ಕಾಂಗ್ರೆಸ್ಗೆ ನಾಯಕತ್ವದ ಸಂಕಷ್ಟ: ಪಕ್ಷದೊಳಗೆ ಭುಗಿಲೆದ್ದ ಭಿನ್ನಮತ!
ರಾಷ್ಟ್ರೀಯ ಕಾಂಗ್ರೆಸ್ನಲ್ಲಿ ನಾಯಕತ್ವ ಸೇರಿದಂತೆ ಹಲವಾರು ವಿಚಾರಗಳ ಬಗೆಗೆ ಭಿನ್ನಮತ ತಲೆದೂರಿದೆ. ಹೀಗಾಗಿ, ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿಯು ಸಭೆ ಸೇರಿದ್ದು, ಅಧ್ಯಕ್ಷ ಸ್ಥಾನ ಸೇರಿದಂತೆ ಹಲವು ವಿಷಯಗಳಿಗೆ ಭಾರೀ ಚರ್ಚೆ ನಡೆಯುತ್ತಿದೆ.
ಪಕ್ಷದ 20 ಕ್ಕೂ ಹೆಚ್ಚು ಉನ್ನತ ನಾಯಕರು ಬರೆದಿರುವ “ಭಿನ್ನಮತೀಯ” ಪತ್ರದ ಬಗೆಗಿನ ಭಾರಿ ವಿವಾದ ಭುಗಿಲೆದ್ದಿದ್ದು ರಾಹುಲ್ ಗಾಂಧಿ ಪತ್ರದ ವಿರುದ್ಧ ಕಿಡಿಕಾರಿದ್ದಾರೆ.
ಪಕ್ಷದ ಅತೀ ಪ್ರಮುಖ ಸಭೆಯ ಪ್ರಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ತನ್ನನ್ನು ನಿರಾಳರಾಗುವಂತೆ ಸೋನಿಯಾ ಗಾಂಧಿಯವರ ಪತ್ರವನ್ನು ಓದಲಾಯಿತು. ವೇಣುಗೋಪಾಲ್ ನಂತರ ಮಾತನಾಡಿದ ಸೋನಿಯಾ ಗಾಂಧಿಯವರ ಬದಲಿಗೆ ಹೊಸ ಅಧ್ಯಕ್ಷರನ್ನು ಹುಡುಕುವ ಪ್ರಕ್ರಿಯೆಯನ್ನು ರೂಪಿಸುವ ಚರ್ಚೆಯನ್ನು ಪ್ರಾರಂಭಿಸಲು ಪಕ್ಷವನ್ನು ವಿನಂತಿಸಿದರು.
ಸೋನಿಯಾ ಗಾಂಧಿ ಮಾತನ್ನು ಬೆಂಬಲಿಸಿ ಹಾಗೂ ಭಿನ್ನಮತೀಯ ಪತ್ರ ಬರೆದ ನಾಯಕರ ವಿರುದ್ದ ರಾಹುಲ್ ಬಿಜೆಪಿಯೊಂದಿಗೆ ಸಹಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಪತ್ರವನ್ನು ಬೆಂಬಲಿಸಿದ ಗುಲಾಮ್ ನಬಿ ಆಝಾದ್ ತಾನು ಬಿಜೆಪಿಯೊಂದಿಗೆ ಸಹಕರಿಸಿದ್ದು ಸಾಬೀತಾದರೆ ರಾಜಿನಾಮೆ ನೀಡುತ್ತೇನೆ ಎಂದು ಹೇಳಿದರು. ಮಾಜಿ ಕೇಂದ್ರ ಸಚಿವರಾದ ಕಪಿಲ್ ಸಿಬಲ್ ರಾಹುಲ್ ಗಾಂಧಿಯವರ ಆರೋಪಕ್ಕೆ ವಿರೋಧ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ, “ನಾವು ಬಿಜೆಪಿಯೊಂದಿಗೆ ಸಹಕರಿಸುತ್ತಿದ್ದೆವೆ ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ಕಾಂಗ್ರೆಸ್ ಪಕ್ಷವನ್ನು ರಕ್ಷಿಸಲು ರಾಜಸ್ಥಾನ ಹೈಕೋರ್ಟ್ನಲ್ಲಿ ಯಶಸ್ವಿಯಾಗಿದೆ. ಮಣಿಪುರದಲ್ಲಿ ಪಕ್ಷವನ್ನು ರಕ್ಷಿಸುತ್ತಿದ್ದೇವೆ. ಕಳೆದ 30 ವರ್ಷಗಳಲ್ಲಿ ಯಾವುದೇ ವಿಷಯದ ಬಗ್ಗೆ ಬಿಜೆಪಿಯ ಪರವಾಗಿ ಹೇಳಿಕೆ ನೀಡಿಲ್ಲ” ಎಂದು ಅವರು ಬರೆದಿದ್ದಾರೆ.
