ಫಲ ನೀಡದ ಪ್ಲಾಸ್ಮಾ : ಮೊದಲ ಬಾರಿಗೆ ಥೆರಪಿಗೆ ಒಳಗಾದ ಕೊರೊನಾ ಸೋಂಕಿತ ಸಾವು!
ಬೆಂಬಿಡದೇ ಕಾಡುತ್ತಿರುವ ಕೊರೊನಾ ವೈರಸ್ ತಡೆಗೆ ರಾಜ್ಯದಲ್ಲಿ ಮೊದಲ ಬಾರಿಗೆ ಪ್ಲಾಸ್ಮಾ ಥೆರಪಿಗೆ ಒಳಗಾದ ಕೊರೊನಾ ಸೋಂಕಿತ ಸಾವುನ್ನಪ್ಪಿದ ಘಟನೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದೆ.
ಹೌದು… ಗುರುವಾರ ಪ್ಲಾಸ್ಮಾ ಥೆರಪಿಗೆ ಒಳಗಾದ ಆಂಧ್ರ ಪ್ರದೇಶದ ಅನಂತಪುರ ಮೂಲದ ಸೋಂಕಿತ ವ್ಯಕ್ತ ಮೃತಪಟ್ಟಿದ್ದಾನೆ. ಮಧುಮೇಹ, ಲಿವರ್ ಸಮಸ್ಯೆ, ಹೈಪರ್ ಟೆನ್ಶನ್ ಹೀಗೆ ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ 60 ವರ್ಷ ವಯಸ್ಸಿನ ವ್ಯಕ್ತಿಗೆ ಕೊರೊನಾ ವೈರಸ್ ಕೂಡ ಹರಡಿತ್ತು. ಈ ವ್ಯಕ್ತಿಗೆ ಮೇ 11ರಂದು ವೈದ್ಯರ ತಂಡ ಪ್ಲಾಸ್ಮಾ ತೆರಪಿ ನೀಡಿತ್ತು. ಚಿಕಿತ್ಸೆ ನೀಡಿದ ಎರಡು ದಿನಗಳ ಬಳಿಕ ರೋಗಿಯ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿತ್ತು. ನಿನ್ನೆ ಮತ್ತೆ ಆರೋಗ್ಯದ ಸ್ಥಿತಿ ಹದಗೆಟ್ಟು, ಹೃದಯಾಘಾತದಿಂದ ಮೃತಪಟ್ಟಿದ್ದು, ರಾಜ್ಯದಲ್ಲಿ ನಡೆಸಿದ ಪ್ರಥಮ ಪ್ರಾಯೋಗಿಕ ಪ್ಲಾಸ್ಮಾ ಚಿಕಿತ್ಸೆ ವೈದ್ಯರ ನಿರೀಕ್ಷೆಯನ್ನು ಹುಸಿಗೊಳಿಸಿದೆ.
ಮೊತ್ತೊಂದು ವಿಚಾರ ಅಂದರೆ ಪ್ಲಾಸ್ಮಾ ಥೆರಪಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಾಗೂ ಕೇರಳದಲ್ಲೂ ಉತ್ತಮ ಪ್ರತಿಕ್ರಿಯೆ ನೀಡಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ನಿರೀಕ್ಷೆಗೆ ತಕ್ಕಂತೆ ಫಲ ಕೊಡಲಿಲ್ಲ. ಬೆಂಗಳೂರು ಮೆಡಿಕಲ್ ಕಾಲೇಜ್ ಆಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ಡಾ. ವಿಶಾಲ್ ರಾವ್ ನೇತೃತ್ವದ ತಂಡ ಪ್ಲಾಸ್ಮಾ ಥೆರಪಿಯ ಪ್ರಯೋಗಗಳನ್ನು ಮಾಡಿತ್ತು.
ಈ ಬಗ್ಗೆ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ನಾವು ಮಾಡಿರುವುದು ಒಂದು ಪ್ರಯತ್ನ ,ಆದರೆ ಇದನ್ನು ವೈಫಲ್ಯ ಎಂದು ಹೇಳಲಾಗುವುದಿಲ್ಲ, ಪ್ಲಾಸ್ಮಾ ಥೆರಪಿಯ ಪರಿಣಾಮದ ಬಗ್ಗೆ ಇಷ್ಟು ಬೇಗನೇ ಅಂತಿಮ ನಿರ್ಧಾರಕ್ಕೆ ಬರಲಾಗದು ಎಂದು ತಿಳಿಸಿದ್ದಾರೆ.