ಪ್ರವಾಹ ಪೀಡಿತ ಪ್ರದೇಶಕ್ಕೆ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಭೇಟಿ….
ಗದಗ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಕ್ಕೆ ಇಂದು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಇಂದು ಭೇಟಿ ನೀಡಿದ್ರು.
ಗದಗ ಜಿಲ್ಲೆ ನರಗುಂದ ತಾಲೂಕಿನ ಪ್ರವಾಹ ಪೀಡಿತ ಕೊಣ್ಣೂರು ಗ್ರಾಮಕ್ಕೆ ಭೇಟಿ ನೀಡಿದ ಅವರು, ಸಂತ್ರಸ್ತರ ಕಷ್ಟಗಳನ್ನು ಆಲಿಸಿ, ಗ್ರಾಮದ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿ ನಂತ್ರ ಜಿಲ್ಲಾಡಳಿತ ಕೈಗೊಂಡಿರೋ ಸಂತ್ರಸ್ಥರ ತಾತ್ಕಾಲಿಕ ಶೆಡ್ ಗಳನ್ನು ವೀಕ್ಷಣೆ ಮಾಡಿದ್ರು. ಅಲ್ಲದೇ ಗ್ರಾಮದಲ್ಲಿ ಪ್ರವಾಹಕ್ಕೆ ಸಿಕ್ಕು ಕುಸಿದು ಬಿದ್ದ ಮನೆಗಳನ್ನು ಕಣ್ಣಾರೆ ಕಂಡು ಮಮ್ಮಲ ಮರಗಿದ್ರು.
ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇನ್ಫೋಸಿಸ್ ಪ್ರತಿಷ್ಠಾನದ ವತಿಯಿಂದ ಈಗಾಗಲೇ ಹತ್ತುಕೋಟಿ ರೂಪಾಯಿ ಸಿಎಂ ನೆರೆ ಪರಿಹಾರ ನಿಧಿಗೆ ಘೋಷಣೆ ಮಾಡಿದ್ದೇವೆ. ಆ ಮೊತ್ತದಲ್ಲಿ ನಾವು ಸಂತ್ರಸ್ತರಿಗೆ ಹೊಸ ಮನೆಗಳನ್ನು ಕಟ್ಟಿಕೊಡುವ ಸದುದ್ದೇಶ ಹೊಂದಲಾಗಿದ್ದು, ಈಗಾಗಲೇ ಇದರ ಹೊರತಾಗಿ ಐದು ಕೋಟಿ ಮೊತ್ತದಲ್ಲಿ ಸಂತ್ರಸ್ತರಿಗೆ ದಿನನಿತ್ಯದ ಸಾಮಾಗ್ರಿಗಳ ಕಿಟ್ ತಯಾರಿಸಿ ವಿತರಣೆ ಮಾಡಲಾಗಿದೆ. ಇಂದೂ ಸಹ ಜಾನುವಾರಗಳಿಗೆ ನಾಲ್ಕು ಲಾರಿಗಳ ಮೇವನ್ನು ವಿತರಣೆ ಮಾಡಲಾಗಿದೆ ಎಂದ್ರು.
ಪದೇ ಪದೇ ಪ್ರವಾಹಕ್ಕೊಳಗಾಗುವ ಇಂತಹ ಗ್ರಾಮಗಳನ್ನು ಸರಕಾರ ಗುರುತಿಸಿ ಬೇರೆ ಕಡೆ ನಿರ್ಮಿಸಬೇಕು. ಅಲ್ಲದೇ ನಮ್ಮ ಇನ್ಫೋಸಿಸ್ ಪ್ರತಿಷ್ಠಾನದ ವತಿಯಿಂದ ಈಗಾಗಲೇ ಹಲವು ನೆರೆಪೀಡಿತ ಪ್ರದೇಶಗಳಲ್ಲಿ ನೂತನ ಮನೆಗಳನ್ನು ನಿರ್ಮಿಸಿಕೊಟ್ಟಿದ್ದೆವೆ. ಅದೇ ರೀತಿ ಗದಗ ಜಿಲ್ಲೆಯಲ್ಲೂ ಪ್ರವಾಹ ಪೀಡಿತರಿಗೆ ಮನೆಗಳನ್ನು ಕಟ್ಟಿಕೊಡಲು ಸಿದ್ಧರಿದ್ದೇವೆ. ಸರಕಾರ ಎಷ್ಟು ಬೇಗ ಜಾಗ ಗುರುತಿಸಿ ನಮಗೆ ನೀಡುತ್ತದೆಯೋ ಅಷ್ಟು ತುರ್ತಾಗಿ ಮನೆ ನಿರ್ಮಾಣ ಮಾಡಲಾಗುವುದು ಎಂದ್ರು.