ಶೃಂಗೇರಿಯಲ್ಲಿ ವಿಶೇಷ ಪೂಜೆ : ಗೌರಿಗದ್ದೆ ಆಶ್ರಮದಲ್ಲಿ ಸಿಎಂ ಹೋಮ ಹವನ..!
ಸಿಎಂ ಯಡಿಯೂರಪ್ಪ ಕೂಡ ಮಾಜಿ ಸಿಎಂ ಕುಮಾರಸ್ವಾಮಿ ಹಾದಿಯಲ್ಲೇ ಸಾಗ್ತಿದ್ದಾರೆ. ಹಳ್ಳಿ ದಿಲ್ಲಿಯಾದ್ರೇನು, ದಿಲ್ಲಿ ಹಳ್ಳಿಯಾದ್ರೇನು. ಕುರ್ಚಿಯ ಕಾಲು ಗಟ್ಟಿಯಾಗಿದ್ರೆ ಸಾಕು ಎಂಬಂತಾಗಿದೆ. ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿ ಕೂಡ ಚಿಕ್ಕಮಗಳೂರಿನ ಶೃಂಗೇರಿ ಹಾಗೂ ಕೊಪ್ಪದಲ್ಲಿ ಸಾಕಷ್ಟು ಪೂಜೆ-ಹೋಮ-ಹವನ, ಯಾಗ ಯಜ್ಞ ನಡೆಸಿದ್ರು. ಇದೀಗ ಸಿಎಂ ಬಿಎಸ್ ವೈ ಕೂಡ ಕೊಪ್ಪದ ಗೌರಿಗದ್ದೆ ಆಶ್ರಮದಲ್ಲಿ ಶತರುದ್ರಯಾಗ ನಡೆಸಿದ್ದಾರೆ. ಆರು ದಿನಗಳಿಂದ ನಡೆಯುತ್ತಿದ್ದ ಹೋಮದ ಪೂರ್ಣಾಹುತಿಯಲ್ಲಿ ಭಾಗಿಯಾಗಿ, ಮುಂದಿನ ಮೂರುವರೆ ವರ್ಷ ಮುಖ್ಯಮಂತ್ರಿಯಾಗಿ ಇರಲೆಂದು ಬೇಡಿಕೊಂಡಿದ್ದಾರೆ.
ಸಿಎಂ ಯಡಿಯೂರಪ್ಪನವರ ಮಾತಿಗೂ ನಡೆಗೂ ಒಂದಕ್ಕೊಂದು ಸಂಬಂಧವೇ ಇಲ್ಲದಂತಾಗಿದೆ. ಯಾಕಂದ್ರೆ, ಇಂದು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಗೆ ಆಗಮಸಿದ ಬಿಎಸ್ ವೈ, ಹಿಂದೆ ಮಳೆ ಬರಲಿ ಎಂದು ಪೂಜೆ ಮಾಡ್ತಿದ್ವಿ, ಇವತ್ತು ಮಳೆ ಕಡಿಮೆಯಾಗ್ಲಿ ಎಂದು ಶಾರದಾಂಬೆಗೆ ಪೂಜೆ ಮಾಡ್ತಿದ್ದೇವೆಂದು ಹೇಳಿದ್ರು. ಆದ್ರೆ, ಕೊಪ್ಪ ತಾಲೂಕಿನ ಗೌರಿಗದ್ದೆ ಆಶ್ರಮದಲ್ಲಿ ಅಧಿಕಾರದ ಶಾಶ್ವತಕ್ಕಾಗಿ ಹಿಂದೆ ರಾಜ ಮಹರಾಜರು ಮಾಡ್ತಿದ್ದ ಶತರುದ್ರಯಾಗದಲ್ಲಿ ಪಾಲ್ಗೊಂಡಿದ್ರು. ಕಳೆದ ಆರು ದಿನಗಳಿಂದ ನಡೆಯುತ್ತಿದ್ದ ಯಾಗದ ಪೂರ್ಣಾಹುತಿಯ್ಲಲಿ ಭಾಗಿಯಾದ ಸಿಎಂ, ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಹೋಮದಲ್ಲಿ ಪಾಲ್ಗೊಂಡಿದ್ರು. ದೇವೇಗೌಡ, ರಮೇಶ್ ಕುಮಾರ್ ವಿನಯ್ ಗುರೂಜಿ ಪಾದ ಪೂಜೆ ಮಾಡಿದ್ದೆ ಈ ಕ್ಷೇತ್ರ ವಿಶೇಷವಾಗಿತ್ತು. ಆದ್ರೆ, ಇಲ್ಲಿವರೆಗೆ ಗೌರಿ ಗದ್ದೆ ಆಶ್ರಮದಲ್ಲಿ ಯಾರೂ, ಯಾವ ರಾಜಕಾರಣಿಯೂ ಹೋಮ-ಹವನ ಪೂಜೆ ಮಾಡಿರಲಿಲ್ಲ. ಬಿಎಸ್.ವೈ ಇಲ್ಲಿ ಹೋಮ-ಮಾಡುವ ಮೂಲಕ ಇಲ್ಲೂ ಕೂಡ ಯಾಗ-ಯಜ್ಞಗಳಿಗೆ ಮುನ್ನುಡಿ ಬರೆದಿದ್ದಾರೆ.
