕಾಗಿ ನಾವು ರೈತರ ಜೊತೆ ನಿಲ್ಲುತ್ತೇವೆ. ರೈತ, ದಲಿತ, ಕಾರ್ಮಿಕರ ಈ ಹೋರಾಟವನ್ನು ನಾವು ಬೆಂಬಲಿಸುತ್ತೇವೆ ಎಂದು ರೇವಣ್ಣ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights