ಬಿಜೆಪಿ ಮಹೇಶ್ ಕುಮಟಳ್ಳಿಯನ್ನ ಸೋಲಿಸುವ ಶಪಥ ಮಾಡಿದ ಲಕ್ಷ್ಮಿ ಹೆಬ್ಬಾಳ್ಕರ್
ಬಿಜೆಪಿಯ ಮಹೇಶ್ ಕುಮಟಳ್ಳಿ ವಿರುದ್ಧ ಲಕ್ಷ್ಮಿ ಅವಕೃಪೆ ತೋರಿದ್ದು, ಕುಮಟಳ್ಳಿಯನ್ನು ಸೋಲಿಸಿಯೇ ತೀರುತ್ತೇನೆಂದು ಶಪಥ ಮಾಡಿದ್ದಾರೆ.
ಹೆಚ್ಡಿಕೆ ನೇತೃತ್ವದ ಸಮ್ಮಿಶ್ರ ಸರ್ಕಾರ ಯಾರಿಂದ ಉರುಳಿತು. ಯಾರಿಗಾಗಿ ಉರುಳಿತು ಅನ್ನೋದು ಇಡೀ ರಾಜ್ಯಕ್ಕೆ ಗೊತ್ತಿದೆ. ಬೆಳಗಾವಿ ರಾಜಕೀಯದ ಕಿಡಿಯಿಂದ ಸಮ್ಮಿಶ್ರ ಸರ್ಕಾರದ ಬುಡಕ್ಕೆ ಬೆಂಕಿ ಬಿತ್ತು. ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಗುದ್ದಾಟ ಸಮ್ಮಿಶ್ರ ಸರ್ಕಾರವನ್ನೇ ಬಲಿ ಪಡೀತು.
ಇದೇ ಕಾರಣಕ್ಕೆ ಉಪಚುನಾವಣೆಯಲ್ಲಿ ಗೋಕಾಕ್ ಉಸ್ತುವಾರಿ ಪಡೆದುಕೊಂಡಿದ್ದ ಲಕ್ಷ್ಮಿ ಹೆಬ್ಬಾಳ್ಕರ್, ರಮೇಶ್ ಜಾರಕಿಹೊಳಿಗೆ ಸೆಡ್ಡು ಹೊಡೆದಿದ್ದರು. ಆದರೆ ಇದು ಬಹಳ ದಿನ ನಡೆಯಲಿಲ್ಲ. ನಾಮಪತ್ರ ಸಲ್ಲಿಸುವಷ್ಟರಲ್ಲೇ ಲಕ್ಷ್ಮಿಯನ್ನ ಗೋಕಾಕ್ನಿಂದ ಅಥಣಿಗೆ ಶಿಫ್ಟ್ ಮಾಡಲಾಯ್ತು. ಅದಕ್ಕೆ ಏನೋ, ಲಕ್ಷ್ಮೀ ಅಥಣಿಯಲ್ಲಿ ಪ್ರಚಾರಕ್ಕೆ ಬಂದಾಗ ಬೆಳಗಾವಿ ರಾಜಕೀಯನೇ ಬೇರೆ ಅಂತ ಅಸಮಾಧಾನ ಹೊರ ಹಾಕಿದ್ದರು.
ಅಥಣಿಗೆ ಸ್ಟಾರ್ ಪ್ರಚಾರಕಿಯಾಗಿ ಬಂದ ಲಕ್ಷ್ಮಿ ಸುಮ್ಮನಾಗಿಲ್ಲ. ಜಾರಕಿಹೊಳಿ ಮೇಲಿರುವ ಸಿಟ್ಟನ್ನು ಅಥಣಿ ಮುಖಾಂತರ ತೀರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಕುಮಟಳ್ಳಿ ಹೇಳಿ ಕೇಳಿ ರಮೇಶ್ ಜಾರಕಿಹೊಳಿ ಬಂಟ. ರಮೇಶ್ ಜಾರಕಿಹೊಳಿಗೆ ತಮ್ಮ ಗೆಲುವು ಎಷ್ಟು ಪ್ರಮುಖವೋ, ಅಷ್ಟೇ ಕುಮಟಳ್ಳಿ ಗೆಲುವು ಕೂಡ ಪ್ರಮುಖವಾಗಿದೆ. ಅದಕ್ಕೆ ಬಿಜೆಪಿ ಅಭ್ಯರ್ಥಿ ಕುಮಟಳ್ಳಿಯನ್ನ ಶತಾಯಗತಾಯ ಸೋಲಿಸಲೇಬೇಕು ಅಂತ ಶಪಥ ಮಾಡಿ ಬಿರುಸಿನ ಪ್ರಚಾರ ನಡೆಸ್ತಿದ್ದಾರೆ.
ಒಟ್ಟಿನಲ್ಲಿ ಲಕ್ಷ್ಮಿ ಒಂದೇ ಏಟಿನಲ್ಲಿ ರಮೇಶ್ ಮತ್ತು ಮಹೇಶ್ರನ್ನು ಸೋಲಿಸೋ ಮೂಲಕ ಎರಡು ಹಕ್ಕಿಯನ್ನ ಹೊಡೆಯಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೋ ಎಂಬುದನ್ನು ಕಾದು ನೋಡಬೇಕಾಗಿದೆ.