ಅಡಿಕೆ ಬೆಳೆಗಾರರನ್ನು ರಕ್ಷಿಸುವರೆ ಈ ಆರು ಜನ ಮಾನಗೇಡಿ ಸಂಸದರು?
ಅಡಿಕೆ ಬೆಳೆಯ ಮೇಲೆ ಅವಲಂಬಿತರಾಗಿ ಬದುಕು ಕಟ್ಟಿಕೊಂಡವರಿಗೆ ಕೇಂದ್ರ ಸರ್ಕಾರಗಳ ಎಡವಟ್ಟು ವಾಣಿಜ್ಯ ನೀತಿಗಳು ಲಾಗಾಯ್ತಿನಿಂದ ಒಂದಲ್ಲಾ ಒಂದು ಆತಂಕ ತಂದೊಡ್ಡುತ್ತಲೇ ಇವೆ. ದೇಶದ ಐದಾರು ರಾಜ್ಯದಲ್ಲಿ ಅಡಿಕೆ ಬೆಳೆಯಲಾಗುತ್ತಿದೆಯಾದರೂ ಕರ್ನಾಟಕದಲ್ಲೇ ಅತೀಹೆಚ್ಚು. ದೇಶದ ಶೇಕಡಾ 61 ರಷ್ಟು ಅಡಿಕೆಯನ್ನು ಕರ್ನಾಟಕವೊಂದೇ ಉತ್ಪಾದಿಸುತ್ತದೆ. ಕರ್ನಾಟಕದಲ್ಲಿ 2.61 ಲಕ್ಷ ಹೆಕ್ಟೇರ್ ಅಡಿಕೆ ಕೃಷಿ ಪ್ರದೇಶವಿದೆ. ಅಡಿಕೆ ವಹಿವಾಟು ಲಕ್ಷಾಂತರ ಕುಟುಂಬಕ್ಕೆ ಆಧಾರ. ಆದರೆ ಅಡಿಕೆ ಬೆಲೆಯಂತೆಯೇ ಅದರ ಬೆಳೆಗಾರರ ಬದುಕೂ ಅಸ್ಥಿರ.
ಚೀನಾ, ಮಯನ್ಮಾರ್, ಇಂಡೋನೇಷ್ಯಾ ಮುಂತಾದ ವಿದೇಶಗಳಲ್ಲಿ ಕಳಪೆ ಅಡಿಕೆಯ ಆಮದಿಗೆ ಯಾವಾಗ ಅವಕಾಶ ಕೊಡಲಾಯಿತೋ ಆಗ ಸ್ಥಳೀಯ ಅಡಿಕೆ ಕೃಷಿಕರು ತತ್ತರಿಸಿಹೋದರು! ಹೊರಗಿನ ಕೆಟ್ಟ ಅಡಿಕೆ ಜತೆ ಇಲ್ಲಿಯ ಉತ್ಕೃಷ್ಟ ಗುಣಮಟ್ಟದ ಅಡಿಕೆ ಸೇರಿಸಿ ಮಧ್ಯವರ್ತಿಗಳು ದೊಡ್ಡ ಫಾಯ್ದೆ ಬಾಚಿದರು. ಈ ಗೋಲ್ಮಾಲ್ನಿಂದ ಭಾರತದ ಅದರಲ್ಲೂ ಕರ್ನಾಟಕದ ಅಡಿಕೆ ತೋಟಿಗರ ಬದುಕು ಬರ್ಬಾದ್ ಆಗಿಹೋಯಿತು. ಈ ಅನಾಹುತದ ಅರಿವಾದಾಗ ಅಂದಿನ ಯುಪಿಎ ಸರ್ಕಾರ ಆಮದು ಸುಂಕ ಹೆಚ್ಚಿಸಿತು. ಆಗ ಹೊರಗಿನ ಅಡಕೆ ಬರುವುದು ಕಮ್ಮಿಯಾಗಿ ನಮ್ಮ ರೈತರಿಗೆ ಹೆಚ್ಚು ಧಾರಣೆ ಸಿಕ್ಕಿತು.
