ಲಾಕ್ಡೌನ್ ಎಫೆಕ್ಟ್: ಪರಿಸ್ಥಿತಿ ಸುಧಾರಿಸದಿದ್ದರೆ, ಕರ್ನಾಟಕದ ಸಣ್ಣ-ಮಧ್ಯಮ ಉದ್ಯಮಗಳಿಗಿಲ್ಲ ಅಸ್ಥಿತ್ವ!
ಮೊದಲೇ ಹಳ್ಳದ ಹಾದಿ ಹಿಡಿದಿದ್ದ ದೇಶದ ಆರ್ಥಿಕತೆ ಕೊರೊನಾದಿಂದಾಗಿ ಪಾತಾಳಕ್ಕೆ ಕುಸಿದಿದೆ. ಅನ್ಲಾಕ್ ಪ್ರಕ್ರಿಯೆ ಆರಂಭಗೊಂಡ ನಂತರ ನಿಧಾನವಾಗಿ ಆರ್ಥಿಕ ಚಟುವಟಕೆಗಳು, ಉದ್ಯಮ, ಕೈಗಾರಿಕೆಗಳು ಆರಂಭವಾಗುತ್ತಿದ್ದರೂ, ಎಲ್ಲವೂ ಸಂಪೂರ್ಣವಾಗಿ ಆರಂಭವಾಗಿಲ್ಲ. ಅಲ್ಲದೆ, ಲಾಕ್ಡೌನ್ ಎಫೆಕ್ಟ್ನಿಂದಾಗಿ ಸಣ್ಣ, ಅತಿಸಣ್ಣ, ಮಧ್ಯಮ ಕೈಗಾರಿಕಾ ಉದ್ಯಮಗಳು ಹೊಡೆತ ತಿಂದಿದ್ದು, ಶೇ.20ರಷ್ಟು ಉದ್ಯಮಗಳು ಸಂಪೂರ್ಣ ಬಂದ್ ಆಗಿವೆ.
ಲಾಕ್ಡೌನ್ ಮುಂಚೆ ಆರಂಭಗೊಂಡು ಬೆಳವಣಿಗೆಯ ಹಾದಿಯಲ್ಲಿದ್ದ ಹಲವು ಸಣ್ಣ, ಮಧ್ಯಮ ಮತ್ತು ಅತಿ ಸಣ್ಣ ಉದ್ಯಮಗಳ ನಷ್ಟದಿಂದ ಮಂಕಾಗಿದ್ದು, ಮತ್ತೆ ಚೇತರಿಸಿಕೊಳ್ಳಲು ಬಹುಕಾಲದ ಕಾಯಲೇಬೇಕಾಗಿದೆ.
ದೇಶದ ಅತ್ಯಂತ ಕೈಗಾರಿಕೀಕರಣಗೊಂಡ ರಾಜ್ಯಗಳಲ್ಲಿ ಕರ್ನಾಟಕ ಒಂದೆಂದು ಪರಿಗಣಿಸಲ್ಪಟ್ಟಿದ್ದು 7.6 ಲಕ್ಷಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಹಾಗೂ ಅತಿ ಸಣ್ಣ ಕೈಗಾರಿಕೆಗಳನ್ನು ಹೊಂದಿದೆ. ಅದರಲ್ಲಿ 2.6 ಲಕ್ಷ ಉದ್ದಿಮೆಗಳು ಬೆಂಗಳೂರಿನಲ್ಲೇ ಇದ್ದು, ಈ ವಲಯಗಳು ಸುಮಾರು 2.6 ಕೋಟಿ ಜನರಿಗೆ ಉದ್ಯೋಗ ನೀಡುವುದರ ಜೊತೆಗೆ ಬದುಕನ್ನೂ ಕಟ್ಟಿಕೊಟ್ಟಿವೆ.
ಲಾಕ್ ಡೌನ್ ನಿಂದ ಶೇ.20 ರಷ್ಟು ಉದ್ದಿಮೆಗಳು ನಷ್ಟ ಅನುಭವಿಸಿವೆ. ಎಂಎಸ್ಎಂಇಗಳ ವ್ಯವಹಾರ ವಹಿವಾಟು 10 ವರ್ಷಗಳ ಹಿಂದಕ್ಕೆ ಮರಳಿದೆ ಎಂದು ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಶ್ರೀನಿವಾಸ ಆಶ್ರಣ್ಣ ತಿಳಿಸಿದ್ದಾರೆ.
