4 ಜಿಲ್ಲೆಗಳಲ್ಲಿ ಭಾರೀ ಮಳೆ : ಜಲಾಶಯ ಭರ್ತಿಯಾಗಿ ರಸ್ತೆ ಸಂಪರ್ಕ ಕಡಿತ : ಬೆಳೆ ನಾಶ
ಕಳೆದ ಒಂದು ವಾರದಿಂದ ಮಳೆ ಇನ್ನೇನು ಕಡಿಮೆ ಆಗಿದೇ ಅಂತ ಅಂದುಕೊಳ್ಳುವ ಹೊತ್ತಿಗೆ ತಡರಾತ್ರಿಯಿಂದ ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ.
ಹೌದು.. ಚಿಕ್ಕಮಗಳೂರಿನ ಶಿವನಿ ಸುತ್ತಾಮುತ್ತಾ ಪ್ರದೇಶದ ಈರುಳ್ಳಿ ಬೆಳೆದ ರೈತರಿಗೆ ಕಣ್ಣೀರು ತರಿಸಿದ್ದಾನೆ ಮಳೆರಾಯ. ಕಳೆದ ರಾತ್ರಿ ಚಿಕ್ಕಮಗಳೂರಿನ ತರೀಕೆರೆ ತಾಲೂಕಿನಲ್ಲಿ ಭಾರೀ ಮಳೆಯಾಗಿದ್ದು, ಈರುಳ್ಳಿ ಬೆಳೆ ಕೊಚ್ಚಿ ಹೋಗಿದೆ. ಹೊಲದಲ್ಲಿ ಕಿತ್ತು ಹಾಕಿದ ಲಕ್ಷಾಂತರ ರೂ ಮೌಲ್ಯದ ಈರುಳ್ಳಿ ಬೆಳೆ ಹಾನಿಯಾಗಿದೆ. ಮಳೆ ರಭಸಕ್ಕೆ ಈರುಳ್ಳಿ ಬೆಳೆ ರಸ್ತೆಗೆ ಬಂದಿದ್ದು ರೈತರು ಕಂಗಾಲಾಗಿದ್ದಾರೆ.
ಇನ್ನೂ ಕೊಪ್ಪಳ ಹಾಗು ಗದಗ ಜಿಲ್ಲೆಗಳಲ್ಲಿ ಭಾರಿ ಮಳೆಯ ಹಿನ್ನೆಲೆ ಮಸ್ಕಿ ನಾಲಾ ಜಲಾಶಯ ಭರ್ತಿಯಾಗಿದೆ. ಜಲಾಶಯದಿಂದ ೩೦೦೦ ಕ್ಯೂಸೆಕ್ ನೀರು ಹಳ್ಳಕ್ಕೆ ಹರಿಸಲಾಗಿದೆ. ಹಳ್ಳದ ಪ್ರವಾಹದಿಂದಾಗಿ ಮಾರಲದಿನ್ನಿ, ಮಾರಲದಿನ್ನಿ ತಾಂಡ, ಕಡಬೂರು ಹಿರೇ ಕಡಬೂರು ಮಧ್ಯೆ ಸಂಪರ್ಕ ಸ್ಥಗಿತವಾಗಿದೆ. ಹಳ್ಳದಲ್ಲಿ ಪ್ರವಾಹದಿಂದ ೨೦ ಕ್ಕೂ ಹೆಚ್ವು ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಜೊತೆಗೆ ವಿಜಯಪುರ ಜಿಲ್ಲೆಯ ತಿಕೋಟಾ ಭಾಗದಲ್ಲಿ ಮಳೆಯಾಗಿದ್ದು, ಡೋಣಿ ನದಿ ಉಕ್ಕಿ ಹರಿಯುತ್ತಿದೆ. ಡೋಣಿ ನದಿ ನೀರು ಸಾರವಾಡ ಗ್ರಾಮದ ಹೊಲಗಳಿಗೆ ನುಗ್ಗಿದೆ. ಅಪಾರ ಪ್ರಮಾಣದ ಜೋಳ, ತೊಗರಿ ಬೆಳೆ ಜಲಾವೃತಗೊಂಡಿದೆ.