ನಂತರ ಗುಜರಾತ್ ಮೂಲದ ಗುಟ್ಕಾ ಮಾಫಿಯಾ ಅಡಿಕೆಗೆ ಗಂಟು ಬಿದ್ದು ರೈತರನ್ನು ಕಾಡಿತು. ಸಿಗರೇಟ್ ಲಾಬಿಯೂ ಸತಾಯಿಸಿತು. ಯುಪಿಎ-2 ಸರ್ಕಾರ ಇದ್ದಾಗ ಅಡಿಕೆಯಲ್ಲಿ ಕ್ಯಾನ್ಸರ್ಕಾರಕ ಅಂಶಗಳಿವೆ ಎಂಬ ಅಫಿಡವಿಟ್ ಸುಪ್ರೀಂ ಕೋರ್ಟ್ಗೆ ಸಲ್ಲಿಕೆಯಾಗಿತ್ತು. ಇದು ಅಡಿಕೆ ತೋಟಿಗರಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿತು. 2014ರ ಲೋಕಸಭಾ ಇಲೆಕ್ಷನ್ನಲ್ಲಿ ಬಿಜೆಪಿ ಕರ್ನಾಟಕದ ಮಲೆನಾಡು, ಅರೆಮಲೆನಾಡು ಮತ್ತು ಕರಾವಳಿಯಲ್ಲಿ ಈ “ಕ್ಯಾನ್ಸರ್” ಭೂತವನ್ನೇ ಅಸ್ತ್ರವಾಗಿ ಬಳಸಿ ಕಾಂಗ್ರೆಸನ್ನು ಹಣಿಯಿತು. ಕಾಂಗ್ರೆಸಿಗರು ಅಡಿಕೆ ಬೆಳೆಗಾರರ ಶತ್ರುಗಳು ಮತ್ತು ತಾವು ಮಾತ್ರ ರಕ್ಷಕರು ಎಂಬಂತೆ ಬಿಂಬಿಸಿದರು. ಗೊಂದಲದಲ್ಲಿದ್ದ ಅಡಿಕೆ ಬೆಳೆಗಾರರು ಬಿಜೆಪಿಗರ ಮೋಸಕ್ಕೆ ಮರುಳಾದರು. ಅಡಿಕೆ ಬೆಳೆಯುವ ಐದಾರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಲಾಭಮಾಡಿಕೊಂಡಿತು.
ಅಸಹಾಯಕರನ್ನು ದಿಕ್ಕು ತಪ್ಪಿಸಿ ಗೆಲ್ಲುವುದರಲ್ಲಿ ನಿಸ್ಸೀಮರಾದ ಕೇಸರಿ ಪಡೆಯವರು ಗೆದ್ದ ಬಳಿಕ ಅಡಿಕೆ ಬೆಳೆಗಾರರನ್ನು ಮರೆತೇ ಬಿಟ್ಟರು! ಅಡಿಕೆ ಬೆಳೆಗಾರರ ಸಾರಾಸಗಟು ಬೆಂಬಲದಿಂದ ಎಂಪಿಯಾಗಿದ್ದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಅನಂತಕುಮಾರ್ ಹೆಗಡೆ, ರಾಘವೇಂದ್ರ, ಜಿ.ಎಂ.ಸಿದ್ದೇಶ್, ಹಾವೇರಿಯ ಉದಾಸಿ ಇವರೆಲ್ಲರೂ ಅಡಿಕೆ ಬೆಳೆಗೊಂದು ಸ್ಥಿರ ಮಾರುಕಟ್ಟೆ ಒದಗಿಸುವ ಸಣ್ಣ ಪ್ರಯತ್ನವನ್ನೂ ಮಾಡಲಿಲ್ಲ. ಅದಕ್ಕಿಂತ ದೊಡ್ಡ ದ್ರೋಹವೆಂದರೆ, ತಮ್ಮದೇ ಸರ್ಕಾರ ಕೇಂದ್ರದಲ್ಲಿದ್ದರೂ ಸುಪ್ರೀಂ ಕೋರ್ಟ್ನಲ್ಲಿದ್ದ “ಕ್ಯಾನ್ಸರ್” ಪ್ರಮಾಣಪತ್ರ ವಾಪಸ್ ಪಡೆಯುವ ಬಗ್ಗೆಯೂ ಯೋಚಿಸಲೇ ಇಲ್ಲ!!