ನಂತರ ರಾಹುಲ್ ಗಾಂಧಿಯವರು ಸಿಬಲ್ ಅವರೊಂದಿಗೆ ವಯಕ್ತಿಕವಾಗಿ ಮಾತನಾಡಿ ಮಾಧ್ಯಮಗಳ ವರದಿಯನ್ನು ನಂಬಬೇಡಿ ಎಂದು ಮನವಿ ಮಾಡಿದ ನಂತರ ಸಿಬಲ್ ತನ್ನ ಟ್ವೀಟ್ ಅನ್ನು ಅಳಿಸಿಹಾಕಿದ್ದಾರೆ.
20ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರು ತಮ್ಮ ಪತ್ರದಲ್ಲಿ, ಪೂರ್ಣ ಸಮಯದ ಪರಿಣಾಮಕಾರಿ ನಾಯಕತ್ವಕ್ಕೆ ಕರೆ ನೀಡಿದ್ದಾರೆ. ಪ್ರಾಮಾಣಿಕ ಆತ್ಮಾವಲೋಕನ ಮಾಡುವಂತೆ ಹಾಗೂ ಸಾಮೂಹಿಕ ನಾಯಕತ್ವಕ್ಕೆ, ಅಧಿಕಾರದ ವಿಕೇಂದ್ರೀಕರಣಕ್ಕೆ, ರಾಜ್ಯ ಘಟಕಗಳ ಸಬಲೀಕರಣ ಮತ್ತು ಪ್ರತಿ ಹಂತದಲ್ಲೂ ಸಾಂಸ್ಥಿಕ ಚುನಾವಣೆಗಳು ನಡೆಸುವ ಬಗ್ಗೆ ಸೇರಿದಂತೆ ಹಲವಾರು ಸುಧಾರಣೆಗಳನ್ನು ಈ ಪತ್ರವು ಸೂಚಿಸಿತ್ತು ಎಂದು ಮೂಲಗಳು ತಿಳಿಸಿದೆ.
ಚತ್ತೀಸ್ಘಡ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಹಾಗೂ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೇರಿದಂತೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವಂತೆ ಕೇಳಿಕೊಂಡರು.
ಈ ಮಧ್ಯೆ ಭಿನ್ನಮತೀಯರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಂಸದೆ ರಮ್ಯ, “ಅವರು ಪತ್ರವನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಲ್ಲದೆ, ಅವರು ಇದೀಗ ನಡೆಯುತ್ತಿರುವ ಕಾರ್ಯಕಾರಿ ಸಮಿತಿ ಸಭೆಯ ನಿಮಿಷದ ನಿಮಿಷದ ಸಂಭಾಷಣೆಗಳನ್ನು ಮಾಧ್ಯಮಗಳಿಗೆ ನೀಡುವುದನ್ನು ಮುಂದುವರೆಸಿದ್ದಾರೆ” ಎಂದು ಬರೆದಿದ್ದಾರೆ.
Not only did they leak the letter to the media, they continue to feed/leak minute to minute conversations of the CWC meeting that's going on right now to the media. Amazing!
— Divya Spandana/Ramya (@divyaspandana) August 24, 2020
ಸಭೆಯಲ್ಲಿ ಸೋನಿಯ ಗಾಂಧಿ ತಮ್ಮ ನಿರ್ಧಾರವನ್ನು ಘೋಷಿಸಿದ ನಂತರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಾತನಾಡಿ ಸೋನಿಯಾ ಗಾಂಧಿ ಪಕ್ಷದ ಅಧ್ಯಕ್ಷರಾಗಿ ಉಳಿಯುವಂತೆ ಕೇಳಿದರು. ಅಲ್ಲದೆ 20 ನಾಯಕರು ಬರೆದಿರುವ ಪತ್ರವನ್ನು ದುರದೃಷ್ಟಕರ ಎಂದು ಕರೆದ ಅವರು, ಪಕ್ಷದ ಹೈಕಮಾಂಡ್ ಅನ್ನು ದುರ್ಬಲಗೊಳಿಸುವುದು ಕಾಂಗ್ರೆಸನ್ನು ದುರ್ಬಲಗೊಳಿಸುತ್ತದೆ ಎಂದು ಟೀಕಿಸಿದರು
ಮತ್ತೊಬ್ಬ ಹಿರಿಯ ಮುಖಂಡ ಎ.ಕೆ.ಆಂಟನಿ ರಾಹುಲ್ ಗಾಂಧಿಯನ್ನು ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಕೇಳಿಕೊಂಡರು.
ಗುಲಾಮ್ ನಬಿ ಆಜಾದ್ ಅವರಲ್ಲದೆ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಆನಂದ್ ಶರ್ಮಾ, ಮುಕುಲ್ ವಾಸ್ನಿಕ್ ಮತ್ತು ಜಿತಿನ್ ಪ್ರಸಾದ ಕೂಡಾ ಭಿನ್ನಮತೀಯ ಪತ್ರಕ್ಕೆ ಸಹಿ ಹಾಕಿದ್ದಾರೆ.
ಇದನ್ನೂ ಓದಿ: ಪರಸ್ಪರ ಹೊಗಳಿಕೆ ಮುಂದಾದ ಬಿಜೆಪಿ, ಶಿವಸೇನೆ; ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮುರಿಯುವ ಮುನ್ಸೂಚನೆಯಾ?