ಇನ್ನು ಬೆಳಗ್ಗೆ 10.30ಕ್ಕೆ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಶೃಂಗೇರಿಗೆ ಬಂದಿಳಿದ ಸಿಎಂ ಬಿಎಸ್ ವೈ ಶೃಂಗೇರಿಗೆ ಶಾರದಾಂಭೆಗೆ ವಿಶೇಷ ಪೂಜೆ ಸಲ್ಲಿಸಿದ್ರು. ಬಳಿಕ ಗುರುಭವನಕ್ಕೆ ಭೇಟಿ ನೀಡಿ, ಭಾರತೀ ತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರ ಸ್ವಾಮೀಜಿಯ ಆಶೀರ್ವಾದ ಪಡೆದ್ರು. ಶೃಂಗೇರಿಯಲ್ಲಿ ಅರ್ಧಗಂಟೆಯೊಳಗೆ ಶಾರದಾಂಬೆಯ ದರ್ಶನ ಹಾಗೂ ಗುರುಗಳ ಆರ್ಶೀವಾದ ಪಡೆದು ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆಗೆ ಬಂದ ಬಿಎಸ್ ವೈ ಸ್ವರ್ಣ ಪೀಠಿಕೇಶ್ವರಿ ದತ್ತಾಶ್ರಮದಲ್ಲಿ ಹೋಮದಲ್ಲಿ ಪಾಲ್ಗೊಂಡ್ರು. ಹೋಮದಲ್ಲಿ ಬಿಎಸ್ ವೈ ಜತೆ ಸಂಸದೆ ಶೋಭಾ ಕರಂದ್ಲಾಜೆ ಕೂಡ ಪೂರ್ಣ ಪ್ರಮಾಣದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಪೂಜೆಯ ಬಳಿಕ ದತ್ತಾಶ್ರಮದಲ್ಲೇ ಊಟ ಮಾಡಿದ ಬಿಎಸ್ ವೈ 2.45ಕ್ಕೆ ಬೆಂಗಳೂರಿಗೆ ಹಿಂದರುಗಿದ್ರು.
ಕಳೆದ ಬಾರಿ ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿದ ಬಿಎಸ್ವೈ, ಪ್ರವಾಹ ಪೀಡಿತ ಪ್ರದೇಶ ಮೂಡಿಗೆರೆ ತಾಲೂಕಿನ ಮಲೆಮನೆಗೆ ಕೇವಲ ಹತ್ತು ನಿಮಿಷ ಭೇಟಿ ಕೊಟ್ಟು ಹಿಂದಿರುಗಿದ್ರು. ಆದ್ರೆ ಈದಿನ ತುಂಬಾ ಪುರುಷೋತ್ತಾಗಿದ್ದ ಸಿಎಂ, ವಿನಯ್ ಗುರೂಜಿ ಆಶ್ರಮದಲ್ಲಿ ಬರೋಬ್ಬರಿ ಎರಡು ಗಂಟೆಗಳ ಕಾಲ ಹೋಮ ಹವನದಲ್ಲಿ ಭಾಗಿಯಾಗಿದ್ರು. ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಈ ಆಶ್ರಮಕ್ಕೆ ಭೇಟಿ ನೀಡಿದ ಬಿಎಸ್ವೈ, ತಾನು ಸಿಎಂ ಆದ್ರೆ ಶತರುದ್ರಯಾಗ ಹೋಮ ನಡೆಸೋದಾಗಿ ಹರಕೆ ಮಾಡಿಕೊಂಡಿದ್ದರು. ಅದರಂತೆಯೇ ಇಂದು ಶತರುದ್ರಾಯಾಗದ ಪೂರ್ಣಹುತಿಯಲ್ಲಿ ಭಾಗಿಯಾಗಿ ಹರಕೆ ತೀರಿಸಿದ್ದು ವಿಶೇಷವಾಗಿತ್ತು.