ಗಾಢ ನಿದ್ರೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ- ಬಸಿ ನೀರು ಹೊಕ್ಕು ಆಲಮಟ್ಟಿಯಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ
ಅಧಿಕಾರಿಗಳು ಮತ್ತು ಸಿಬ್ಬಂದಿಯ ನಿದ್ರಾವಸ್ಥೆಯಿಂದಾಗಿ ಆಲಮಟ್ಟಿ ಜಲವಿದ್ಯುತ್ ಘಟಕಗಳು ನೀರಿನಲ್ಲಿ ಮುಳುಗಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡ ಘಟನೆ ನಡೆದಿದೆ.
ರಾತ್ರಿ ಪಾಳಿಯಲ್ಲಿ ಡ್ಯೂಟಿ ಬಿಟ್ಟು ನೈಟ್ ಶಿಫ್ಟ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಿದ್ದೆಗೆ ಜಾರಿದ ಪರಿಣಾಮ ಆಲಮಟ್ಟಿ ಜಲಾಷಯಕ್ಕೆ ಹರಿದು ಬರುತ್ತಿರುವ ನೀರು ವಿದ್ಯುತ್ ಉತ್ಪಾದನೆ ಘಟಕಗಳಿಗೆ ನುಗ್ಗಿದೆ. ಪರಿಣಾಮ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದ ಆರೂ ಘಟಕಗಳು ಜಲಾವೃತವಾಗಿದ್ದು, ನಿನ್ನೆ ಬೆಳಗಿನ ಜಾವದಿಂದಲೇ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ.
ಪ್ರತಿನಿತ್ಯ 6 ಘಟಕಗಳ ಮೂಲಕ 290 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಈ ವಿದ್ಯುತ್ ಉತ್ಪಾದನೆ ಘಟಕಗಳನ್ನು ಸ್ಥಗಿತಗೊಳಿಸಿದ್ದರಿಂದ ದಿನವೊಂದಕ್ಕೆ 6.70 ದಶಲಕ್ಷ ಯುನಿಟ್ ವಿದ್ಯುತ್ ಸ್ಥಗಿತವಾಗಿದೆ.
ಆಲಮಟ್ಟಿ ಜಲಾಷಯದಿಂದ ಹೆಚ್ಚವರಿ ನೀರನ್ನು ವಿದ್ಯುತ್ ಉತ್ಪಾದನೆ ಘಟಕಗಳ ಮೂಲಕ ಹೊರ ಬಿಡಲಾಗುತ್ತದೆ. ಈ ನೀರನ್ನು ಹೊರ ಬಿಡುವಾಗ ಬಸಿ ನೀರು ಸಂಗ್ರಹವಾಗುತ್ತದೆ. ಈ ಬಸಿ ನೀರನ್ನು ಪಂಪ್ಸೆಟ್ಗಳ ಮೂಲಕ ಹೊರ ಹಾಕಲಾಗುತ್ತದೆ. ಆದರೆ, ಮೊನ್ನೆ ರಾತ್ರಿ ಪಾಳಿಯಲ್ಲಿದ್ದ ಕೆಪಿಸಿಎಲ್ ಅಧಿಕಾರಿಗಳು ಮತ್ತು ಸಿಬ್ಬಂದಿ ಗಡಧ್ ನಿದ್ರೆಗೆ ಜಾರಿದ್ದರಿಂದ ಪಂಪಸೆಟ್ ಸ್ಥಗಿತಗೊಂಡಿದನ್ನು ಗಮನಿಸಿಲ್ಲ. ಅಲ್ಲದೇ, ಹೆಚ್ಚುವರಿ ಪಂಪಸೆಟ್ ಕೂಡ ನಿರ್ವಹಣೆ ಇಲ್ಲದೆ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಬಸಿ ನೀರು ನುಗ್ಗಿ ಎಲ್ಲ ಆರೂ ವಿದ್ಯುತ್ ಉತ್ಪಾದನೆ ಘಟಕಗಳು ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸವೆ.
ವಿದ್ಯುತ್ ಉತ್ಪಾದನೆ ಘಟಕಗಳಲ್ಲಿ ಹೆಚ್ಚುವರಿ ನೀರು ಹೊರ ಹಾಕುತ್ತಿದ್ದ 120 ಎಚ್ ಪಿ ಸಾಮರ್ಥ್ಯದ ಮೂರು ಬೃಹತ್ ವಾಟರ್ ಲಿಫ್ಟಿಂಗ್ ಮೋಟಾರಗಳು ಸಹ ಸುಟ್ಟು ಭಸ್ಮವಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಿದ್ಯುತ್ ಉತ್ಪಾದನೆಗೂ ಹಿನ್ನೆಡೆಯಾಗಿದೆ. ಈ ಕುರಿತು ಕೆಪಿಸಿಎಲ್ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅಧಿಕಾರಿಗಳು ಮೊಬೈಲ್ ಕರೆ ಸ್ವೀಕರಿಸದಿರುವುದು ಅವರ ನಿರ್ಲಕ್ಷ್ಕಕ್ಕೆ ಸಾಕ್ಷಿಯಾಗಿತ್ತು.
ಬೇಜವಾಬ್ದಾರಿ ತೋರಿದ ಸಿಬ್ಬಂದಿ ವಿರುದ್ಧ ಕೆಪಿಸಿಎಲ್ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.