FACT CHECK | ತನ್ನ ಮನೆಯಲ್ಲೇ ಕಳ್ಳತನ ಮಾಡಿ ಸಿಕ್ಕಿ ಬಿದ್ದಿದ್ರಾ ಮೋದಿ?
ಪ್ರಧಾನಿ ಮೋದಿ ಸಂತನಾಗಲು ಮನೆ ಬಿಟ್ಟಿದ್ದಲ್ಲ, ಆತ ತನ್ನ ಮನೆಯಲ್ಲೆ ಚಿನ್ನಾಭರಣ ಕದ್ದು ಸಿಕ್ಕಿಬಿದ್ದಿದ್ದ, ಹಾಗಾಗಿ ಆತನನ್ನು ಮನೆಯಿಂದ ಹೊರಗೆ ಹಾಕಲಾಗಿತ್ತು ಎಂದು ಮೋದಿ ಸಹೋದರ ಪ್ರಹ್ಮಾದ್ ಮೋದಿ ಹೇಳಿದ್ದಾರೆ ಎಂಬ ಪ್ರತಿಕಾ ತುಣುಕೊಂದು ಅಮರ್ ಉಜಾಲ ಪತ್ರಿಕೆಯ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.
ಹಾಗಿದ್ದರೆ ಪ್ರಧಾನಿ ಮೋದಿ ತನ್ನ ಮನೆಯಲ್ಲೇ ಕಳ್ಳತನ ಮಾಡಿ ಸಿಕ್ಕಿಬಿದ್ದ ಪರಿಣಾಮ ಮನೆಯಿಂದ ಹೊರಹಾಕಲಾಗಿತ್ತು ಎಂಬ ಸುದ್ದಿ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
2024ರ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸುದ್ದಿಗಳು ವೈರಲ್ ಆಗುತ್ತಿವೆ. ಈಗ ಪ್ರಧಾನಿ ಮೋದಿ ಕುರಿತಾದ ಕಳ್ಳತನ ಆರೋಪದ ಪ್ರತಿಕಾ ತುಣುಕಿನ ಸತ್ಯಾಸತ್ಯತೆಯನ್ನು ಪರಿಶೀಲಿಸಲು ವೈರಲ್ ಆಗಿರುವ ಸುದ್ದಿ ಪತ್ರಿಕೆಯ ತುಣುಕಿನಲ್ಲಿ ಈ ವರದಿ 2016ರ ಜೂನ್ 2 ರಂದು ಪ್ರಕಟವಾಗಿದೆ ಎಂದು ದಿನಾಂಕ ನಮೂದಿಸಲಾಗಿತ್ತು. ಹೀಗಾಗಿ ಆ ದಿನದ ಅಮರ್ ಉಜಾಲಾ ಪತ್ರಿಕೆಯನ್ನು ಪರಿಶೀಲಿಸಿದಾಗ 2016ರ ಜೂನ್ 2 ರಂದು ಆ ಕುರಿತ ಯಾವುದೇ ವರದಿ ಪ್ರಕಟವಾಗಿರಲಿಲ್ಲ.
ಅಮರ್ ಉಜಾಲಾ ಪತ್ರಿಕೆಯ ಸಂಗ್ರಹ ಆವೃತ್ತಿಯನ್ನು ಪರಿಶೀಲನೆ ನಡೆಸಿದ ವೇಳೆ ಆ ರೀತಿಯ ಯಾವುದೇ ವರದಿ ಕಂಡುಬಂದಿಲ್ಲ. ಮತ್ತು ವೈರಲ್ ಆಗಿರುವ ಪತ್ರಿಕೆಯ ತುಣುಕು ಅಮರ್ ಉಜಾಲಾ ಪತ್ರಿಕೆಯ ಆ ದಿನದ ವರದಿಯಲ್ಲೂ ಲಭ್ಯವಿಲ್ಲ.
ಮುಂದುವರೆದು, ಗೂಗಲ್ ಸರ್ಚ್ ಮೂಲಕ ಪರಿಶೀಲಿಸಿದ ವೇಳೆ 2016ರ ಜೂನ್ 2 ರಂದು ಅಮರ್ ಉಜಾಲಾ ಸಂಸ್ಥೆಯೇ ಈ ಕುರಿತಾಗಿ ನೀಡಿದ ಸ್ಪಷ್ಟನೆ ಲಭ್ಯವಾಗಿದೆ. ‘ನಕಲಿ ಪತ್ರಿಕೆಯ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ತುಣುಕಿನಲ್ಲಿ ಅಮರ್ ಉಜಾಲಾ ಪತ್ರಿಕೆಯ ಹೆಸರನ್ನು ಬಳಸಿಕೊಳ್ಳಲಾಗಿದೆ. ಪ್ರಹ್ಲಾದ್ ಮೋದಿ ಅವರು ಅಮರ್ ಉಜಾಲಾ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ ಎಂದು ಬಿಂಬಿಸಲಾಗಿದೆ. ಆದರೆ, ಈ ಸುದ್ದಿಗೂ ಅಮರ್ ಉಜಾಲಾ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ ಎಂದು ಸಂಸ್ಥೆ ಸ್ಪಷ್ಟೀಕರಣ ನೀಡಿತ್ತು.
