ಉತ್ತರ ಪ್ರದೇಶ MLC ಚುನಾವಣೆಯಲ್ಲಿ SP ಅಭ್ಯರ್ಥಿಯನ್ನು ಸೋಲಿಸಲು BJPಗೆ ಬೆಂಬಲ: ಮಾಯಾವತಿ
ಉತ್ತರ ಪ್ರದೇಶದಲ್ಲಿ ನಡೆಯಲಿರುವ MLC ಚುನಾವಣೆಯಲ್ಲಿ ಸಾಮಾಜವಾದಿ ಪಕ್ಷ (ಎಸ್ಪಿ)ದ ಎರಡನೇ ಅಭ್ಯರ್ಥಿಯನ್ನು ಸೋಲಿಸಲು ಬಿಎಸ್ಪಿಯು ಬಿಜೆಪಿ ಅಥವಾ ಇತರೆ ಯಾವುದೇ ಅಭ್ಯರ್ಥಿಗೆ ಮತ ಚಲಾಯಿಸಲಿದೆ ಎಂದು ಉ.ಪ್ರ ಮಾಜಿ ಸಿಎಂ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
“ಯುಪಿಯಲ್ಲಿ ಮುಂದಿನ ಎಂಎಲ್ಸಿ ಚುನಾವಣೆಯಲ್ಲಿ ಎಸ್ಪಿ ಅಭ್ಯರ್ಥಿಯನ್ನು ಸೋಲಿಸಲು ನಾವು ನಿರ್ಧರಿಸಿದ್ದೇವೆ, ಅದಕ್ಕಾಗಿ ನಮ್ಮ ಮತವನ್ನು ಬಿಜೆಪಿ ಅಭ್ಯರ್ಥಿಗೆ ಅಥವಾ ಇತರೇ ಪಕ್ಷದ ಯಾವುದೇ ಅಭ್ಯರ್ಥಿಗೆ ನೀಡಲು ಸಿದ್ದರಾಗಿದ್ದೇವೆ. ಎಸ್ಪಿಯ 2 ನೇ ಅಭ್ಯರ್ಥಿಯ ವಿರುದ್ಧ ಪ್ರಾಬಲ್ಯ ಹೊಂದಿರುವ ಯಾವುದೇ ಪಕ್ಷದ ಅಭ್ಯರ್ಥಿಗೆ ಬಿಎಸ್ಪಿ ಶಾಸಕರು ಮತ ನೀಡಲಿದ್ದಾರೆ” ಎಂದು ಮಾಯಾವತಿ ಹೇಳಿದರು.
ಬಿಎಸ್ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ ಅವರನ್ನು ಅವಮಾನಿಸುವ ಮೂಲಕ ಉತ್ತರ ಪ್ರದೇಶದ ಬ್ರಾಹ್ಮಣ ಸಮುದಾಯವನ್ನು ಸಮಾಜವಾದಿ ಪಕ್ಷ ಅವಮಾನಿಸಿದೆ ಎಂದು ಮಾಯಾವತಿ ಆರೋಪಿಸಿದ್ದಾರೆ.
ಸಮಾಜವಾದಿ ಪಕ್ಷದ (ಎಸ್ಪಿ) ವಿರುದ್ಧದ 1995ರ ಪ್ರಕರಣವನ್ನು ಕೈಬಿಡುವುದು ದೊಡ್ಡ ತಪ್ಪು. ಲೋಕಸಭಾ ಚುನಾವಣೆಯ ನಂತರ ಎಸ್ಪಿಯ ವರ್ತನೆಯನ್ನು ನೋಡಿದಾಗ, 1995 ಜೂನ್2 ರಂದು ಅವರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹಿಂಪಡೆದು ಬಿಎಸ್ಪಿ ದೊಡ್ಡ ತಪ್ಪು ಮಾಡಿದೆವು ಎಂದು ಅನ್ನಿಸಿದೆ ಎಂದು ಅವರು ಹೇಳಿದ್ದಾರೆ.
“ನಾವು ಅವರೊಂದಿಗೆ ಕೈಜೋಡಿಸಬಾರದಿತ್ತು. ನಾವು ಮತ್ತಷ್ಟು ಕೂಲಂಕಷವಾಗಿ ಯೋಚಿಸಬೇಕಾಗಿತ್ತು. ತರಾತುರಿಯಲ್ಲಿ ನಾವು ತಪ್ಪು ನಿರ್ಧಾರವನ್ನು ತೆಗೆದುಕೊಂಡಿದ್ದವು. ಹಾಗೆ ಮಾಡುವ ಮೂಲಕ ನಾವು ಬಹಳ ದೊಡ್ಡ ತಪ್ಪು ಮಾಡಿಕೊಂಡೆವು” ಎಂದು ಅವರು ಹೇಳಿದರು.
“ಲೋಕಸಭಾ ಚುನಾವಣೆಯ ಸಮಯದಲ್ಲಿ ಕೋಮುವಾದಿ ಪಡೆಗಳ ವಿರುದ್ಧ ಹೋರಾಡಲು ನಮ್ಮ ಪಕ್ಷ ಎಸ್ಪಿ ಜೊತೆ ಕೈಜೋಡಿಸಿತ್ತು. ಅವರ ಕುಟುಂಬ ಜಗಳದಿಂದಾಗಿ, ಅವರು ಬಿಎಸ್ಪಿಯೊಂದಿಗಿನ ‘ಗಟ್ಬಂಧನ್’ನಿಂದ ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗಲಿಲ್ಲ. ಚುನಾವಣೆಯ ನಂತರ ಅವರ ವರ್ತನೆ ಬದಲಾಗಿದೆ. ಹಾಗಾಗಿ ನಾವು ಅವರನ್ನು ಎಂಎಲ್ಸಿ ಚುನಾವಣೆಯಲ್ಲಿ ಸೋಲಿಸಲು ನಿರ್ಧರಿಸಿದ್ದೇವೆ” ಎಂದು ಮಾಯಾವತಿ ಹೇಳಿದ್ದಾರೆ.
ಇದನ್ನೂ ಓದಿ: ಆರೋಗ್ಯ ಸೇತು ಆ್ಯಪ್ ಸೃಷ್ಠಿಸಿದವರೇ ಗೊತ್ತಿಲ್ಲ ಎಂದ ಕೇಂದ್ರ ಸರ್ಕಾರ: ಮೋದಿ ಸರ್ಕಾರಕ್ಕೆ ನೋಟಿಸ್