ತ್ರಿವಳಿ ತಲಾಖ್ ವಿರುದ್ಧ ಹೋರಾಟಗಾರ್ತಿ ಷಾಹಿರಾ ಬಾನು: ಉತ್ತರಾಖಂಡ್ ರಾಜ್ಯ ಮಹಿಳಾ ಆಯೋಗದ ಉಪಾಧ್ಯಕ್ಷೆಯಾಗಿ ನೇಮಕ!
ತ್ರಿವಳಿ ತಲಾಖ್ ರದ್ಧತಿಗಾಗಿ ಹೋರಾಟ ನಡೆಸಿದ್ದ ಷಾಹಿರಾ ಬಾನು ಅವರು ಕೆಲವು ದಿನಗಳ ಹಿಂದೆ ಉತ್ತರಾಖಂಡ್ನಲ್ಲಿ ಬಿಜೆಪಿ ಸೇರಿದ್ದಾರೆ. ಬಿಜೆಪಿ ಸೇರಿದ 10 ದಿನಗಳಲ್ಲಿಯೇ ಅವರನ್ನು ಉತ್ತರಾಖಂಡ್ ರಾಜ್ಯ ಮಹಿಳಾ ಆಯೋಗದ ಉಪಾಧ್ಯಕ್ಷೆಯನ್ನಾಗಿ ನೇಮಿಸಲಾಗಿದೆ.
ಉತ್ತರಾಖಂಡ್ನ ಆಡಳಿತಾರೂಢ ಬಿಜೆಪಿ ಸರ್ಕಾರ ಷಾಹಿರಾ ಬಾನು, ಜ್ಯೋತಿ ಷಾ, ಪುಷ್ಪ ಪಾಸ್ವಾನ್ ಅವರುಗಳನ್ನು ಉತ್ತರಾಖಂಡ ರಾಜ್ಯ ಮಹಿಳಾ ಆಯೋಗದ ಉಪಾಧ್ಯಕ್ಷರನ್ನಾಗಿ ನೇಮಿಸಿದೆ.
ಮಹಿಳೆಯರ ಸಮಸ್ಯೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಪರಿಹರಿಸಲು ಹಾಗೂ ಆಯೋಗದಲ್ಲಿ ಬಾಕಿ ಇರುವ ಎಲ್ಲಾ ವಿವಾದಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ನೆರವಾಗುವ ಉದ್ದೇಶದಿಂದ ಇವರೆಲ್ಲನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಮುಖ್ಯಮಂತ್ರಿ ತ್ರೀವೇಂದ್ರ ಸಿಂಗ್ ರಾವತ್ ತಿಳಿಸಿದ್ದಾರೆ.
ತ್ರಿವಳಿ ತಲಾಕ್ ಪದ್ದತಿಯನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವರಲ್ಲಿ ಷಾಹಿರಾ ಬಾನು ಅವರು ಮುಖ್ಯ ಆರ್ಜಿದಾರೆಯಾಗಿದ್ದರು.
ಉತ್ತರಾಖಂಡದ ಉದಮ್ ಸಿಂಗ್ ನಗರ ಜಿಲ್ಲೆಯ ಷಾಹಿರಾ ಬಾನು ಅವರಿಗೆ, ಅವರ ಪತಿ 2014 ರಲ್ಲಿ ಸ್ಪೀಡ್ ಪೋಸ್ಟ್ ಮೂಲಕ ವಿಚ್ಚೇಧನ ನೀಡಿದ್ದರು. ಇದಾದ ನಾಲ್ಕು ತಿಂಗಳ ನಂತರ,ಷಾಹಿರಾ ಬಾನು ತ್ರಿವಳಿ ತಲಾಖ್ ವಿರುದ್ಧ ಸುಪ್ರೀಂ ಕೋರ್ಟ್ ಗೆ ಆರ್ಜಿಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ದಿಢೀರ್ ತ್ರಿವಳಿ ತಲಾಖ್ ನೀಡುವುದು ಅಸಂವಿಧಾನಿಕ ಕ್ರಮ ಎಂದು 2017 ರಲ್ಲಿ ತೀರ್ಪು ನೀಡಿತು. ತರುವಾಯ, ಕೇಂದ್ರ ಸರ್ಕಾರ ಮುಸ್ಲಿಂ ಮಹಿಳಾ ವಿವಾಹ ಹಕ್ಕುಗಳ ಸಂರಕ್ಷಣಾ ಕಾಯ್ದೆ, 2019 ಅನ್ನು ಜಾರಿಗೆ ತಂದಿತ್ತು.
ಇದನ್ನೂ ಓದಿ: ಯಡಿಯೂರಪ್ಪ ಹೈಕಮಾಂಡ್ಗೂ ಸಾಕಾಗಿದ್ದಾರೆ, ಬಿಎಸ್ವೈ ಖುರ್ಚಿ ಉಳಿಯುವುದಿಲ್ಲ: ಬಿಜೆಪಿ ಶಾಸಕ ಯತ್ನಾಳ್