ಮಾಗಡಿ ಯುವತಿಯದ್ದು ಅತ್ಯಾಚಾರ/ಕೊಲೆಯಲ್ಲ; ಮರ್ಯಾದಾ ಹತ್ಯೆ: ತಂದೆ-ಮಗನ ಬಂಧನ
ಅತ್ಯಾಚಾರ ಮತ್ತು ಕೊಲೆ ಎಂದು ಶಂಕಿಸಲಾಗಿದ್ದ ಮಾಗಡಿಯ 19 ವರ್ಷದ ಯುವತಿ ಕೊಲೆ ಪ್ರಕರಣದ ನೈಜತೆಯನ್ನು ಭೇದಿಸುವಲ್ಲಿ ಯಶಸ್ವಿಯಗಿರುವ ರಾಮನಗರ ಪೊಲೀಸರು ಅದು ಅತ್ಯಾಚಾರವಲ್ಲ, ಮರ್ಯಾದಾ ಗೇಡು ಹತ್ಯೆ ಎಂದು ಹೇಳಿದ್ದಾರೆ.
ಮಾಗಡಿ ತಾಲ್ಲೂಕಿನ ಕುದೂರು ಹೋಬಳಿಯ ಬೆಟ್ಟದಹಳ್ಳಿಯ ಯುವತಿ ಅಕ್ಟೋಬರ್ 8ರಂದು ನಾಪತ್ತೆಯಾಗಿದ್ದರು. ಅ.10ರಂದು ಆಕೆಯ ದೊಡ್ಡಪ್ಪನ ಜಮೀನಿನಲ್ಲಿ ಶವವಾಗಿ ಪತ್ತೆಯಾಗಿದ್ದಳು. ಆಕೆಯ ಪ್ರಿಯಕರೇ ಹತ್ಯೆ ಮಾಡಿದ್ದಾನೆ ಎಂದು ಯುವತಿಯ ಪೋಷಕರು ಆರೋಪಿಸಿದ್ದರೆ, ಸಾಮಾಜಿಕ ಜಾಲತಾಣದಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ನಡೆಸಿದೆ ಎಂದು ಹೇಳಲಾಗಿತ್ತು.
ಯುವತಿಯ ಪೋಷಕರು ಆಕೆಯ ಪ್ರಿಯಕರನೇ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು.
ಪ್ರಕರಣವನ್ನು ಅತ್ಯಂತ ಸೂಕ್ಷ್ಮವಾಗಿ ಪರಿಗಣಿಸಿದ ಪೊಲೀಸರ ತನಿಖೆಯಲ್ಲಿ ಯುವತಿಯನ್ನು ಆಕೆಯ ಪೋಷಕರೇ ಮರ್ಯಾದಾ ಹತ್ಯೆ ಮಾಡಿದ್ದಾರೆ ಎಂಬ ಸತ್ಯ ಬೆಳಕಿಗೆ ಬಂದಿದೆ.
ಪರಿಶಿಷ್ಟ ಜಾತಿಯ ಹುಡುಗನನ್ನು ಪ್ರೀತಿಸಿದ ಕಾರಣಕ್ಕೆ ಮಗಳನ್ನೇ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಯುವತಿಯ ತಂದೆ ಕೃಷ್ಣಪ್ಪ ಮತ್ತು ದೊಡ್ಡಪ್ಪನ ಮಗ ಚೇತನ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಥಮ ಬಿ.ಕಾಂ. ವಿದ್ಯಾರ್ಥಿನಿ ಹೇಮಲತಾ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು, ಅದೇ ಗ್ರಾಮದ ದಲಿತ ಯುವಕನನ್ನು ಪ್ರೀತಿಸುತ್ತಿದ್ದರು. ಈ ಸಂಬಂಧ ಠಾಣೆಯಲ್ಲಿ ಹಿಂದೆಯೂ ರಾಜೀ ಸಂಧಾನ ನಡೆದಿತ್ತು. ಆದರೆ, ಅವರ ಪ್ರೀತಿಯನ್ನು ಒಪ್ಪದ ಯುವತಿಯ ತಂದೆ ಮತ್ತು ದೊಡ್ಡಪ್ಪನ ಸೇರಿ ಆಕೆಯನ್ನೇ ಹತ್ಯೆ ಮಾಡಿದ್ದಾರೆ.
ಇದನ್ನೂ ಓದಿ: ಮರ್ಯಾದಾ ಹತ್ಯೆ: ಗರ್ಭಿಣಿಯಾಗಿದ್ದ 14 ವರ್ಷದ ಬಾಲಕಿಯನ್ನು ಹತ್ಯೆಗೈದ ತಂದೆ ಮತ್ತು ಮಗ