ವೇತನ ವಿವಾದ: ದಲಿತ ಯುವಕನನ್ನು ಜೀವಂತ ಸುಟ್ಟು ಕೊಂದ ಮಾಲೀಕ!
ವೇತನ ವಿಚಾರವಾಗಿ ಅಲ್ವಾರ್ ಜಿಲ್ಲೆಯ ದಲಿತ ಯುವಕನನ್ನು ಅವರ ಉದ್ಯೋಗದಾತರು ಸುಟ್ಟು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ದಲಿತ ಯುವಕ ತನ್ನ ಬಾಕಿ ವೇತನಕವನ್ನು ನೀಡುವಂತೆ ಕೇಳಿದ್ದು, ಇಂದರಿಂದಾಗಿ ಕೋಪಗೊಂಡ ಮಾಲೀಕ ಆತನನ್ನು ಜೀವಂತ ಸುಟ್ಟು ಕೊಂಡಿದ್ದಾನೆ ಎಂದು ಹೇಳಲಾಗಿದೆ.
ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಹತ್ಯೆಗೀಡಾದ ದಲಿತ ಯುವಕ ಕಮಲ್ ಕಿಶೋರ್ ಎಂದು ಹೇಳಲಾಗಿದೆ. ಆತನ ಸಹೋದರ ರೂಪ್ ಸೀಂಗ್ ಧನ್ಕಾ, ತನ್ನ ಸಹೋದರನನ್ನು ಉದ್ದೇಶ ಪೂರ್ವಕವಾಗಿ ಮಾಡಿದ ಅನಾಹುತದಲ್ಲಿ ಹತ್ಯೆಯಾಗಿದ್ದಾನೆ ಎಂದು ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಪ್ರಕರಣದಲ್ಲಿ ಇಬ್ಬರು ಶಂಕಿತ ಆರೋಪಿಗಳೆಂದು ಗುರುತಿಸಲಾಗಿದೆ. ಅವರ ಪೈಕಿ ಸ್ಥಳೀಯ ಸರ್ಪಂಚ್ ನ ಪುತ್ರನೂ ಇದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ರಾಕೇಶ್ ಯಾದವ್ ಹಾಗೂ ಸುಭಾಷ್ ಚಂದ್ ಎಂಬುವವರು ಕುಂಪುರ್-ಭಗೇರಿ ರಸ್ತೆಯಲ್ಲಿ ನಡೆಸುತ್ತಿದ್ದ ಮದ್ಯದ ಅಂಗಡಿಯಲ್ಲಿ ಕಮಲ್ ಕಿಶೋರ್ ಧನ್ಕಾ ಕೆಲಸ ಮಾಡುತ್ತಿದ್ದರು. 5 ತಿಂಗಳಿಂದ ತನಗೆ ಬರಬೇಕಿದ್ದ ಬಾಕಿ ವೇತನವನ್ನು ಕೇಳಿದಾಗಲೆಲ್ಲಾ ಮಾಲಿಕರು ಆತನಿಗೆ ಬೆದರಿಸಿ ಹಲ್ಲೆ ಮಾಡುತ್ತಿದ್ದದ್ದು ದೂರಿನ ಮೂಲಕ ಬಹಿರಂಗವಾಗಿದೆ.
ಶನಿವಾರ ಮಧ್ಯಾಹ್ನ ಇಬ್ಬರೂ ಮಾಲಿಕರು ಕಮಲ್ ನ ಮನೆಗೆ ಬಂದು ಆತನನ್ನು ತಮ್ಮೊಂದಿಗೆ ಕರೆದೊಯ್ದರು, ಮರುದಿನವೇ ಮದ್ಯದ ಅಂಗಡಿಗೆ ಬೆಂಕಿಗೆ ಆಹುತಿಯಾಗಿದೆ ಎಂಬ ಸುದ್ದಿ ಬಂದಿತು. ಸ್ಥಳಕ್ಕೆ ಪೊಲೀಸರು ತೆರಳುವ ವೇಳೆಗೆ ಮದ್ಯದ ಅಂಗಡಿ ಹಾಗೂ ಅಂಗಡಿಯಲ್ಲಿ ಕಬ್ಬಿಣದ ಕಂಟೈನರ್ ನಲ್ಲಿದ್ದ ಕಮಲ್ ನ ದೇಹ ಸಂಪೂರ್ಣ ಸುಟ್ಟು ಕರಕಲಾಗಿತ್ತು.
ಅಂಗಡಿ ಮಾಲಿಕರೇ ಉದ್ದೇಶಪೂರ್ವಕವಾಗಿ ಕಮಲ್ ನ್ನು ಅಂಗಡಿ ಸಹಿತ ಸುಟ್ಟು ಹಾಕಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ದೂರಿನ ಅನ್ವಯ ರಾಕೇಶ್ ಹಾಗೂ ಸುಭಾಷ್ ವಿರುದ್ಧ ಎಸ್ ಸಿ-ಎಸ್ ಟಿ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ.
ರಾಜ್ಯದಲ್ಲಿ ಇಂತಹ ಹೇಯ ಕೃತ್ಯ 2 ನೇ ಬಾರಿಗೆ ನಡೆದಿದೆ. ಕಳೆದ 15 ದಿನಗಳ ಹಿಂದೆ ಅರ್ಚಕನೋರ್ವರನ್ನು ಭೂ ವಿವಾದಕ್ಕೆ ಸಂಬಂಧಿಸಿದಂತೆ ಸಜೀವ ದಹನ ಮಾಡಿದ ಘಟನೆ ಕರೌಲಿ ಜಿಲ್ಲೆಯಲ್ಲಿ ನಡೆದಿತ್ತು.
ಇದನ್ನೂ ಓದಿ: ದಲಿತ ಎಂಬ ಕಾರಣಕ್ಕೆ ಪಂಚಾಯತ್ ಸಭೆಯಲ್ಲಿ ಅಧ್ಯಕ್ಷರನ್ನೇ ನೆಲದ ಮೇಲೆ ಕೂರಿಸಿ ಶೋಷಣೆ!