ಹೊಸ ವರ್ಷದ ಆಡಂಬರ ಕೈಬಿಟ್ರು – ತಂದೆ-ತಾಯಿಗಳ ಪಾದ ಪೂಜೆ ಸಲ್ಲಿಸಿದ್ರು
ವಿಶ್ವ ಹೊಸ ವರ್ಷದ ಆಡಂಬರದಲ್ಲಿ ಮುಳುಗಿರುವಾಗ ಕಲಬುರ್ಗಿಯಲ್ಲಿ ವಿಶಿಷ್ಟ ಕಾರ್ಯಕ್ರಮ ನಡೆಯಿತು. ತಂದೆ-ತಾಯಿಗಳಿಗೆ ಪಾದ ಪೂಜೆ ಮತ್ತು ತಂದೆ-ತಾಯಿಗಳಿಂದ ಮಕ್ಕಳಿಗೆ ಕೈ ತುತ್ತು ತಿನ್ನಿಸುವ ಕಾರ್ಯಕ್ರಮ ನಡೆಯಿತು. ನೆರೆದ ಮಠಾದೀಶರು ಮಕ್ಕಳು, ಪೋಷಕರನ್ನು ಆಶೀರ್ವದಿಸಿ, ಭಾರತೀಯ ಸಂಸ್ಕೃತಿ ರಕ್ಷಿಸುವಂತೆ ಕರೆ ನೀಡಿದರು.
ಕಲಬುರ್ಗಿಯ ಕೋಟನೂರಿನಲ್ಲಿ ಹೊಸ ವರ್ಷವನ್ನು ವಿನೂತನವಾಗಿ ಆಚರಿಸಲಾಯಿತು. ಕೋಟನೂರಿನ ಸಿದ್ಧಶ್ರೀ ಕನ್ನಡ, ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ತಂದೆ-ತಾಯಿಗಳಿಗೆ ಪಾದಪೂಜೆ ಮತ್ತು ಮಕ್ಕಳಿಗೆ ಕೈತುತ್ತು ತಿನ್ನಿಸುವ ಕಾರ್ಯಕ್ರಮ ನಡೆಯಿತು. ಪಾದಪೂಜೆ ಮತ್ತು ಕೈತುತ್ತಿನೊಂದಿಗೆ ಹೊಸ ವರ್ಷವನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಜಗತ್ತಿನೆಲ್ಲೆಡೆ ಇಂದು ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲಾಯಿತು. ಹೊಸ ವರ್ಷದ ಆಡಂಬರ ಎಲ್ಲೆಡೆಯೂ ಕಾಣಿಸುತ್ತಿತ್ತು. ಆದರೆ ಕಲಬುರ್ಗಿಯಲ್ಲಿ ಹೊಸ ವರ್ಷವನ್ನು ವಿನೂತನವಾಗಿ ಆಚರಿಸಲಾಯಿತು. ಕಲಬುರ್ಗಿ ಹೊರವಲಯದಲ್ಲಿರುವ ಕೋಟುನೂರಿನ ಮಠದ ಬಳಿ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಿದ್ಧಶ್ರೀ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಗಾಗಿ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಕ್ಕಳಿಂದ ಮಾತಾ-ಪಿತೃಗಳಿಗೆ ಪಾದ ಪೂಜೆ ಮಾಡಿಸುವ ಮತ್ತು ತಂದೆ-ತಾಯಿಗಳಿಂದ ಮಕ್ಕಳಿಗೆ ಕೈ ತುತ್ತು ತಿನ್ನಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಜಿಡಗಾ, ಮುಗಳಖೋಡ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಮಹಾಸ್ವಾಮಿ ಚಾಲನೆ ನೀಡಿದರು. ಹೊಸ ವರ್ಷಾಚರಣೆ ಪಾಶ್ಚಾತ್ಯ ಸಂಸ್ಕೃತಿ. ಅದನ್ನು ಎಲ್ಲರೂ ಅನುಕರಿಸಿ, ಆಡಂಬರ ಮೆರೆಯುತ್ತಿದ್ದೇವೆ. ಹೀಗಾಗಿ ಭಾರತೀಯ ಸಂಸ್ಕೃತಿಯನ್ನು ನೆನಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿರುವುದಾಗಿ ಮುರುಘಾಶ್ರೀಗಳು ಅಭಿಪ್ರಾಯಪಟ್ಟರು.
ಈ ವೇಳೆ ಮಕ್ಕಳು ತಮ್ಮ ತಂದೆ-ತಾಯಿಗಳ ಪಾದ ಪೂಜೆ ಮಾಡಿ ಅವರಿಂದ ಆಶೀರ್ವಾದ ಪಡೆದರು. ನಂತರ ತಂದೆ-ತಾಯಿಗಳು ಮಕ್ಕಳಿಗೆ ಕೈ ತುತ್ತು ಮಾಡಿ ಉಣ್ಣಿಸುವ ಮೂಲಕ ಶುಭ ಕೋರಿದರು. ಮಕ್ಕಳೂ ತಂದೆ-ತಾಯಿಗಳಿಗೆ ಕೈ ತುತ್ತು ತಿನ್ನಿಸಿ ಸಂಭ್ರಮಿಸಿದರು. ಕಾರ್ಯಕ್ರಮ ತುಂಬಾ ವಿಶಿಷ್ಟವೆನಿಸುತ್ತಿದೆ. ನಮ್ಮ ಸಂಸ್ಕೃತಿ ಹಾಳಾಗುತ್ತಿರುವ ಸಂದರ್ಭದಲ್ಲಿ ಈ ರೀತಿಯ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಇದರ ಕಾರಣದಿಂದಾಗಿ ತಂದೆ-ತಾಯಿಗಳಿಗೆ ಪಾದು ಪೂಜೆ ಮಾಡುವ ಮತ್ತು ಅವರ ಕೈ ತುತ್ತು ತಿನ್ನೋ ವಿಶಿಷ್ಟ ಅನುಭೂತಿ ಸಿಕ್ಕಿತೆಂದು ವಿದ್ಯಾರ್ಥಿನಿ ಭಾಗ್ಯಶ್ರೀ ಸಂತಸ ವ್ಯಕ್ತಪಡಿಸಿದ್ದಾಳೆ.
ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಮತ್ತು ಪಾಲಕರು, ನಾಗರೀಕರು ಪಾಲ್ಗೊಂಡಿದ್ದರು. ವಿವಿಧ ಮಠಾಧೀಶರು ತಂದೆ-ತಾಯಂದಿರು ಮತ್ತು ವಿದ್ಯಾರ್ಥಿಗಳನ್ನು ಹರಸಿ, ಶುಭ ಕೋರಿದರು. ಪಾಶ್ಚಾತ್ಯ ಸಂಸ್ಕೃತಿ ಗುಂಗಿನಿಂದ ಹೊರಬಂದು, ಭಾರತೀಯ ಸಂಸ್ಕೃತಿಯನ್ನು ಉಳಿಸುವಂತೆ ಕರೆ ನೀಡಿದರು.