ಶ್ರಮಿಕ್ ಸ್ಪೆಷಲ್ ರೈಲುಗಳನ್ನು ಅಗತ್ಯವಿರುವ ಮೂರು ನಿಲ್ದಾಣಗಳಲ್ಲಿ ನಿಲ್ಲಿಸಲು ರೈಲ್ವೇ ನಿರ್ಧಾರ
ಕೊರೊನಾ ವೈರಸ್ ಲಾಕ್ ಡೌನ್ ಸಮಯದಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರನ್ನು ಮನೆಗೆ ಹಿಂದಿರುಗಿಸುವ ವಿಶೇಷ ರೈಲುಗಳು ಈಗ ಪೂರ್ಣ ಸಾಮರ್ಥ್ಯದಲ್ಲಿ ಚಲಿಸುತ್ತವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
“ಶ್ರಮಿಕ್ ಸ್ಪೆಷಲ್” ರೈಲುಗಳು ರಾಜ್ಯಗಳ ಕೋರಿಕೆಯ ಮೇರೆಗೆ ಅಂತಿಮ ನಿಲ್ದಾಣವನ್ನು ಹೊರತುಪಡಿಸಿ ಅಗತ್ಯವಿರುವೆಡೆ ಮೂರು ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಪ್ರತಿ ವಿಶೇಷ ರೈಲಿನಲ್ಲಿ ಪ್ರಯಾಣಿಕರ ಸಾಮರ್ಥ್ಯವು ರೈಲಿನಲ್ಲಿರುವ ಸ್ಲೀಪರ್ ಬೆರ್ತ್ಗಳ ಸಂಖ್ಯೆಗೆ ಸಮನಾಗಿರಬೇಕು ಎಂದು ರೈಲ್ವೆ ತಿಳಿಸಿದೆ.
ಮೊದಲಿನ ರೀತಿಯಲ್ಲದೆ, ವಿಶೇಷ ರೈಲುಗಳಲ್ಲಿ ಮಿಡಲ್ ಬರ್ತ್ನಲ್ಲಿಯೂ ಪ್ರಯಾಣಿಕರಿಗೆ ಅವಕಾಶ ನೀಡಲು ರೈಲ್ವೇ ನಿರ್ಧರಿಸಿದೆ.
“ಶ್ರಮಿಕ್ ಸ್ಪೆಷಲ್” ರೈಲುಗಳು 24 ಬೋಗಿಗಳನ್ನು ಹೊಂದಿದ್ದು, ಪ್ರತಿ ಬೋಗಿಯಲ್ಲಿ 72 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಪ್ರಸ್ತುತ, ಈ ರೈಲುಗಳು ಪ್ರತಿ ಕೋಚ್ನಲ್ಲಿ 54 ಪ್ರಯಾಣಿಕರೊಂದಿಗೆ ಸಾಮಾಜಿಕ ದೂರವಿಡುವ ಮಾನದಂಡದ ಜೊತೆಗೆ ಕಾರ್ಯನಿರ್ವಹಿಸುತ್ತಿವೆ. ಭಾರತೀಯ ರೈಲ್ವೆ ಮೇ 1 ರಿಂದ ಇಲ್ಲಿಯವರೆಗೆ, 5 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಸ್ಥಳಾಂತರ ಮಾಡಿದೆ.
“ರೈಲ್ವೆ ದಿನಕ್ಕೆ 300 ರೈಲುಗಳನ್ನು ಓಡಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಅದನ್ನು ಗರಿಷ್ಠಗೊಳಿಸಲು ನಾವು ಬಯಸುತ್ತೇವೆ. ಮುಂದಿನ ಕೆಲವು ದಿನಗಳಲ್ಲಿ ಸಾಧ್ಯವಾದಷ್ಟು ವಲಸಿಗರನ್ನು ಮನೆಗೆ ಕರೆದೊಯ್ಯಲು ನಾವು ಪ್ರಯತ್ನಿಸುತ್ತೇವೆ. ರಾಜ್ಯಗಳ ಸಮ್ಮತಿಗಾಗಿ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದೇವೆ” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಪಿಟಿಐ ಹೇಳಿದೆ.
ಈ ಹಿಂದೆ, ಭಾರತೀಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸಲು ಒಂದು ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಯಾವುದೇ ಪ್ರಯಾಣಿಕರಿಗೆ ಮಧ್ಯಮ ಬೆರ್ತ್ ನೀಡಬಾರದು. ಸಾಮಾಜಿಕ ಅಂತರದೊಂದಿಗೆ ಕಾರ್ಯನಿರ್ವಹಿಸಬೆಕು ಎಂದು ಹೇಳಿತ್ತು.
ರೈಲ್ವೆ ಮೇ 1 ರಿಂದ 302 “ಶ್ರಮಿಕ್ ಸ್ಪೆಷಲ್” ರೈಲುಗಳನ್ನು ಓಡಿಸಿದೆ ಮತ್ತು ದೇಶದ ವಿವಿಧ ಭಾಗಗಳಲ್ಲಿ ಸಿಲುಕಿದ್ದ 3 ಲಕ್ಷಕ್ಕೂ ಹೆಚ್ಚು ವಲಸಿಗರನ್ನು ಮನೆಗೆ ಕರೆದೊಯ್ಯಿತು ಎಂದು ಶನಿವಾರ ತಿಳಿಸಿದೆ.
ವಲಸಿಗರೇ ರೈಲು ಪ್ರಯಾಣದರವನ್ನು ಭರಿಸಬೇಕು ಎಂಬುದಕ್ಕೆ ತೀವ್ರ ವಿರೋಧ ವ್ಯಕ್ತವಾದ ನಂತರ ಕೇಂದ್ರ ಸರ್ಕಾರ ಶೇ.85 ರಷ್ಟು ಟಿಕೆಟ್ ಸಬ್ಸಿಡಿ ನೀಡುವುದಾಗಿಯೂ, ರಾಜ್ಯ ಸರ್ಕಾರಗಳು 15% ನೀಡುವುದಾಗಿಯೂ ಘೋಷಿಸಿದ್ದವು. ಆದರೆ, ಮೇ 08 ರಂದು ಬೆಂಗಳೂರಿನಿಂದ ಹೊರಟ ರೈಲಿಗೆ ಬಿಎಂಟಿಸಿ ಪ್ರಯಾಣದರವೂ ಸೇರಿದಂತೆ ರೈಲ್ವೇ ಪ್ರಯಾಣದರವನ್ನು ಕಾರ್ಮಿಕರಿಂದಲೇ ವರದಿ ಮಾಡಿರುವುದು ಕಂಡುಬಂದಿದೆ.
ಇದನ್ನೂ ಓದಿ: ಘೋಷಣೆಗಷ್ಟೇ ಸೀಮಿತವಾದ ಟಿಕೆಟ್ ರಹಿತ ಪ್ರಯಾಣ; ಕಾರ್ಮಿಕರಿಂದ ವಸೂಲಿಗಿಳಿದ ಸರ್ಕಾರ