ನಾಡಿನಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ : ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಬಲು ಜೋರು
ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಶ್ರೀಸಾಮಾನ್ಯನಿಗೆ ಇಂದಿನಿಂದ ಹಲವು ಸೇವೆಗಳ ದರ ಏರಿಕೆಯಾಗಿರುವ ಕಾರಣ ದುನಿಯಾ ದುಬಾರಿಯಾಗಿದೆ. ಇದರ ಮಧ್ಯೆಯೂ ಗೌರಿ-ಗಣೇಶ ಹಬ್ಬದ ಸಂಭ್ರಮ ನಾಡಿನಾದ್ಯಂತ ಕಂಡು ಬರುತ್ತಿದೆ. ಈಗಾಗಲೇ ಹಬ್ಬದ ಸಡಗರ ಎಲ್ಲೆಡೆ ಕಳೆಕಟ್ಟಿದ್ದು, ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಬಲು ಜೋರಾಗಿ ಸಾಗಿದೆ.
ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಜನಸಾಗರವೇ ಕಂಡು ಬರುತ್ತಿದೆ. ಪೂಜಾ ಸಾಮಾಗ್ರಿಗಳು, ಹೊಸ ಬಟ್ಟೆ, ಹಣ್ಣು, ಹೂ ಖರೀದಿಯಲ್ಲಿ ಜನತೆ ತೊಡಗಿದ್ದಾರೆ.
ಈ ಬಾರಿ ಗೌರಿ-ಗಣೇಶ ಹಬ್ಬ ಒಟ್ಟಿಗೇ ಬಂದಿದ್ದು, ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಗೌರಿ-ಗಣೇಶ ವಿಗ್ರಹಗಳು ಮಾರಾಟವಾಗಲು ಸಿದ್ದವಾಗಿವೆ. ಶಿವಲಿಂಗದ ಮೇಲೆ ಪ್ರತಿಷ್ಠಾಪಿತಗೊಂಡ ಗಣಪತಿ, ಕೃಷ್ಣನ ಅಲಂಕಾರದ ಗಣಪತಿ, ಕಾಳಿಂಗ ಮರ್ಧನ ಗಣಪತಿ, ಗೋವಿನ ಬಳಿ ಕುಳಿತಿರುವ ಗಣಪತಿ ಹೀಗೆ ನಾನಾ ಭಂಗಿಯ ಗಣಪತಿ ವಿಗ್ರಹ ಗಮನ ಸೆಳೆಯುತ್ತಿವೆ.
ಈಗಾಗಲೇ ಬೆಲೆ ಏರಿಕೆಯಿಂದ ಶ್ರೀಸಾಮಾನ್ಯರು ತತ್ತರಿಸಿರುವ ಜೊತೆಗೆ ಹಬ್ಬದ ಹಿನ್ನೆಲೆಯಲ್ಲಿ ತರಕಾರಿ, ಹಣ್ಣು, ಹೂಗಳ ಬೆಲೆಯಲ್ಲಿ ಮತ್ತಷ್ಟು ಏರಿಕೆ ಕಂಡಿದೆ. ಅಲ್ಲದೇ ಪ್ರಮುಖ ಸ್ಥಳಗಳಲ್ಲಿ ಬಾಳೆಕಂದು, ಮಾವಿನ ಸೊಪ್ಪು ಮಾರಾಟ ಜೋರಾಗಿ ಸಾಗಿದೆ.