ಅಷ್ಟೇ ಅಲ್ಲ, ಮೋದಿ ಸರ್ಕಾರದ ಆರೋಗ್ಯ ಇಲಾಖೆಯ ಸಹಾಯಕ ಮಂತ್ರಿಣಿ ಲೋಕಸಭೆಯಲ್ಲೇ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದಿದ್ದರು! ಮೋದಿ ಬಳಗದ ಈ ಅಭಿಪ್ರಾಯ ಕೇಸರಿ ಸರ್ಕಾರ್-2ರಲ್ಲೂ ಬದಲಾಗಿಲ್ಲ. ಇಂಥದೇ ಮಾತು ಕೆಲದಿನಗಳ ಹಿಂದೆ ಪಾರ್ಲಿಮೆಂಟ್ನಲ್ಲಿ ಆರೋಗ್ಯ ಇಲಾಖೆಯ ಮರಿ ಮಂತ್ರಿ ಹೇಳಿದ್ದರು. ಇಷ್ಟಾದರೂ ರಾಜ್ಯದ ಅಡಿಕೆ ಏರಿಯಾದ ಸಂಸದ ಶಿಖಾಮಣಿಗಳು ತಲೆ ಕೆಡಿಸಿಕೊಳ್ಳಲಿಲ್ಲ. ಯಾವಾಗ ಅಡಿಕೆ ತೋಟಿಗರಲ್ಲಿ ಹಾಹಾಕಾರ ಎದ್ದು ಬೊಬ್ಬೆ ಶುರುವಾಯಿತೋ ಆಗ ಬೆಚ್ಚಿಬಿದ್ದ ಸಂಸದರು ಶೋಭಕ್ಕನ ಮುಂದಿಟ್ಟುಕೊಂಡು ಆರೋಗ್ಯ ಮಂತ್ರಿಗೊಂದು ಮನವಿ ಕೊಟ್ಟು ಕೈತೊಳೆದುಕೊಂಡರು. ಆ ಫೋಟೋ ಟಿವಿ-ಪತ್ರಿಕೆಗಳಲ್ಲೂ ಹಾಕಿಸಿಕೊಂಡು ಯಥಾಪ್ರಕಾರ ತಾವು ಅಡಿಕೆ ಬೆಳೆಗಾರರ ಉದ್ಧಾರಕ್ಕೆಂದೇ ಜೀವತಳೆದ ಎಂಪಿಗಳೆಂಬಂತೆ ಪೋಸುಕೊಟ್ಟರು.
ಅಡಿಕೆ ಬೆಳೆಗಾರರು ಮಾತ್ರ ಈ ಗಿಮಿಕ್ ಸಂಸದರನ್ನು ನಂಬುವ ಸ್ಥಿತಿಯಲ್ಲಿಲ್ಲ. ಗುಟ್ಕಾ ನಿಷೇಧವಾದಾಗ ಅಡಿಕೆ ಮಾರುಕಟ್ಟೆಯಲ್ಲಿ ತಲ್ಲಣ ಆಗಿತ್ತಾದರೂ ಆರೊಗ್ಯದ ಕಾರಣಕ್ಕೆ ಏನೂ ಮಾಡದಂತಾಗಿತ್ತು. ಆದರೆ ತೀರಾ ಈಚೆಗೆ ರಾಜಸ್ಥಾನ ಸೇರಿದಂತೆ ಮುಂತಾದ ರಾಜ್ಯಗಳಲ್ಲಿ ಸುವಾಸನೆಯ ಸಿಹಿ ಅಡಿಕೆ ಮಾರಾಟವನ್ನು ನಿಷೇಧಿಸಲಾಯಿತು. ಆಗಲೂ ಅಡಕೆ ಬೆಳೆಗಾರರ ಗೋಳು ಆರು ಸಂಸದರಿಗೆ ಅರ್ಥವಾಗಲಿಲ್ಲ!! ಮೋಸಗಾರರ ಗೆಲ್ಲಿಸಿದ ಪ್ರಾರಬ್ಧಕ್ಕೆ ಅಡಿಕೆ ಬೆಳೆಗಾರರೀಗ ಹಣೆಹಣೆ ಚಚ್ಚಿಕೊಳ್ಳುತ್ತಿದ್ದಾರೆ. ಈಗ ಆಳುವ ಬಿಜೆಪಿಯವರಿಂದ ಅಡಿಕೆ ತೋಟಗಾರಿಕೆಗೆ ಆರ್ಸಿಇಪಿ (ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ)ಯ ಕಂಟಕ ಎದುರಾಗಿದೆ. ಆಗ್ನೇಯ ಏಷ್ಯಾದ 16 ದೇಶಗಳ ಜತೆ ಮುಕ್ತ ಮಾರುಕಟ್ಟೆ ವ್ಯವಹಾರಕ್ಕೆ ಭಾರತವನ್ನು ತೊಡಗಿಸಲು ಮೋದಿ ಮಾಮ ಸಿದ್ಧವಾಗಿದ್ದಾರೆ. ಇದು ಅಡಿಕೆ ಕೃಷಿಯಿಂದ ಜೀವನ ನಡೆಸುತ್ತಿರುವವರ ಬದುಕು ಬರಿದಾಗಿಸುವುದು ಗ್ಯಾರಂಟಿ.
ಮೋದಿಯ ಆರ್ಸಿಇಪಿ ಒಪ್ಪಂದ ಸಾಂಪ್ರದಾಯಿಕ ಅಡಿಕೆ ಬೆಳೆಗಾರರನ್ನು ಹೈರಾಣಾಗಿಸಲಿದೆ. ಸಣ್ಣ ಹಿಡುವಳಿದಾರರಿಂದ ಮುಕ್ತ ಮಾರುಕಟ್ಟೆಯಲ್ಲಿ ಪೈಪೋಟಿ ಮಾಡಲು ಸಾಧ್ಯವಿಲ್ಲ. 16 ರಾಷ್ಟ್ರಗಳ ನಡುವೆ ವಾಣಿಜ್ಯ, ಕೃಷಿ, ಹಾಲಿನ ಉತ್ಪನ್ನಗಳ ಮುಕ್ತ ಮಾರುಕಟ್ಟೆಗೆ ಅವಕಾಶ ಕೊಡುವುದು ಮತ್ತು ಆಮದು-ರಫ್ತು ನೀತಿ ಸರಳೀಕರಿಸುವುದು ಆರ್ಸಿಇಪಿ ಒಪ್ಪಂದದ ಮುಖ್ಯ ಉದ್ದೇಶ. ಸದ್ಯಕ್ಕೆ ದೊಡ್ಡಮಟ್ಟದ ತೆರಿಗೆ ಆಮದು ಅಡಿಕೆಗೆ ವಿಧಿಸಿದರೂ ಒಪ್ಪಂದದಂತೆ ಮುಂದಿನ 12 ವರ್ಷದಲ್ಲಿ ಎಲ್ಲಾ ಆಯಾತ-ನಿಯಾತ ಸಂಕ ತೆಗೆಯಬೇಕೆಂಬುದು ಒಪ್ಪಂದದ ಕರಾರು. ಆಗ ಆಗ್ನೇಯ ಏಷ್ಯಾದ 15 ರಾಷ್ಟ್ರಗಳ ಅಡಿಕೆ ರೈತರ, ಬಂಡವಾಳಿಗರ ಜತೆ ನಾವು ಪೈಪೋಟಿ ಮಾಡಬೇಕಾಗುತ್ತದೆ. ಆಗ ಸ್ಥಳೀಯ ಅಡಿಕೆ ತೋಟಿಗರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದು ಖಂಡಿತ!!
