ಎಡೆಬಿಡದೆ ಸುರಿದ ಮಳೆ : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ರಸ್ತೆ ಪೂರ್ತಿ ನೀರೇ.. ನೀರು..
ರಾಜ್ಯದ ಕೆಲ ಭಾಗಗಳಲ್ಲಿ ಈಗಾಗಲೇ ಮಳೆ ಶುರುವಾಗಿದ್ದು, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರಿ ಮಳೆಯಾಗಿದೆ.
ಹೌದು.. ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಭಾಗಗಳಲ್ಲಿ ಕೆಲದಿನಗಳಿಂದ ಮಳೆಯಾಗುತ್ತಿದೆ.ಕುಕ್ಕೆ ಸುಬ್ರಹ್ಮಣ್ಯದಲ್ಲೂ ಎಡೆಬಿಡದೆ ಸುರಿದ ಮಳೆಯಿಂದಾಗಿ ದೇವಸ್ಥಾನದ ಬಳಿಯ ರಸ್ತೆ ಪೂರ್ತಿ ನೀರು ನಿಂತು ಕೆರೆಯಂತಾಗಿತ್ತು. ಜೊತೆಗೆ ದ್ವಿಚಕ್ರ ವಾಹನಗಳು ಹಾಗೂ ಕಾರುಗಳು ನೀರಿನಲ್ಲಿ ಮುಳುಗಿದ್ದರಿಂದ ವಾಹನ ಸವಾರರು ವಾಹನಗಳನ್ನು ತೆಗೆಯಲು ಹರಸಾಹಸ ಪಡುವಂತಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪ್ರವೇಶಿಸುವ ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ನೀರು ಹರಿಯುವುದಕ್ಕೆ ಸಾಧ್ಯವಾಗದೇ ರಸ್ತೆ ಕೆರೆಯಂತಾಗಿತ್ತು. ಜಿಲ್ಲೆಯಲ್ಲಿ ನಿತ್ಯ ಸಂಜೆಯ ಹೊತ್ತು ಗುಡುಗು-ಸಿಡಿಲು ಸಹಿತ ಮಳೆಯಾಗುತ್ತಿದ್ದು, ಇಳೆಯನ್ನು ತಂಪಾಗಿಸುತ್ತಿದೆ.
ಇನ್ನೂ ಕುಕ್ಕೆ ದೇವಸ್ಥಾನಕ್ಕೆ ಭೇಟಿ ನೀಡುವ ಯಾತ್ರಾರ್ಥಿ ಅಥವಾ ಭಕ್ತಾದಿಗಳು ಶ್ರೀಕ್ಷೇತ್ರದಲ್ಲಿ ಹರಿದಿರುವ ಕುಮಾರಧಾರಾ ನದಿಗೆ ಭೇಟಿ ನೀಡಿ, ನದಿಯ ನೀರಿನಿಂದ ಶುಚಿರ್ಭುತರಾಗಿ ನಂತರ ಸುಬ್ರಹ್ಮಣ್ಯ ದೇವರ ದರುಶನ ಕೋರಿ ದೇವಸ್ಥಾನಕ್ಕೆ ಪ್ರವೇಶಿಸುತ್ತಾರೆ. ಜೊತೆಗೆ ಆದಿ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಹರಿದಿರುವ ಕುಮಾರಧಾರಾ ನದಿಯಲ್ಲಿ ಹರಕೆ ಹೊತ್ತಿ ಜನರು ಒಂದರ ಮೇಲೊಂದರಂತೆ ನಿಲ್ಲಿಸಲಾದ ಚೆಪ್ಪಡಿ ಕಲ್ಲುಗಳು ಜೋಡಿಸಿ ಅಶ್ಲೇಷ ಬಲಿ ಪೂಜೆಯನ್ನು ನೆರವೇರಿಸಲಾಗುತ್ತದೆ. ಸದ್ಯ ಭಾರೀ ಮಳೆಯಿಂದಾಗಿ ನದಿ ಕೂಡ ತುಂಬಿ ಹರಿಯುತ್ತಿದೆ. ಲಾಕ್ ಡೌನ್ ಇರುವುದರಿಂದಲೂ ದೇವಸ್ಥಾನಕ್ಕೆ ಭಕ್ತರು ಆಗಮಿಸುತ್ತಿಲ್ಲ. ಹೀಗಾಗಿ ಭಾರೀ ಪ್ರಮಾಣದ ತೊಂದರೆ ಆಗುವುದು ತಪ್ಪಿದೆ.