ರಾಜ್ಯದ ಹೊಸ 17 ಕೊರೊನಾ ಪ್ರಕರಣಗಳಲ್ಲಿ ಮೇಲುಗೈ ಸಾಧಿಸಿದ ಸಾಂಸ್ಕೃತಿಕ ನಗರ : ಹೆಚ್ಚಿದ ಆತಂಕ
ಕೇಂದ್ರದಿಂದ ಮಾರ್ಗಸೂಚಿ ಪಟ್ಟಿ ಬಿಡುಗಡೆಯಾಗಿ ಕೊಂಚ ನಿಟ್ಟುಸಿರು ಬಿಡುವ ಹೊತ್ತಿಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಂದು ಮತ್ತಷ್ಟು ಅಧಿಕವಾಗಿದೆ. ಹೊಸದಾಗಿ 17 ಜನರಲ್ಲಿ ಸೋಂಕು ದೃಢಪಟ್ಟಿದ್ದು ಜನರನ್ನು ಆತಂಕಕ್ಕೆ ದೂಡಿದೆ.
ಹೌದು… ಮತ್ತೊಂದು ಆಶ್ಚರ್ಯಕಾರಿ ಸಂಗತಿ ಎಂದರೆ ರಾಜ್ಯದಲ್ಲಿ ನಿನ್ನೆ ಸಂಜೆಯಿಂದ ಇಂದು ಮಧ್ಯಾಹ್ನದವರೆಗೆ ಹೊಸದಾಗಿ ಕಾಣಿಸಿಕೊಂಡ 17 ಪ್ರಕರಣಗಳ ಪೈಕಿ 10 ಪ್ರಕರಣಗಳು ಮೈಸೂರಿನಲ್ಲಿ ಪತ್ತೆಯಾಗಿದ್ದು, ಇದರಲ್ಲಿ 9 ಪ್ರಕರಣಗಳು ಜ್ಯುಬಿಲಿಯಂಟ್ ಕಾರ್ಖಾನೆಯ ಮೂಲದ್ದಾಗಿವೆ ಎಂಬುದು ಗಮನಾರ್ಹವಾಗಿದೆ. ಇದೀಗ ಮೈಸೂರಿನಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ 58 ಕ್ಕೆ ಏರಿಕೆ ಆಗಿದೆ.
ಕರ್ನಾಟಕದಲ್ಲಿ ಕೊರೋನಾ ವೈರಸ್ನಿಂದ ಈಗಾಗಲೇ 11 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಮತ್ತೆಯಾದ 17 ಹೊಸ ಪ್ರಕರಣಗಳಲ್ಲಿ ಬೆಂಗಳೂರಿನಲ್ಲಿ ಇಬ್ಬರು, ಬಾಗಲಕೋಟೆಯಲ್ಲಿ 2, ಮೈಸೂರಿನಲ್ಲಿ 10, ಕಲಬುರ್ಗಿಯಲ್ಲಿ 1, ವಿಜಯಪುರದಲ್ಲಿ 2 ಜನರಿಗೆ ಕೊರೋನಾ ವೈರಸ್ ಇರುವುದು ಖಚಿತವಾಗಿದೆ. ಈ ಬಗ್ಗೆ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.
ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 17 ಹೊಸ #Covid19 ಪ್ರಕರಣಗಳು ಖಚಿತವಾಗಿದ್ದು, ಒಟ್ಟಾರೆ ಸೊಂಕಿತರ ಸಂಖ್ಯೆ 277ಕ್ಕೆ ಏರಿದೆ. 75 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈ ಕಷ್ಟದ ಸಮಯದಲ್ಲಿ ನಾಗರೀಕರು ಮನೆಯಲ್ಲಿಯೇ ಸುರಕ್ಷಿತವಾಗಿ ಇರಬೇಕೆಂದು ಕಳಕಳಿಯ ಮನವಿ ಮಾಡುತ್ತೇನೆ.
— B Sriramulu (@sriramulubjp) April 15, 2020
ಬಾಗಲಕೋಟೆಯ ಮುಧೋಳದಲ್ಲಿ ಮದರಸಾ ಡ್ಯೂಟಿಗೆ ನಿಯೋಜನೆಯಾಗಿದ್ದ 39 ವರ್ಷದ ಪೊಲೀಸ್ಗೆ ಇಂದು ಕೊರೋನಾ ದೃಢಪಟ್ಟಿದೆ. ಹಾಗೇ, ಮೈಸೂರಿನಲ್ಲಿ ಪತ್ತೆಯಾಗಿರುವ 10 ಕೇಸುಗಳಲ್ಲಿ 9 ಜನರು ಫಾರ್ಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿದವರಾಗಿದ್ದಾರೆ. ಕಲಬುರ್ಗಿಯಲ್ಲಿ 1 ವರ್ಷದ ಮಗುವಿಗೂ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಉಳಿದವರಿಗೆ ಕುಟುಂಬದಲ್ಲಿದ್ದ ಸೋಂಕಿತರಿಂದ ಕೊರೋನಾ ವೈರಸ್ ಹರಡಿದೆ.
ರಾಜ್ಯದಲ್ಲಿ ಸೋಂಕಿತ ಸಂಖ್ಯೆ 277ಕ್ಕೇರಿಕೆಯಾಗಿದೆ. ಇದರಲ್ಲಿ 75 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.