ಸದ್ಯಕ್ಕೆ ನಾವು ಆರ್ಸಿಇಪಿಗೆ ಸಹಿ ಹಾಕುವುದಿಲ್ಲ ಎಂದು ಮೋದಿ ಮಾಮ ಹೇಳಿದ್ದಾರೆ. ಇದಕ್ಕೆ ಕಾರಣ ಡೈರಿ ಉದ್ಯಮದ ಮೇಲೆ ಬೀರುವ ದುಷ್ಪರಿಣಾಮಗಳನ್ನು ಅರಿತ ಜನ ಬೀದಿಗಿಳಿದು ಹೋರಾಡಿದರು. ಒಂದೊಂದು ತಾಲ್ಲೂಕು ಕೇಂದ್ರದಲ್ಲಿಯೂ ಹತ್ತಾರು ಸಾವಿರ ಜನ ಆರ್ಸಿಇಪಿ ವಿರುದ್ಧ ಪ್ರತಿಭಟಿಸಿದರು. ಹಾಗಾಗಿ ಸರ್ಕಾರ ಬೆದರಿದೆ. ಆದರೆ ಇನ್ನು ಮೂರು ತಿಂಗಳಲ್ಲಿ ಸಹಿ ಹಾಕಲೇಬೇಕಾದ ಒತ್ತಡ ಸರ್ಕಾರಕ್ಕಿದೆ. ಆಗ ಡೈರಿ ಉದ್ದಿಮೆಯನ್ನು ಹೊರಗಿಟ್ಟು ಸಹಿ ಹಾಕುವ ತೀರ್ಮಾನವನ್ನು ಭಾರತ ತೆಗೆದುಕೊಳ್ಳಬಹುದು. ಆಗ ಮತ್ತೆ ಅಡಿಕೆ ಬೆಳೆಗಾರರಿಗೆ ಕುತ್ತು ಬರುವುದರಲ್ಲಿ ಸಂದೇಹವಿಲ್ಲ.
ಇದೆಲ್ಲ ಅಡಿಕೆ ಬೆಳೆಗಾರರ ಯಾಮಾರಿಸಿ ಗೆದ್ದಿರುವ ಕರ್ಮಗೇಡಿ ಆರು ಸಂಸದರಿಗೆ ಅರ್ಥವಾಗಿದೆಯೋ ಇಲ್ಲವೋ? ಅಕಸ್ಮಾತ್ ಅರ್ಥವಾದರೂ ಹೆಡ್ ಮಾಸ್ಟರ್ ಮೋದಿ ಎದುರು ನಿಂತು ಸಮಸ್ಯೆ ಹೇಳುವ ನೈತಿಕ ಧೈರ್ಯ ಇರ್ಯಾರಿಗೂ ಇಲ್ಲ!! ಆರ್ಸಿಇಪಿ ಒಪ್ಪಂದದಲ್ಲಿ ಅಡಿಕೆಯನ್ನು ಋಣಾತ್ಮಕ ಪಟ್ಟಿಗೆ ಸೇರಿಸಿದರೆ ಬೆಳೆಗಾರರಿಗೆ ತೊಂದರೆ ತಪ್ಪುತ್ತದೆ. ಋಣಾತ್ಮಕ ಪಟ್ಟಿಯಲ್ಲಿ ಅಡಿಕೆಯಿದ್ದರೆ ಮುಕ್ತ ಆಮದಿಗೆ ಅವಕಾಶವಿರದು. ಇರುವ ಮೂರು ತಿಂಗಳಲ್ಲಿ ಇಂಥದೊಂದು ಪ್ರಯತ್ನ ಪ್ರಾಮಾಣಿಕವಾಗಿ ಆರು ಸಂಸದರು ಮಾಡಿ ತಮ್ಮನ್ನು ಗೆಲ್ಲಿಸಿದವರ ಋಣ ತೀರಿಸುವರಾ? ಅಥವಾ ಮೋದಿ ಕೆಂಗಣ್ಣಿಗೆ ಗುರಿಯಾಗಿ ಹೆದರಿ ಹೇತ್ಲಾಂಡಿಗಳೆಂದು ಇತಿಹಾಸದಲ್ಲಿ ದಾಖಲಾಗುವರಾ?