ಒಂದೇ ವೇದಿಕೆ ಹಂಚಿಕೊಂಡ ರಾಜಕೀಯ ಬದ್ದ ವೈರಿಗಳು : ಸಿದ್ದು ಮತ್ತು ಪ್ರಸಾದ್ ಸಮಾಗಮ
ಮೈಸೂರಿನ ಟಿ.ನರಸೀಪುರದಲ್ಲಿ ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಸಮಾಗಮವಾಗಿದೆ. ರಾಜಕೀಯ ಬದ್ದ ವೈರಿಗಳಾದ ಇವರು ಒಂದೇ ವೇದಿಕೆ ಹಂಚಿಕೊಂಡ ಘಟನೆ ನಡೆದಿದೆ.
ಹೌದು.. ತಾಲೂಕು ಕಚೇರಿ ಮುಂದೆ ನಿರ್ಮಿಸಿರುವ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿ ಸಂಸದ ಶ್ರೀನಿವಾಸ್ ಪ್ರಸಾದ್ಗಾಗಿ ಕಾದು ನಿಂತ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಸಾದ್ ಆಗಮಿಸಿದ ನಂತರವೆ ಪುತ್ಥಳಿ ಅನಾವರಣ ಮಾಡಿದ್ದಾರೆ.
ನಂತರ ವೇದಿಕೆ ಕಾರ್ಯಕ್ರಮದಲ್ಲಿ ಪ್ರಸಾದ್ ಹಾಗೂ ಸಿದ್ದು ಒಟ್ಟಾಗಿ ಭಾಗವಹಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಮಹದೇವಪ್ಪ, ಶಾಸಕರಾದ ಯತೀಂದ್ರ, ಅಶ್ವಿನ್ ಭಾಗಿಯಾಗಿದ್ದರು. ಇದೇ ಮಹದೇವಪ್ಪ ಪುತ್ರ ಸುನೀಲ್ ಬೋಸ್ ಹಾಗೂ ಸಿದ್ದರಾಮಯ್ಯ ಪುತ್ರ ಯತೀಂದ್ರ ಜೊತೆ ಶ್ರೀನಿವಾಸ್ ಪ್ರಸಾದ್ ಆತ್ಮೀಯವಾಗಿ ಮಾತನಾಡಿದ್ದು ಆಶ್ಚರ್ಯ ಮೂಡಿಸಿದೆ.
ಈ ವೇಳೆ ಹುಣಸೂರು ಪ್ರತ್ಯೇಕ ಜಿಲ್ಲೆ ವಿಚಾರ ಮಾತನಾಡಿದ ಸಿದ್ದರಾಮಯ್ಯ ಅವರು,30 ಕಿ.ಮೀ ಗೊಂದು ಜಿಲ್ಲೆ ಮಾಡೋಕಾಗುತ್ತಾ? ಈಗ ಮೈಸೂರು ಜಿಲ್ಲೆ ವಿಭಜನೆ ಅಗತ್ಯವಿಲ್ಲ. ಇರೋದೆ ಆರು ತಾಲೂಕು ಅದನ್ನ ಮೂರು ಮೂರು ಮಾಡೋಕೆ ಆಗುತ್ತ. ಇದು ವೈಜ್ಞಾನಿಕವಾಗಿಯು ಸರಿಯಲ್ಲ,ಇದು ಒಳ್ಳೆ ಬೆಳವಣಿಗೆಯು ಅಲ್ಲ. ವೈಯುಕ್ತಿಕವಾಗಿ ನನಗೆ ಇಷ್ಟ ಇಲ್ಲ. ನಾನು ವಿಶ್ವನಾಥ್ ಹೇಳಿಕೆಯನ್ನು ನೋಡಿಲ್ಲ, ಮಂಜುನಾಥ್ ಹೇಳಿಕೆಯನ್ನು ನೋಡಿಲ್ಲ. ಚುನಾವಣೆ ಇದೆ, ಅದಕ್ಕೆ ಬಹುಶಃ ಅವರು ಮಾತನಾಡುತ್ತಿರಬಹುದು. ಆದ್ರೆ ಮೈಸೂರು ವಿಭಜನೆಯ ಅಗತ್ಯವಿಲ್ಲ ಎಂದು ಟಿ.ನರಸೀಪುರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.