ಪತ್ನಿ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ಪತಿ…..!
ಪತಿಯೊಬ್ಬ ತನ್ನ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ನಡೆದಿದೆ.
48 ವರ್ಷದ ಸುರೇಶ ಸಂಗಪ್ಪ ಸಜ್ಜನ ತನ್ನ ಪತ್ನಿ 38 ವರ್ಷದ ರತ್ನಾಳನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾಲಗಾರರ ಕಿರಿಕಿರಿಯಿಂದ ಪತಿ-ಪತ್ನಿ ನಡುವೆ ನಡೆದ ವಾಗ್ವಾದ ನಡೆದಿದೆ. ಸಾಲಗಾರರ ಕಿರಿಕಿರಿಗೆ ಬೇಸತ್ತಿದ್ದ ಪತ್ನಿ ರತ್ನಾ ಸುರೇಶ ಸಜ್ಜನ ಈ ಕುರಿತು ತನ್ನ ಪತಿಗೆ ಪ್ರಶ್ನೆ ಮಾಡಿದ್ದಳು ಎನ್ನಲಾಗಿದೆ. ಇದರಿಂದ ಕೋಪಗೊಂಡ ಪತಿ ಸುರೇಶ ಸಂಗಪ್ಪ ಸಜ್ಜನ ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು ಪತ್ನಿಯನ್ನು ಕೊಲೆ ಮಾಡಿದ್ದಾನೆ. ಇವರಿಗೆ ಇಬ್ಬರು ಪುತ್ರರಿದ್ದು, ಈ ಘಟನೆಯ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.
ಸುರೇಶ ಸಂಗಪ್ಪ ಸಜ್ಜನ 2.50 ಎಕರೆ ಜಮೀನು ಹೊಂದಿದ್ದ. ಈ ಹೊಲಕ್ಕೆ ನೀರಾವರಿ ಸೌಲಭ್ಯ ಒದಗಿಸಲು ತನ್ನ ಹೊಲದಲ್ಲಿ ಭಾವಿ ತೋಡಿಸಿದ್ದ. ಆದರೆ, ಬಾವಿಯಲ್ಲಿ ನೀರು ಬತ್ತಿ ಹೋಗಿ ಸಮಸ್ಯೆಯಾಗಿತ್ತು. ಈ ಭಾವಿ ತೋಡಿಸಲು ಈತ ಸುಮಾರು ನಾಲ್ಕೈದು ಲಕ್ಷ ರೂಪಾಯಿ ಸಾಲ ಮಾಡಿದ್ದ ಎನ್ನಲಾಗಿದೆ. ಸಾಲಗಾರರು ಹಣ ಮರಳಿಸುವಂತೆ ಕೇಳಿದಾಗ ಈತ ತವರು ಮನೆಯಿಂದ ಹಣ ತರುವಂತೆ ಪತ್ನಿ ಜೊತೆ ಜಗಳ ಮಾಡುತ್ತಿದ್ದ. ಇಂದೂ ಸಹ ಅದೇ ವಿಷಯಕ್ಕೆ ಇಬ್ಬರ ಮಧ್ಯೆ ಜಗಳ ಉಂಟಾಗಿದೆ. ಆಗ ಸಿಟ್ಟಿನ ಭರದಲ್ಲಿ ಸುರೇಶ ಸಂಗಪ್ಪ ಸಜ್ಜನ ತನ್ನ ಪತ್ನಿ ರತ್ನಾ ಮೇಲೆ ಕಬ್ಬಿಣದ ರಾಡ್ ನಿಂದ ಜೋರಾಗಿ ಹೊಡೆದ ಪರಿಣಾಮ ಆಕೆ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಳೆ. ಇದರಿಂದ ಭಯಭೀತನಾಗಿ ತಾನೂ ತನ್ನ ಹೆಂಡತಿ ಶವದ ಪಕ್ಕದಲ್ಲಿಯೇ ನೇಣಿಗೆ ಹಾಕಿಕೊಂಡು ಆತ್ಮಹ್ತಯೆ ಮಾಡಿಕೊಂಡಿದ್ದಾನೆ.
ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಪಿಎಸ್ಐ ಮಲ್ಲಪ್ಪ ಮಡ್ಡಿ ಮತ್ತು ಸಿಬ್ಬಂದಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.