ಕೊರೊನಾ ಸೋಂಕಿತನ ಅಂತ್ಯಸಂಸ್ಕಾರದಲ್ಲಿ ಲೋಪ : ಪಿಪಿಇ ಕಿಟ್ ಕೆರೆಗೆಸೆದ ಬಿಬಿಎಂಪಿ?
ಮೊನ್ನೆಯಷ್ಟೇ ಕೊರೊನಾ ಪೀಡಿತ ವಿಕ್ಟೋರಿಯಾ ಆಸ್ಪತ್ರೆ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ತಮಗೆಲ್ಲಾ ತಿಳಿದೇ ಇದೆ. ಈ ವ್ಯಕ್ತಿಯ ಅಂತ್ಯಸಂಸ್ಕಾರದಲ್ಲಿ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಲೋಪವೆಸಗಿದ ಎಂಬ ಆರೋಪಗಳು ಕೇಳಿ ಬಂದಿವೆ.
ಹೌದು…. ಇದೇ ಸೋಮವಾರ ಕೊರೊನಾ ಸೋಂಕಿತ ವ್ಯಕ್ತಿ (ರೋಗಿ-466) ಖಿನ್ನತೆಗೊಳಗಾಗಿ ವಿಕ್ಟೋರಿಯಾ ಆಸ್ಪತ್ರೆ ಮಹಡಿ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಈ ವ್ಯಕ್ತಿಯ ಅಂತ್ಯಕ್ರಿಯನ್ನು ಜಯನಗರ ಬಿಟಿಬಿ ಏರಿಯಾದ ಚಿತಾಗಾರದಲ್ಲಿ ನಡೆದಿತ್ತು. ಈ ವ್ಯಕ್ತಿಯ ಅಂತ್ಯಕ್ರಿಯಲ್ಲಿ ಬಳಸಲಾಗಿದ್ದ ಪಿಪಿಇ ಕಿಟ್ ಗಳನ್ನು ಬೈರಸಂದ್ರ ಕೆರೆ ಪ್ರದೇಶದಲ್ಲಿ ಎಸೆದಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಕೊರೊನಾ ಸೋಂಕಿತನ ಅಂತ್ಯಸಂಸ್ಕಾರದಲ್ಲಿ ಬಳಸಲಾಗಿದ್ದ ಪಿಪಿಇ ಕಿಟ್ ನೋಡಿ ಬೈರಸಂದ್ರ ಕೆರೆ ಭಾಗದ ಜನರು ಆತಂಕಗೊಂಡಿದ್ದಾರೆ. ಪಿಪಿಇ ಕಿಟ್ಗಳನ್ನು ನಿಯಮದಂತೆ ಅಂತ್ಯಸಂಸ್ಕಾರದ ನಂತರ ನಿಗದಿತ ಏಜೆನ್ಸಿಗಳಿಗೆ ನೀಡಿ ಅದನ್ನು ಸುಟ್ಟು ವಿಲೇವಾರಿ ಮಾಡಬೇಕು. ಸೋಮವಾರ ಅಂತ್ಯಸಂಸ್ಕಾರವಾದ್ರೂ, ಬುಧವಾರ ಸಂಜೆವರೆಗೆ ಪಿಪಿಇ ಕೆರೆ ಬಳಿಯೇ ಬಿದ್ದಿದ್ದವೆಂದು ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.
ಸ್ಥಳೀಯರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಬುಧವಾರ ಸಂಜೆ ಬಿಬಿಎಂಪಿ ಸಿಬ್ಬಂದಿ, ಪಿಪಿಇಗಳ ಮೇಲೆ ಪೆಟ್ರೋಲ್ ಸುರಿದು ಸುಟ್ಟಿದ್ದಾರೆ. ಪಿಪಿಇ ಸುಟ್ಟ ನಂತರ ಆ ಪ್ರದೇಶದಲ್ಲಿ ಔಷಧ ಸಿಂಪಡಿಸಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಬಿಬಿಎಂಪಿ ಪಿಪಿಇ ಕಿಟ್ಗಳ ವಿಲೇವಾರಿಗಾಗಿ ವಲಯಕ್ಕೆ ಒಂದರಂತೆ 4 ಏಜೆನ್ಸಿ ನಿಗದಿಪಡಿಸಿದೆ.