ಅತಿವೃಷ್ಟಿಯ ನಂತರ ಸಾಂಕ್ರಾಮಿಕ ರೋಗಗಳ ಹಾವಳಿ : ಐದು ಮಕ್ಕಳು ಸಾವು
ಹುಬ್ಬಳ್ಳಿಯಲ್ಲಿ ಅತಿವೃಷ್ಟಿಯ ನಂತರ ಸಾಂಕ್ರಾಮಿಕ ರೋಗಗಳ ಹಾವಳಿ ಶುರುವಾಗಿದೆ.
ಹೌದು.. ಅಧಿಕ ಮಳೆಗೆ ಜನ-ಜಾನುವಾರಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಳೆದ ಹದಿನೈದು ದಿನಗಳಲ್ಲಿ ಶಂಕಿತ ಡೆಂಗಿ ಜ್ವರಕ್ಕೆ ಐವರು ಮಕ್ಕಳು ಬಲಿಯಾಗಿದ್ದಾರೆ.
ಆಸಾರಹೊಂಡದ ಮಾಹಿರಾ ಅಬ್ದುಲ್ಖಾದರ್ ಜುಂಗುರ(4), ಮೆಹಬಿನ್ತಾಜ್ ಮಹ್ಮದಗೌಸ್ ಜುಂಗುರ(10), ಆನಂದನಗರದ ಅಮೂಲ್ಯ ಹನುಮಂತ ಸವಣೂರ(9), ವಿದ್ಯಾನಗರ ಶೌರ್ಯ ಪವಾರ್ (5) ಹಾಗೂ ಸೆಟಲ್ಮೆಂಟ್ನ ಒಂದು ಮಗು ಶಂಕಿತ ಡೆಂಗಿಗೆ ಬಲಿಯಾದವರು.
ಜಿಲ್ಲಾಡಳಿತ ಮತ್ತು ಪಾಲಿಕೆ ನಿರ್ಲಕ್ಷಕ್ಕೆ ಡೆಂಗಿ ಮಹಾಮಾರಿ ಹಾವಳಿ ಹೆಚ್ಚಾಗಲು ಕಾರಣ ಎನ್ನುವ ಆರೋಪ ಕೇಳು ಬರುತ್ತಿದೆ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಇನ್ನೂ ನೂರಾರು ಮಕ್ಕಳು ಹುಬ್ಬಳ್ಳಿಯ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.