ಬಾಲಿವುಡ್ ಗಾಯಕಿ ಕನಿಕಾ ಕಪೂರ್ ವಿರುದ್ಧ ಎಫ್ಐಆರ್
ಕೊರೊನಾ ವೈರಸ್ ಸೋಂಕಿತರಾಗಿರುವ ಬಾಲಿವುಡ್ ಗಾಯಕಿ ಕನಿಕಾ ಕಫೂರ್ ವಿರುದ್ಧ “ನಿರ್ಲಕ್ಷ್ಯ ಮತ್ತು ಸರ್ಕಾರದ ಆದೇಶಕ್ಕೆ ಅಸಹಕಾರ ತೋರಿಸಿರುವ ಆರೋಪದಲ್ಲಿ ಎಫ್ಐಆರ್ ದಾಖಲಾಗಿದೆ.
ಮಾರ್ಚ್ 14 ರಂದು ಲಕ್ನೋ ವಿಮಾನ ನಿಲ್ದಾಣದಲ್ಲಿ ಅವರನ್ನು ಪರೀಕ್ಷಿಸಿದಾಗ ಹೆಚ್ಚಿನ ವೈರಲ್ ಲೋಡ್ ಪತ್ತೆಯಾಗಿದ್ದು ಅವರನ್ನು ಮನೆಯಲ್ಲೆ ಸಂಪರ್ಕತಡೆಯಲ್ಲಿರಲು ಸೂಚಿಸಲಾಗಿತ್ತು ಎನ್ನಲಾಗಿದೆ. ಆದರೂ ಅವರು ಅದನ್ನು ಉಲ್ಲಂಘಿಸಿ ಲಖನೌದಲ್ಲಿ ಭೋಜನ ಕೂಟದಲ್ಲಿ ಭಾಗವಹಿಸಿದ್ದಾರೆ. ಅದೇ ಕಾರ್ಯಕ್ರಮದಲ್ಲಿ ದೆಹಲಿಯ ಸಂಸತ್ತು ಮತ್ತು ರಾಷ್ಟ್ರಪತಿ ಭವನದ ಹಲವಾರು ಹಿರಿಯ ರಾಜಕಾರಣಿಗಳು ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ಲಕ್ನೋ ಮುಖ್ಯ ವೈಧ್ಯಾಧಿಕಾರಿಯವರ ದೂರಿನ ಆಧಾರದಲ್ಲಿ ಪೊಲೀಸರು ಕನಿಕಾ ಕಫೂರ್ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188, 269, ಮತ್ತು 270 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಆದರೆ ಕನಿಕಾ ಕಫೂರ್ ತಾನು ಮಾರ್ಚ್ 11 ರಂದು ಲಕ್ನೋಗೆ ಬಂದಿರುವುದಾಗಿ ಹೇಳಿಕೊಂಡಿದ್ದಾರೆ. ಕಳೆದ 9 ತಿಂಗಳಿನಿಂದ ಲಂಡನಿನಲ್ಲಿದ್ದು, ಮಾರ್ಚ್ 9 ರಂದು ಮುಂಬೈ ವಿಮಾನ ನಿಲ್ದಾಣದಿಂದ ಭಾರಕ್ಕೆ ಬಂದಿದ್ದೇನೆ ಎಂದು ಅವರು ಹೇಳಿದ್ದಾರೆ. ಈಗ ಲಕ್ನೋ ಆಸ್ಪತ್ರೆಯಲ್ಲಿ ದಾಖಲಾಗಿರುವ ಅವರು “ವಿಮಾನ ನಿಲ್ದಾಣದಲ್ಲಿ ಪರೀಕ್ಷಿಸಲಾಯಿತು, ಆದರೆ ಯಾವುದೇ ಸಮಸ್ಯೆ ಪತ್ತೆಯಾಗಿಲ್ಲ ಹಾಗೂ ಕರೋನವೈರಸ್ ಇತ್ತು ಎಂಬುದರ ಬಗ್ಗೆ ತಿಳಿದಿರಲಿಲ್ಲ” ಎಂದು ಹೇಳಿದ್ದಾರೆ.
