ಮಲೆನಾಡಿಗೆ ಭವಿಷ್ಯ ಇದ್ಯಾ? ಇದು ವಾಸಕ್ಕೆ ಸೂಕ್ತವಾದ ಸ್ಥಳನಾ..?
ಮಲೆನಾಡಿಗೆ ಭವಿಷ್ಯ ಇದ್ಯಾ, ಇದು ವಾಸಯೋಗ್ಯಕ್ಕೆ ಸೂಕ್ತವಾದ ಸ್ಥಳವ ಎಂಬ ಆತಂಕ ಮಲೆನಾಡಿಗರಲ್ಲೇ ದಟ್ಟವಾಗಿದೆ.
ಯಾಕಂದ್ರೆ, ಮಲೆನಾಡಿಗೆ ಎರಡನೇ ರೌಂಡ್ ಕಾಲಿಟ್ಟಿರೋ ಜಲರಾಕ್ಷಸನಿಗೆ ಈ ಬಾರಿ ಗಾಳಿ ಕೂಡ ಬೇಷರತ್ ಬೆಂಬಲ ಕೊಟ್ಟಿದೆ. ಮೂರು ದಿನಗಳಿಂದ ದಿನ ಕಳೆದಂತೆ ಮಳೆ ಪ್ರಮಾಣ ಜಾಸ್ತಿಯಾಗ್ತಿದ್ಯೋ ವಿನಃ ಕಡಿಮೆಯಾಗ್ತಿಲ್ಲ. ಭಾರೀ ಮಳೆ-ಗಾಳಿಯಿಂದ ಮಲೆನಾಡಿಗರ ಆತಂಕ ಕೂಡ ಹೆಚ್ಚಾಗಿದೆ.
ಸುರಿಯುತ್ತಿರೋ ದೈತ್ಯ ಮಳೆ, ಬೀಸ್ತಿರೋ ರಣಗಾಳಿ. ಮಲೆನಾಡಿಗರನ್ನ ಊರು ಬೀಡುವಂತೆ ಮಾಡ್ತಿದೆ. ಮೂಡಿಗೆರೆ ತಾಳೂಕಿನ ಚನ್ನಹಡ್ಲು, ಬಾಳೂರು, ಸುಂದರಬೈಲು, ಆಲೇಖಾನ್ ಹೊರಟ್ಟಿ, ಚಕ್ಕಮಕ್ಕಿ ಗ್ರಾಮಗಳಲ್ಲಿ ಭೂಮಿಯೊಳಗಿಂದ ನಾಲ್ಕೈದು ಸೆಕೆಂಡ್ ಭಾರೀ ಶಬ್ದ ಕೇಳಿ ಬರ್ತಿದ್ದು ಜನ ರಾತ್ರೋರಾತ್ರಿ ಮನೆ ಬಿಟ್ಟು ಬರ್ತಿದ್ದಾರೆ. ಕಳೆದ ತಿಂಗಳ ಮಳೆಗೆ ಮನೆಯ ಮೇಲ್ಛಾವಣೆ ಕುಸಿಯುತ್ತಿತ್ತು.
ಆದ್ರೆ, ಎರಡನೇ ರೌಂಡಿನ ಮಳೆರಾಯನ ಅಬ್ಬರಕ್ಕೆ ಮನೆಯ ತಳಪಾಯವೇ ಕುಸಿಯುವಂತಾಗಿದೆ. ಆಗಸ್ಟ್ ತಿಂಗಳ ಮಳೆಯಿಂದ ಕುಸಿದಿದ್ದ ಬೆಟ್ಟಗುಡ್ಡಗಳ ಹಾಸುಪಾಸಿನಲ್ಲೇ ಮತ್ತೆ ಕುಸಿತ ಉಂಟಾಗ್ತಿರೋದ್ರಿಂದ ಗ್ರಾಮೀಣ ಭಾಗದ ಜನರಿಗೆ ದಾರಿಕಾಣದಂತಾಗಿದೆ. ಮೂಡಿಗೆರೆಯ ಕೊಟ್ಟಿಗೆಹಾರ, ದುರ್ಗದಹಳ್ಳಿ, ಮಲೆಮನೆ, ಹಿರೇಬೈಲು, ಜಾವಳಿ, ಬಣಕಲ್ ಸೇರಿದಂತೆ ಸುತ್ತಮುತ್ತ ಧಾರಾಕಾರ ಮಳೆಯಾಗ್ತಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.