ಬಿಡುಗಡೆ ಭಾಗ್ಯ ಸಿಕ್ಕರು ಡಿ.ಕೆ.ಶಿವಕುಮಾರ್ ಗೆ ಮತ್ತೊಂದು ಕಂಟಕ?
ದೆಹಲಿಯ ತಿಹಾರ್ ಜೈಲಿನಿಂದ ಬಿಡುಗಡೆಯಾದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಗೆ ಮತ್ತೊಂದು ಕಂಟಕ ಶುರುವಾಗಿದೆ.
ಸ್ವಕ್ಷೇತ್ರದಲ್ಲೇ ಮಗ್ಗಲುಮುಳ್ಳಾದ ಒಂದು ಕಾಲದ ಸ್ನೇಹಿತ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಅವರು ಡಿಕೆಶಿ ವಿರುದ್ಧ ರಾಶಿರಾಶಿ ದಾಖಲೆ ಸಲ್ಲಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಳೆದ ಬಿಜೆಪಿ ಸರ್ಕಾರದಲ್ಲಿ ಅರಣ್ಯ ಮಂತ್ರಿಯಾಗಿದ್ದ ಸಿಪಿ ಯೋಗೇಶ್ವರ್, ಕನಕಪುರ ಕ್ಷೇತ್ರದಲ್ಲಿ ಡಿಕೆಶಿ ಒಡೆತನದ ಕಲ್ಲುಗಣಿಗಾರಿಕೆಗಳ ಮೇಲೆ ದಾಳಿ ನಡೆಸಿದ್ದರು. ಆಗ ಹಲವು ಕಲ್ಲುಗಣಿಗಾರಿಕೆಗಳನ್ನ ನಿಲ್ಲಿಸಿದ್ದರು. ಈ ಪ್ರಕರಣದ ಎಲ್ಲಾ ದಾಖಲೆಗಳನ್ನ ಇಡಿ ಅಧಿಕಾರಿಗಳಿಗೆ ಯೋಗೇಶ್ವರ್ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕೇಂದ್ರ ಬಿಜೆಪಿ ನಾಯಕರ ಮೂಲಕ ಇಡಿ, ಐಟಿ ಅಧಿಕಾರಿಗಳಿಗೆ ದಾಖಲೆಗಳು ಸಲ್ಲಿಕೆಯಾಗುತ್ತಿವೆ ಎನ್ನಲಾಗುತ್ತಿದೆ.
ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಹೆಚ್ಡಿಕೆ ಸಿಎಂ ಆಗಿದ್ದರು. ಆಗ ಕನಕಪುರಕ್ಕೆ ಯು.ವಿ.ಸಿಂಗ್ ರನ್ನ ನೇಮಕ ಮಾಡಿದ್ದರು ಹೆಚ್ಡಿಕೆ. ಇವರನ್ನು ಅಕ್ರಮ ಕಲ್ಲುಗಣಿಗಾರಿಕೆ ಹಾಗೂ ಅರಣ್ಯ ಭೂಮಿ ಒತ್ತುವರಿ ಪತ್ತೆ ಮಾಡಲು ನೇಮಿಸಲಾಗಿತ್ತು. ಆದರೆ ಯು.ವಿ.ಸಿಂಗ್ ವರದಿಯನ್ನ ನಂತರ ಅಧಿಕಾರ ನಡೆಸಿದ ಸರ್ಕಾರಗಳು ಪರಿಗಣಿಸಿಲ್ಲ.
ಈಗ ರಾಜ್ಯ ಸರ್ಕಾರಕ್ಕೆ, ರಾಜ್ಯ ಹೈಕೋರ್ಟ್ ಪ್ರಶ್ನೆ ಹಾಕುತ್ತಿದೆ. ನವೆಂಬರ್ 30 ರೊಳಗೆ ಯು.ವಿ.ಸಿಂಗ್ ವರದಿ ಒಪ್ಪಿಸುವಂತೆ ಸೂಚನೆ ನೀಡಲಾಗಿದ್ದು, ಈ ವಿಚಾರವಾಗಿ ಸಿ.ಪಿ.ಯೋಗೇಶ್ವರ್ ಫುಲ್ ಆಕ್ಟೀವ್ ಆಗಿದ್ದಾರೆ.
ಅಕ್ರಮ ಅರಣ್ಯ ಭೂಮಿ ಒತ್ತುವರಿ, ಕನಕಪುರದ ಅಕ್ರಮ ಕಲ್ಲುಗಣಿಗಾರಿಕೆ ಬಗ್ಗೆ ಮಾಹಿತಿ ಸಂಗ್ರಹಿಸಿರುವ ಸಿಪಿ ಯೋಗೇಶ್ವರ್, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅರಣ್ಯ ಮಂತ್ರಿಯಾಗಿದ್ದಾಗಿನಿಂದಲೂ ಡಿಕೆಶಿ ವಿರುದ್ಧ ಮಾಹಿತಿ ಸಂಗ್ರಹದಲ್ಲಿ ಸಿಪಿವೈ ಆಕ್ಟೀವ್ ಆಗಿದ್ದಾರೆ.
ಡಿಕೆಶಿ ಜೈಲಿಗೋದ ಬಳಿಕ ಹಲವು ಬಾರಿ ದೆಹಲಿಗೆ ಹೋಗಿರುವ ಸಿ.ಪಿ.ಯೋಗೇಶ್ವರ್, ಕೇಂದ್ರ ಬಿಜೆಪಿ ನಾಯಕರ ಸಹಾಯದಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ರಾಶಿರಾಶಿ ದಾಖಲೆಗಳು ಸಲ್ಲಿಕೆ ಮಾಡಿದ್ದಾರೆ. ತೆರೆಮರೆಯಲ್ಲಿ ಡಿ.ಕೆ.ಬ್ರದರ್ಸ್ ಮುಗಿಸಲು ಸಿ.ಪಿ.ಯೋಗೇಶ್ವರ್ ಮಾಸ್ಟರ್ ಪ್ಯ್ಲಾನ್ ನಡೆಸಿದ್ದಾರೆ ಎನ್ನಲಾಗುತ್ತಿದೆ.