Lock down : ಹಸಿದ ಹೊಟ್ಟೆಗಳಿಗೆ ’ಜನತಾ ದಾಸೋಹ’ ಮಾಡಲು ಮಾಜಿ ಮುಂದಾದ HDK..
ಲಾಕ್ಡೌನ್ನಿಂದ ಉಂಟಾದ ಸಮಸ್ಯೆಗೆ ಸಿಲುಕಿದವರಿಗೆ ಆಹಾರ ಪೂರೈಸಲು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ’ಜನತಾ ದಾಸೋಹ’ ಆರಂಭಿಸಿದ್ದಾರೆ.
ಬಡವರು, ವಲಸೆ ಕಾರ್ಮಿಕರು, ನಿರ್ಗತಿಕರು, ದುರ್ಬಲರಿಗೆ ಲಾಕ್ಡೌನ್ ಅವಧಿಯಲ್ಲಿ ನಿತ್ಯ ಆಹಾರ ಪೂರೈಸುವುದು ‘ಜನತಾ ದಾಸೋಹ’ದ ಗುರಿಯಾಗಿದೆ.ಇದರ ಅಡಿಯಲ್ಲಿ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಪ್ರತಿ ಅವಧಿಯಲ್ಲೂ ತಲಾ ಒಂದು ಸಾವಿರ ಮಂದಿಗೆ ಭೋಜನೆ ವ್ಯವಸ್ಥೆ ಮಾಡುವ ಗುರಿಯನ್ನು ಹೊಂದಲಾಗಿದೆ.
ಸದ್ಯ ರಾಮನಗರ, ಚನ್ನಪಟ್ಟಣದಲ್ಲಿ ದಾಸೋಹವನ್ನು ಆರಂಭಿಸಲಾಗಿದ್ದು, ತಮ್ಮ ಈ ನಡೆಯನ್ನೇ ಪಕ್ಷದ ಶಾಸಕರು, ಮುಖಂಡರು ತಮ್ಮ ಕ್ಷೇತ್ರಗಳಲ್ಲಿ ಆರಂಭಿಸಬೇಕು ಎಂದೂ ಕುಮಾರಸ್ವಾಮಿ ಅವರು ಈಗಾಗಲೇ ಸಂದೇಶ ರವಾನಿಸಿದ್ದಾರೆ.
ಕೊರೊನಾ ಹಾವಳಿಯಿಂದ ಉಂಟಾಗುತ್ತಿರುವ ಸಂಕಷ್ಟದ ಬಗ್ಗೆ ಮಾಹಿತಿ ಪಡೆಯುವ ಸಲುವಾಗಿ ಕಳೆದೆರಡು ದಿನಗಳ ಹಿಂದೆ ಕುಮಾರಸ್ವಾಮಿ ಅವರು ಮಂಡ್ಯ, ರಾಮನಗರ, ಚನ್ನಪಟ್ಟಣದ ಪಕ್ಷದ ಮುಖಂಡರ ಜೊತೆ ಸಮಾಲಾಓಚನೆ ನಡೆಸಿದ್ದರು. ಕೊರೋನಾ ವಿರುದ್ಧ ಸಮರದ ಅಂಗವಾಗಿ ರೈತರ ಸಂಕಷ್ಟವನ್ನು ಕಡೆಗಣಿಸದಂತೆ ಕುಮಾರಸ್ವಾಮಿ ಅವರು ರಾಜ್ಯ ಸರಕಾರವನ್ನು ಬಲವಾಗಿ ಒತ್ತಾಯಿಸಿದ್ದಾರೆ.
ಇದಿಷ್ಟೇ ಅಲ್ಲದೇ, ರಾಮನಗರ ಜಿಲ್ಲೆಯ ಸಾರ್ವಜನಿಕರಿಗೆ ದಿನಸಿ ಪೂರೈಸಲೂ ಸಹ ಕುಮಾರಸ್ವಾಮಿ ಅವರು ನಿರ್ಧರಿಸಿದ್ದು, ಇದಕ್ಕಾಗಿ ಮಾಹಿತಿ ಸಂಗ್ರಹ ಕಾರ್ಯ ಆರಂಭವಾಗಿದೆ.