ಬೆಂಗಳೂರು ಹೊರವಲಯದಲ್ಲಿರುವ ಪೀಣ್ಯಾ ಕೈಗಾರಿಕಾ ಕೇಂದ್ರದಲ್ಲಿ ಸುಮಾರು 8,500 ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿವೆ. , ಅವುಗಳಲ್ಲಿ ಶೇ. 80ರಷ್ಟು ಅಗತ್ಯ ವಸ್ತುಗಳ ಪೂರೈಯಾಗುತ್ತಿತ್ತು. ಲಾಕ್ ಡೌನ್ ಸಮಯದಲ್ಲಿ ಈ ಎಲ್ಲಾ ಉದ್ಯಮಗಳು ಸಂಪೂರ್ಣವಾಗಿ ಕೈಗಾರಿಕೆ ಸ್ಥಗಿತಗೊಳಿಸಿದ್ದವು. ಅವುಗಳಲ್ಲಿ ಶೇ.10 ರಷ್ಟು ಮತ್ತೆ ತೆರೆಯಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ತಲುಪಿದ್ದು, ಅವುಗಳ ಬಾಗಿಲು ಸಂಪೂರ್ಣವಾಗಿ ಬಂದ್ ಆಗಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದೇಶದ ಜಿಡಿಪಿ ದರ ಕುಸಿಯಲು ಅಸಲಿ ಕಾರಣ ಇಲ್ಲಿದೆ : ದೇಶದ ಹಿತಕ್ಕಾಗಿ ತಪ್ಪದೇ ಓದಿ..
ಸಿದ್ದತೆಯಿಲ್ಲದ ಲಾಕ್ಡೌನ್ನಿಂದಾಗಿ ಕಂಗಾಲಾದ ಕಾರ್ಮಿಕರು ತಮ್ಮ ತಮ್ಮ ಸ್ವಂತ ಸ್ಥಳಗಳಿಗೆ ತೆರಳಿದ್ದಾರೆ. ಹಾಗಾಗಿ ಲಾಕ್ಡೌನ್ ತೆರವಿನ ನಂತರ ಕಾರ್ಮಿಕರ ಕೊರತೆಯಿಂದಾಗಿ ಹಲವು ಉದ್ದಿಮೆಗಳು ಕಾರ್ಯಾರಂಭ ಮಾಡಲು ಸಾಧ್ಯವಾಗುತ್ತಿಲ್ಲ.
ಸಾಂಕ್ರಾಮಿಕ ರೋಗದಿಂದ ಉಂಟಾದ ಬಿಕ್ಕಟ್ಟನ್ನು ಎದುರಿಸಲು ಎಂಎಸ್ಎಂಇ ವಲಯವನ್ನು ಗುರಿಯಾಗಿಸಿಕೊಂಡು ಸರ್ಕಾರವು ಅನೇಕ ಸಾಪ್ ಮತ್ತು ಯೋಜನೆಗಳನ್ನು ಘೋಷಿಸಿತು. ಆದರೆ ಅವು ಕಾಗದದ ಮೇಲಷ್ಟೇ ಇವೆ, ಕಾರ್ಯರೂಪಕ್ಕಂತೂ ಬಂದಿಲ್ಲ. ಬರುತ್ತವೆ ಎಂಬ ಭರವಸೆಯೂ ಇಲ್ಲ ಎಂದು ಕಾಸಿಯಾ ಅಧ್ಯಕ್ಷ ಕೆಬಿ ಅರಸಪ್ಪ ತಿಳಿಸಿದ್ದಾರೆ.
ದೇಶದ ಜಿಡಿಪಿಗೆ ಗಮನಾರ್ಹವಾಗಿ ಕೊಡುಗೆ ನೀಡುವ ಎಂಎಸ್ಎಂಇಗಳನ್ನು ರಕ್ಷಿಸಲು ಸರ್ಕಾರಕ್ಕೆ ಇಚ್ಛೆ ಇದ್ದತಂತಿಲ್ಲ. ಇದ್ದಿದ್ದೇ ಆಗಿದ್ದರೆ ಮೇಲಾಧಾರ ರಹಿತ ಸ್ವಯಂಚಾಲಿತ ಸಾಲಗಳಿಗೆ ಬದಲಾಗಿ ನೇರ ನಗದು ಪ್ರಯೋಜನಗಳನ್ನು ಸರ್ಕಾರ ಘೋಷಿಸಬಹುದಿತ್ತು ಎಂದು ಅವರು ಹೇಳಿದ್ದಾರೆ.
“ನೈಸರ್ಗಿಕ ವಿಪತ್ತುಗಳಿಂದಾಗಿ ನಾವು ಯಾವತ್ತೂ ರಿಯಾಯಿತಿ ಕೇಳಲಿಲ್ಲ. ಆದರೆ ಈ ಸಮಯದಲ್ಲಿ, ಕೋವಿಡ್ ಕಾರಣ ನಮಗೆ ಸಹಾಯ ಬೇಕು. ಪರಿಣಾಮಕಾರಿ ರಕ್ಷಣಾ ಯೋಜನೆ ಕಾಣೆಯಾಗಿರುವುದರಿಂದ ನಾವು ನಿರಾಶೆಗೊಂಡಿದ್ದೇವೆ, ”ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಲಾಕ್ಡೌನ್ ನಿರುದ್ಯೋಗ: ಉದ್ಯೋಗ ಸೃಷ್ಟಿಗೆ MNREGA ಒಂದೇ ಮಾರ್ಗವಾ?