ತೀವ್ರಗೊಂಡ ರೈತರ ಪ್ರತಿಭಟನೆ : ಕೋಡಿಹಳ್ಳಿ ಚಂದ್ರಶೇಖರ್ ಪೊಲೀಸರ ವಶಕ್ಕೆ..
ರೈತ ವಿರೋಧಿ ವಿಧೇಯಕಗಳನ್ನು ಜಾರಿಗೊಳಿಸಿದ ಪರಿಣಾಮ ಇಂದು ರಾಜ್ಯವ್ಯಾಪಿ ಬಂದ್ ಗೆ ಕರೆ ನೀಡಲಾಗಿದೆ. ರೈತರ ಪ್ರತಿಭಟನೆಯಲ್ಲಿ ಹಲವಾರು ಸಂಘ-ಸಂಸ್ಥೆಗಳು ಕೈಜೋಡಿಸಿದ್ದು ಸರ್ಕಾರದ ವಿರುದ್ಧ ಧ್ವನಿ ಎತ್ತಿವೆ. ಬೆಂಗಳೂರಿನ ಹೃದಯ ಭಾಗದ ಮೆಜಿಸ್ಟಿಕ್, ರೈಲ್ವೆ ನಿಲ್ದಾಣ ಹಾಗೂ ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ ಪ್ರತಿಭಟನೆ ಕಿಚ್ಚು ಹೆಚ್ಚಾಗಿದೆ. ಬೆಂಗಳೂರು ಕೆಂಪೇಗೌಡ ರೈಲು ನಿಲ್ದಾಣಕ್ಕೆ ರೈತ ಹಾಗೂ ಕನ್ನಡ ಪರ ಸಂಘಟನೆಗಳು ಮುತ್ತಿಗೆ ಹಾಕಲು ಪ್ರಯತ್ನಿಸಿದ್ದಾರೆ. ಅಖಿಲ ಕರ್ನಾಟಕ ರೈತರು ಮತ್ತು ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಎಲೆ ಶ್ರೀನಿವಾಸ್ ಸೇರಿದಂತೆ ನೂರಾರು ರೈತರು ಭಾಗಿಯಾಗಿದ್ದರು. ಈ ವೇಳೆ ಬಿಬಿಎಂಪಿ ಕಚೇರಿ ಬಳಿ ಕೋಡಿಹಳ್ಳಿ ಚಂದ್ರಶೇಖರ್ ಮೊದಲಾದವರನ್ನು ಪೊಲೀಸರು ವಶಕ್ಕೆ ಪಡೆದರು.
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಅನೇಕ ಕಡೆ ಇವತ್ತಿನ ಕರ್ನಾಟಕ ಬಂದ್ನ ಬಿಸಿ ತಟ್ಟಿದೆ. ರೈತರ ಪ್ರತಿಭಟನೆಗಳು ಕೆಲ ತೀವ್ರ ಸ್ವರೂಪ ಪಡೆದಿವೆ. ಪರಿಸ್ಥಿತಿ ಕೈ ಮೀರದಂತೆ ತಡೆಯಲು ಪೊಲೀಸರು ಕೆಆರ್ ಪುರಂನಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವಾರು ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ.ಪರಿಸ್ಥಿತಿ ಕೈ ಮೀರಿ ಹೋಗದಂತೆ ತಡೆಯಲು ಪೊಲೀಸರು ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಂಡಿದ್ದಾರೆ. ಪ್ರತಿಭಟನಾಕಾರರನ್ನು ಅಲ್ಲಲ್ಲಿ ತಡೆದು ವಶಕ್ಕೆ ಪಡೆಯುವ ಕೆಲಸ ಮಾಡುತ್ತಿದ್ದಾರೆ. ಕೆಆರ್ ಪುರಂನಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವಾರು ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ.
ಇನ್ನು, ಟೌನ್ಹಾಲ್ನಿಂದ ಫ್ರೀಡಂ ಪಾರ್ಕ್ವರೆಗೆ ಸಾಗಲಿರುವ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಸಾಕಷ್ಟು ಜನಸಾಗರ ಹರಿದುಬರುತ್ತಿದೆ. ರಾಜ್ಯದ ವಿವಿಧೆಡೆಯಿಂದ ರೈತರು ಬೆಂಗಳೂರಿಗೆ ಆಗಮಿಸಿದ್ದಾರೆ. ನಟ ಚೇತನ್, ಬಿಗ್ ಬಾಸ್ ಸ್ಪರ್ಧಿ ಶಶಿ ಮೊದಲಾದವರು ಈ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಸುಮನಹಳ್ಳಿಯಿಂದ ಟೌನ್ಹಾಲ್ವರೆಗೆ ಬೈಕ್ ರ್ಯಾಲಿ ನಡೆಯುತ್ತಿದೆ. ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಸಂಘಟನೆಗಳ ಕಾರ್ಯಕರ್ತರು, ಗಿರೀಶ್ ಗೌಡ, ಕುರುಬೂರು ಶಾಂತಕುಮಾರ್, ನಟ ಚೇತನ್ ಟೌನ್ ಹಾಲ್ನಲ್ಲಿ ಈಗಾಗಲೇ ಬಹಳಷ್ಟು ಜನರು ಈ ಬೈಕ್ ಜಾಥಾದಲ್ಲಿದ್ದಾರೆ.
ರೈತ ಸಂಘ, ಹಸಿರು ಸೇನೆ, ಕನ್ನಡ ಪರ ಸಂಘಟನೆಗಳು ಸೇರಿ ಇನ್ನಿತರ ಸಂಘಟನೆಗಳು ಒಟ್ಟಿಗೆ ಸೇರಿಕೊಂಡು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.ಕರವೇ ಕಾರ್ಯಕರ್ತರು ಇಂದು ಬೆಳ್ಳಂಬೆಳಗ್ಗೆ ಏರ್ಪೋರ್ಟ್ಗೆ ಮುತ್ತಿಗೆ ಹಾಕಲು ಮುಂದಾಗಿದ್ದು ಈ ವೇಳೆ ಅವರನ್ನು ಪೊಲೀಸರು ತಡೆದು ವಶಕ್ಕೆ ಪಡೆದಿದ್ದಾರೆ.
ಟೌನ್ಹಾಲ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ವಾಹನ ಸಂಚಾರಕ್ಕೆ ಭಾರೀ ಸಮಸ್ಯೆಗಳು ಎದುರಾಗಿದ್ದು, ಹಲವೆಡೆ ಸಂಫುರ್ಣವಾಗಿ ಟ್ರಾಫಿಕ್ ಜಾಮ್ ಉಂಟಾಗಿದೆ. ಪ್ರತಿಭಟನೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಕೆಲ ಪ್ರತಿಭಟನಾನಿರತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.