ಅಷ್ಟೇ ಅಲ್ಲ ಈ ರೀತಿ ಸುಳ್ಳು ಸುದ್ದಿ ಹರಡೋದನ್ನ ಅಮರ್ ಉಜಾಲಾ ಖಂಡಿಸುತ್ತದೆ ಎಂದೂ ಹೇಳಾಗಿತ್ತು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಅಮರ್ ಉಜಾಲಾ ಪತ್ರಿಕೆಯ ತುಣುಕಿನ ಕುರಿತಾಗಿ ಕಾನೂನು ಕ್ರಮ ಕೈಗೊಳ್ಳೋದಾಗಿ ಅಮರ್ ಉಜಾಲಾ ಸಂಸ್ಥೆ ಎಚ್ಚರಿಕೆಯನ್ನೂ ನೀಡಿತ್ತು.
ವೈರಲ್ ಆಗಿರುವ ಅಮರ್ ಉಜಾಲಾ ಪತ್ರಿಕೆಯ ತುಣುಕಿನ ಫ್ಯಾಕ್ಟ್ಚೆಕ್ ನಡೆಸಿರುವ ಫ್ಯಾಕ್ಟ್ ಕ್ರೆಸೆಂಡೋ ಸಂಸ್ಥೆ ಪ್ರಧಾನಿ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಅವರನ್ನು ಸಂಪರ್ಕಿಸಿ ಈ ಕುರಿತಾಗಿ ಸ್ಪಷ್ಟನೆ ಕೇಳಿತು. ಈ ವೇಳೆ ಪ್ರತಿಕ್ರಿಯೆ ನೀಡಿದ ಅವರು, ‘ಅಮರ್ ಉಜಾಲಾ ಪತ್ರಿಕೆ ಹೆಸರಲ್ಲಿ ಈ ರೀತಿಯಾದ ವರದಿಯೊಂದು ವೈರಲ್ ಆದ ಬಳಿಕ ನನ್ನ ಗಮನಕ್ಕೂ ಬಂದಿತ್ತು. ನಾನು ಕೂಡಲೇ ಈ ಸಂಸ್ಥೆಯ ಸಂಪಾದಕರನ್ನು ಸಂಪರ್ಕಿಸಿದೆ, ಏನಾಗುತ್ತಿದೆ ಎಂದು ಕೇಳಿದೆ. ಏಕೆಂದರೆ ನಾನು ಈ ಸಂಸ್ಥೆಯ ಯಾರನ್ನೂ ಭೇಟಿ ಮಾಡಿಲ್ಲ, ಯಾರಿಗೂ ಆ ರೀತಿಯ ಹೇಳಿಕೆ ನೀಡಿಲ್ಲ.
ಈ ಕುರಿತಾಗಿ ದೂರು ದಾಖಲಿಸೋದಾಗಿ ನಾನು ಸಂಪಾದಕರಿಗೆ ಹೇಳಿದೆ. ಈ ವೇಳೆ ಪತ್ರಿಕೆ ಸಂಪಾದಕರು ಈ ಕುರಿತಾಗಿ ತಾವೇ ಖುದ್ದಾಗಿ ದೂರು ದಾಖಲಿಸೋದಾಗಿ ಹೇಳಿದರು. ಇದು ಸುಳ್ಳು ಸುದ್ದಿ ಎಂದೂ ಹೇಳಿದರು. ಆ ಬಳಿಕ ಎಫ್ಐಆರ್ ದಾಖಲಿಸಿದ ಪ್ರತಿಯನ್ನೂ ನನಗೆ ಕಳಿಸಿದರು. ಸದ್ಯ ಆ ಪ್ರತಿ ನನ್ನಲ್ಲಿ ಇಲ್ಲ. ಆದರೆ, ಆ ಸುದ್ದಿ ಸಂಪೂರ್ಣ ಆಧಾರ ರಹಿತ. ನಾನು ಎಂದಿಗೂ ಆ ರೀತಿಯ ಹೇಳಿಕೆ ನೀಡಿಲ್ಲ ಎಂದು ಪ್ರಹ್ಲಾದ್ ಮೋದಿ ಅವರು ಸ್ಪಷ್ಟನೆ ನೀಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಪ್ರಧಾನಿ ಮೋದಿ ಕಳ್ಳತನ ಮಾಡಿದಕ್ಕೆ ಮನೆಯಿಂದ ಹೊರಹಾಕಲಾಗಿತ್ತು ಎಂಬ ಪತ್ರಿಕೆಯ ತುಣುಕು ನಕಲಿಯಾಗಿದ್ದು ಯಾರೋ ಕಿಡಿಗೇಡಿಗಳು ಅಮರ್ ಉಜಾಲ ಪತ್ರಿಕೆಯಲ್ಲಿ ಲೇಖನ ಪ್ರಕಟವಾಗಿರುವಂತೆ ಅದನ್ನು ಮೋದಿ ಸಹೋದರ ಪ್ರಹ್ಲಾದ್ ಮೋದಿಯೇ ಹೇಳಿದ್ದಾರೆ ಎಂಬಂತೆ ಹಂಚಿಕೊಂಡಿದ್ದಾರೆ. ಆದರೆ ಇದೆಲ್ಲವೂ ಸುಳ್ಳು ಮತ್ತು ಅಂತಹ ವರದಿ ಎಲ್ಲಿಯೂ ಪ್ರಕಟವಾಗಿಲ್ಲ ಎಂದು ಅಮರ್ ಉಜಾಲ ಪತ್ರಿಕೆಯ ಸಂಪಾದಕರು ಮತ್ತು ಮೋದಿ ಸಹೋದರ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮತ್ತೊಮ್ಮೆ ಮೋದಿಯೇ ಪ್ರಧಾನಿಯಾಗುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿಲ್ಲ