ಅತಿಥಿ ಗೃಹದಲ್ಲಿ ಕೊರೋನ ಸೋಂಕಿತ ಪುತ್ರನನ್ನು ಅಡಗಿಸಿಟ್ಟಿದ್ದ ಬೆಂಗಳೂರು ರೈಲ್ವೇ ಅಧಿಕಾರಿ ವಜಾ
ಜರ್ಮನಿ ಮತ್ತು ಸ್ಪೇನ್ ಗೆ ಪ್ರಯಾಣ ಬೆಳೆಸಿ ಹಿಂದಿರುಗಿದ್ದ ಕೊರೋನ ಸೋಂಕಿತ ಮಗನ ಬಗ್ಗೆ ಮಾಹಿತಿ ಬಚ್ಚಿಟ್ಟಿದ್ದ ಆರೋಪದ ಮೇಲೆ ಬೆಂಗಳೂರಿನ ರೈಲ್ವೇ ಅಧಿಕಾರಿಯನ್ನು ವಜಾಗೊಳಿಸಲಾಗಿದೆ.
“ಅವರು ತಮ್ಮ ಬಂಧುಗಳಿಗೆ ಬೆಂಗಳೂರಿನಲ್ಲಿ ಅತಿಥಿ ಗೃಹಕ್ಕೆ ಬೇಡಿಕೆ ಇಟ್ಟಿದ್ದರು. ಮಾರ್ಚ್ 13 ರಿಂದ 16 ರವರೆಗೆ ಬೆಂಗಳೂರು ಕೇಂದ್ರ ರೈಲ್ವೇ ನಿಲ್ದಾಣದ ಬಳಿಯ ಅತಿಥಿ ಗೃಹವನ್ನು ನೀಡಲಾಗಿತ್ತು. ಅಲ್ಲಿ ಕೊರೋನ ಸೋಂಕಿನಿಂದ ಬಳಲುತ್ತಿದ್ದ ಅವರ ಪುತ್ರ ನೆಲೆಸಿದ್ದ ಎಂದು ಈಗ ತಿಳಿದಿದೆ” ಎಂದು ನೈರುತ್ಯ ರೈಲ್ವೇ ಸಂಪರ್ಕಾಧಿಕಾರಿ ವಿಜಯ ತಿಳಿಸಿರುವುದಾಗಿ ದ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ರೈಲ್ವೇ ಅಧಿಕಾರಿ ತಮ್ಮ ಮಗನ ವಿದೇಶಿ ಪ್ರವಾಸ ಮಾಹಿತಿಯನ್ನು ಮುಚ್ಚಿಟ್ಟಿದ್ದಕ್ಕೆ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 1897, ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ಈಗ ಮುಂಜಾಗ್ರತಾ ಕ್ರಮವಾಗಿ ಅತಿಥಿ ಗೃಹವನ್ನು ಮುಚ್ಚಲಾಗಿದೆ. ಅದೇ ಅತಿಥಿ ಗೃಹದಲ್ಲಿ ನೆಲೆಸಿದ್ದ ಎಲ್ಲರಿಗೂ ಮತ್ತು ಸಿಬ್ಬಂದಿ ವರ್ಗದವರಿಗೆ ಜಾಗ್ರತೆಯಿಂದ ಇರಲುತಿಳಿಸಲಾಗಿದ್ದು, ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಮಾಹಿತಿ ನೀಡಲು ಕೋರಲಾಗಿದೆ.
ಅತಿಥಿ ಗೃಹದಲ್ಲಿದ್ದ25 ವರ್ಷದ ಕರೊನ ಸೋಂಕಿತ ಕರ್ನಾಟಕದ 12ನೇ ಕರೋನ ರೋಗಿ. ಈಗ ಅವರನ್ನು ಆಸ್ಪತ್ರೆಯನ್ನು ಪ್ರತ್ಯೇಕವಾಗಿ ಇರಿಸಲಾಗಿದೆ.