ಮಲೆನಾಡಲ್ಲಿ ಮಳೆ ಅಬ್ಬರ – ಶಾಲಾ,ಕಾಲೇಜಿಗೆ ಹೋದ ವಿದ್ಯಾರ್ಥಿಗಳು ಮನೆಗೆ ಹಿಂದಿರುಗಲು ಹರಸಾಹಸ
ಎಂಟೇ ದಿನದ ಮಳೆಗೆ ಬದುಕನ್ನೇ ಮಣ್ಣಾಗಿಸಿದ್ದ ಜಲರಾಕ್ಷಸ ಕಾಫಿನಾಡಿನ ಮಲೆನಾಡು ಭಾಗಕ್ಕೆ ಮತ್ತೆ ಹಿಂದಿರುಗಿದ್ದಾನೆ. ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರೋ ಮಳೆಯಿಂದ ಮಲೆನಾಡಿಗರು ದಾರಿ ಕಾಣದಂತಾಗಿದ್ದಾರೆ.
ಮೂಡಿಗೆರೆ ತಾಲೂಕಿನಾದ್ಯಂತ ಸುರಿಯುತ್ತಿರೋ ಮಳೆ ಅಬ್ಬರಕ್ಕೆ ಜನ ಕಂಗಾಲಾಗಿದ್ದಾರೆ. ನಿರಾಶ್ರಿತ ಕೇಂದ್ರದಿಂದ ಊರಿಗೆ ತೆರಳಿದ್ದೋರು ಮತ್ತೆ ಊರು ಬಿಡುವ ಸ್ಥಿತಿ ನಿರ್ಮಾಣವಾಗಿದೆ. ಎನ್.ಆರ್.ಪುರ, ಶೃಂಗೇರಿ, ಕೊಪ್ಪದಲ್ಲಿ ಸಾಧಾರಣ ಮಳೆಯಾಗ್ತಿದ್ರೆ, ಮೂಡಿಗೆರೆಯಲ್ಲಿ ಮಾತ್ರ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ.
ಮೂಡಿಗೆರೆಯ ಚಾರ್ಮಾಡಿ ಘಾಟ್, ಜಾವಳಿ, ಊರಬಗೆ, ಹೊಸಕೆರೆ, ಕಳಸ, ದುರ್ಗದಹಳ್ಳಿ, ಬಣಕಲ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆಯಾಗ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಗ್ರಾಮೀಣ ಭಾಗದ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಮರಗಳು ಧರೆಗುರುಳಿವೆ.
ಶಾಲಾ-ಕಾಲೇಜಿಗೆ ಹೋದ ವಿದ್ಯಾರ್ಥಿಗಳು ಮನೆಗೆ ಹಿಂದಿರುಗಲು ಹರಸಾಹಸ ಪಡ್ತಿದ್ದಾರೆ. ಭಾರೀ ಮಳೆಯಿಂದ ತುಂಗಾ-ಭದ್ರಾ, ಹೇಮಾವತಿ ಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ನೀರಿನ ಹರಿವಿನ ಪ್ರಮಾಣ ಏರಿಕೆಯಾಗ್ತಿದ್ದಂತೆ, ಜನರ ಆತಂಕ ಕೂಡ ಹೆಚ್ಚುತ್ತಿದ್ದು, ಮಲೆನಾಡಿಗರು ಮಲೆನಾಡಿನ ಜೀವನವೇ ಬೇಡ, ಸರ್ಕಾರ ನಮ್ಮನ್ನ ಸ್ಥಳಾಂತರ ಮಾಡಲಿ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಮಳೆಯ ಹೆಚ್ಚುತ್ತಿದ್ದಂತೆ ಕುಸಿದಿದ್ದ ಬೆಟ್ಟ-ಗುಡ್ಡಗಳ ಅಕ್ಕಪಕ್ಕ ಮತ್ತೆ ಕುಸಿಯುವ ಭೀತಿ ಎದುರಾಗಿದೆ.