ಹಣಕ್ಕಾಗಿ ಶಾಸಕರ ಸ್ಥಾನವನ್ನು ಮಾರಿಕೊಂಡ ಅನರ್ಹ ಶಾಸಕರಿಗೆ ನಮ್ಮ ಗ್ರಾಮದಲ್ಲಿ ಪ್ರವೇಶವಿಲ್ಲ ಎಂದು ಅಥಣಿ ಗ್ರಾಮಸ್ಥರು ಬ್ಯಾನರ್ ಹಾಕಿದ್ದಾರೆ.

ಹೌದು… ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಇದೀಗ ಉಪಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆ ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಹೇಶ್ ಕುಮುಟಳ್ಳಿಗೆ ಪ್ರಚಾರದ ವೇಳೆ ಸ್ವಗ್ರಾಮದವರೇ ಶಾಕ್ ನೀಡಿದ್ದಾರೆ.

ಹಣಕ್ಕಾಗಿ ಶಾಸಕ ಸ್ಥಾನ ಮಾರಿಕೊಂಡ ಅನರ್ಹ ಶಾಸಕರಿಗೆ ಗ್ರಾಮಕ್ಕೆ ಪ್ರವೇಶವಿಲ್ಲ ಎಂದು ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ತೆಲಸಂಗ ಗ್ರಾಮದಲ್ಲಿ ಬ್ಯಾನರ್ ಹಾಕಿ ಗ್ರಾಮಸ್ಥರು ಬಿಜೆಪಿ ಅಭ್ಯರ್ಥಿ ಮಹೇಶ್ ಕುಮುಟಳ್ಳಿ ವಿರುದ್ದ  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೆಲಸಂಗ ಗ್ರಾಮಸ್ಥರು ತಮ್ಮ ಗ್ರಾಮದ ಮುಂದೆ ದೊಡ್ಡ ಬ್ಯಾನರ್ ಹಾಕಿದ್ದು, ಈ ಬ್ಯಾನರ್ ನಲ್ಲಿ ಅಥಣಿ ಶಿವಯೋಗಿಗಳ ಪುಣ್ಯ ಕ್ಷೇತ್ರ.  ಹಣಕ್ಕಾಗಿ ಶಾಸಕ ಸ್ಥಾನ ಮಾರಿಕೊಂಡ ಅನರ್ಹರಿಗೆ ಗ್ರಾಮಕ್ಕೆ ಪ್ರವೇಶವಿಲ್ಲ ಎಂದು ಬರೆದಿದ್ದಾರೆ. ಅಲ್ಲದೆ ಅನರ್ಹ ಶಾಸಕರನ್ನು ಸೋಲಿಸುವಂತೆ ಕರೆ ನೀಡಿದ್ದ  ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ಫೋಟೋ ಹಾಕಿ ಅನರ್ಹ ಶಾಸಕರನ್ನ ಸೋಲಿಸುವಂತೆ ಕರೆ ನೀಡಿದ್ದಾರೆ.