ಎಫ್ಐಆರ್ ದಾಖಲಾಗುವ ಮೊದಲು ಕನಿಕಾ ಕಫೂರ್ ಭಾಗವಹಿಸಿದ ಭೋಜನಕೂಟದಲ್ಲಿ ಅತಿಥಿಯಾಗಿದ್ದ ಉತ್ತರ ಪ್ರದೇಶದ ಆರೋಗ್ಯ ಸಚಿವ ಜೈ ಪ್ರತಾಪ್ ಸಿಂಗ್ “ನಮ್ಮ ಕಡೆಯಿಂದ ತಪ್ಪುಗಳಾಗಿದೆ. ಸೋಂಕಿನ ಬಗ್ಗೆ ಪರೀಕ್ಷೆ ಮಾಡದೇ ಕನಿಕಾ ಕಫೂರ್ ವಿಮಾನ ನಿಲ್ದಾಣದಿಂದ ಹೇಗೆ ಹೊರ ಹೋದರು ಎಂಬುದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಕೇಳಲಿದ್ದೇನೆ” ಎಂದು ಹೇಳಿದ್ದಾರೆ.
ಶುಕ್ರವಾರ ಗಾಯಕಿ ಸೋಶಿಯಲ್ ಮೀಡಿಯಾದಲ್ಲಿ ತನಗೆ ಸೋಂಕು ಇರುವುದು ಖಚಿತವಾಗಿರುವ ಬಗ್ಗೆ ಹಂಚಿಕೊಂಡಿದ್ದರು. ಇದರ ನಂತರ ಬಿಜೆಪಿ ಮುಖಂಡೆ ವಸುಂಧರಾ ರಾಜೆ ಟ್ವೀಟ್ ಮಾಡಿ “ತಾನೂ ಕನಿಕಾ ಕಫೂರ್ ಭಾಗವಹಿಸಿದ್ದ ಭೋಜನ ಕೂಟದಲ್ಲಿ ತನ್ನ ಮಗ ದುಷ್ಯಂತ್ ಜೊತೆ ಭಾಗವಹಿಸಿದ್ದೆ. ಮುನ್ನಚ್ಚರಿಕಾ ಕ್ರಮವಾಗಿ ನಾನು ಸ್ವಯಂ ಸಂಪರ್ಕತಡೆಯನ್ನು ಮಾಡಲಿದ್ದೇನೆ” ಎಂದಿದ್ದಾರೆ.
While in Lucknow, I attended a dinner with my son Dushyant & his in-laws. Kanika, who has unfortunately tested positive for #Covid19 was also a guest.
As a matter of abundant caution, my son & I have immediately self-quarantined and we’re taking all necessary precautions.
— Vasundhara Raje (@VasundharaBJP) March 20, 2020
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ದುಶ್ಯಂತ್ ಸಿಂಗ್ ಅವರನ್ನು ಭೇಟಿಯಾದ್ದರು. ಈಗ ರಾಷ್ಟ್ರಪತಿಗಳು ತಮ್ಮ ಎಲ್ಲಾ ಕಾರ್ಯಕ್ರಮವನ್ನು ರದ್ದುಪಡಿಸಿದ್ದಾರೆ. ಉತ್ತರಪ್ರದೇಶ ಸರ್ಕಾರವು ಕಳೆದ ಒಂದು ವಾರದಲ್ಲಿ ಕನಿಕಾ ಕಫೂರ್ ಭಾಗವಹಿಸಿದ ಸಾಮಾಜಿಕ ಕೂಟಗಳ ಬಗ್ಗೆ ತನಿಖೆಗೆ ಆದೇಶಿಸಿದೆ.
ಈ ಪ್ರಕರಣದ ಕುರಿತು ಸರಕಾರದ ಆದೇಶದ ಹೊರತಾಗಿಯೂ ದೊಡ್ಡ ಸಭೆಗಳಲ್ಲಿ ಹಿರಿಯ ರಾಜಕಾರಣಿಗಳು ಈ ರೀತಿಯ ಭೋಜನಕೂಟವನ್ನು ನಡೆಸುವ ಅಗತ್ಯವೇನಿತ್ತು? ಸೆಲೆಬ್ರಿಟಿಗಳು ಸಹ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಲ್ಲವೇ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಕನಿಕಾ ಪ್ರಕರಣ ಉಳಿದ ಎಲ್ಲರಿಗೂ ಎಚ್ಚರಿಕೆಯ ಪಾಠವಾಗಬೇಕಿದೆ.