ಚುನಾವಣಾ ಕಾನೂನು (ತಿದ್ದುಪಡಿ) ಮಸೂದೆ ಲೋಕಸಭೆಯಲ್ಲಿ ಮಂಡನೆ: ವಿಪಕ್ಷಗಳ ವಿರೋಧದ ನಡುವೆಯೂ ಅಂಗೀಕಾರ!
ಮತದಾರರ ಪಟ್ಟಿಯನ್ನು ಆಧಾರ್ ಜೊತಗೆ ಜೋಡಿಸುವ ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆ, 2021ಅನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಪ್ರತಿಪಕ್ಷಗಳ ವಿರೋಧದ ನಡುವೆಯೂ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದೆ.
ಮಸೂದೆಯನ್ನು ಮಂಡಿಸಿದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, ಈ ಶಾಸನವು ದೇಶದಲ್ಲಿ ನಕಲಿ ಮತದಾನವನ್ನು ತಡೆಯುತ್ತದೆ ಮತ್ತು ಚುನಾವಣಾ ಪ್ರಕ್ರಿಯೆಯನ್ನು ಹೆಚ್ಚು ವಿಶ್ವಾಸಾರ್ಹಗೊಳಿಸುತ್ತದೆ ಎಂದು ಹೇಳಿದ್ದಾರೆ.
ಆದರೆ, ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಮಸೂದೆಯನ್ನು ವಿರೋಧಿಸಿದ್ದು, ಇದು ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಮಾತ್ರವಲ್ಲದೆ, ಈ ಮಸೂದೆ ಆಧಾರ್ ಕುರಿತು ಸುಪ್ರೀಂ ಕೋರ್ಟ್ ತೀರ್ಪನ್ನು ಕೂಡ ಉಲ್ಲಂಘಿಸುತ್ತದೆ ಎಂದು ಆರೋಪಿಸಿದ್ದಾರೆ.
ಆಧಾರ್ ವಾಸಸ್ಥಳದ ಪುರಾವೆ ಮಾತ್ರವೇ ಆಗಿರಬೇಕು. ಅದು, ಪೌರತ್ವದ ಪುರಾವೆ ಅಲ್ಲ. ನೀವು ಮತದಾರರಿಗೆ ಆಧಾರ್ ಕಾರ್ಡ್ ಕೇಳಿದರೆ, ನಿಮಗೆ ಸಿಗುವುದು ನಿವಾಸವನ್ನು ಪ್ರತಿಬಿಂಬಿಸುವ ದಾಖಲೆ ಮಾತ್ರ. ನೀವು ಪ್ರಜೆ ಅಲ್ಲದವರಿಗೆ ಮತದಾನದ ಹಕ್ಕನ್ನು ನೀಡುತ್ತಿದ್ದೀರಿ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಲೋಕಸಭೆಯಲ್ಲಿ ಮಸೂದೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಧ್ಯಕ್ಷ ತೆ ವಹಿಸಿದ್ದ ರಾಜೇಂದ್ರ ಅಗರ್ವಾಲ್ ಧ್ವನಿ ಮತ ಪಡೆದು ವಿಧೇಯಕ ಮಂಡನೆಯನ್ನು ಅಂಗೀಕರಿಸಿದ್ದಾರೆ.
ಈ ಮಸೂದೆ, ಲಿಖಿಂಪುರ್ ಖೇರಿ ಹಿಂಸಾಚಾರ ಸೇರಿದಂತೆ ವಿವಿಧ ವಿಷಯಗಳನ್ನಿಟ್ಟು ಪ್ರತಿಪಪಕ್ಷಗಳು ಪ್ರತಿಭಟನೆ ನಡೆಸಿವೆ. ಸದಸ್ಯರು ಪಟ್ಟು ಬಿಡದ ಕಾರಣ, ಸದನವನ್ನು ನಾಳೆ ಮುಂದೂಡಲಾಗಿದೆ.
ಇದನ್ನೂ ಓದಿ: ಮಹಾರಾಷ್ಟ್ರ: 250 ನಾಯಿಗಳನ್ನು ಕೊಂದ ಕೋತಿಗಳು: ಗ್ರಾಮಸ್ಥರ ಆರೋಪ