ಸರ್ಕಾರದ ಖಜಾನೆ ತುಂಬಿಸಲು ಮದ್ಯದಂಗಡಿಗಳೇ ಬೇಕೆ? – ರಜಿನಿಕಾಂತ್
ತಮಿಳುನಾಡಿನಲ್ಲಿ ಮದ್ಯದಂಗಡಿಗಳನ್ನು ಮತ್ತೆ ತೆರೆಯಲು ತಮಿಳು ನಾಡು ಸರ್ಕಾರ ಚಿಂತಿಸುತ್ತಿದೆ. ಸರ್ಕಾರದ ಈ ನಡೆಯನ್ನು ಸೂಪರ್ ಸ್ಟಾರ್ ರಜಿನಿಕಾಂತ್ ವಿರೋಧಿಸಿದ್ದಾರೆ. ಮದ್ಯದಂಗಡಿ ತೆರೆದರೆ ನಂತರದ ಪರಿಣಾಮ ಸರಿಯಿರುವುದಿಲ್ಲ, ಎಐಎಡಿಎಂಕೆ ಪಕ್ಷ ಮುಂದೆ ಅಧಿಕಾರಕ್ಕೆ ಬರುವ ಕನಸನ್ನು ಮರೆತುಬಿಡಬೇಕಾಗುತ್ತದೆ ಎಂದು ರಜಿನೀಕಾಂತ್ ಎಚ್ಚರಿಸಿದ್ದಾರೆ.
ತಮಿಳುನಾಡಿನಲ್ಲಿ ಮದ್ಯದಂಗಡಿಗಳನ್ನು ತೆರೆಯಲು ಅಲ್ಲಿನ ಸರ್ಕಾರ ತುದಿಗಾಲಲ್ಲಿದೆ. ಆದರೆ, ಕೊರೋನಾ ವೈರಸ್ ಸೋಂಕು ಹರಡುವಿಕೆಯ ಅಪಾಯವಿರುವುದರಿಂದ ಮತ್ತು ಮದ್ಯದಂಗಡಿಗಳಲ್ಲಿ ಸರಿಯಾದ ಕೋವಿಡ್ ನಿಯಮಾವಳಿಗಳು ಪಾಲನೆಯಾಗುತ್ತಿಲ್ಲ. ಹಾಗಾಗಿ ಮದ್ಯದಂಗಡಿ ಮುಚ್ಚಲು ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ.
ಈಗ ಸರ್ಕಾರವು ಹೈಕೋರ್ಟ್ ತೀರ್ಪಿಗೆ ತಡೆ ಕೋರಿ ನಿನ್ನೆಯಷ್ಟೇ ಸುಪ್ರೀಂಕೋರ್ಟ್ನ ಮೆಟ್ಟಿಲೇರಿದೆ. ಲಿಕ್ಕರ್ ಶಾಪ್ಗಳನ್ನ ಮುಚ್ಚಿರುವುದರಿಂದ ಸರ್ಕಾರದ ಆದಾಯಕ್ಕೆ ಸಂಪೂರ್ಣ ಖೋತಾ ಬಿದ್ದಿದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರಕ್ಕೆ ಹಣದ ಅಗತ್ಯ ಇದೆ. ಅದಕ್ಕಾಗಿ, ಮದ್ಯದಂಗಡಿ ತೆರೆಯಲು ಅವಕಾಶ ಮಾಡಿಕೊಡಿ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ತಮಿಳುನಾಡು ಸರ್ಕಾರ ಮನವಿ ಮಾಡಿದೆ.
ಈ ಹಿನ್ನೆಲೆಯಲ್ಲಿ. ಸರ್ಕಾರಕ್ಕೆ ಖಜಾನೆ ಭರ್ತಿ ಮಾಡಲು ಮದ್ಯದಂಗಡಿಗಳೇ ಬೇಕಾ? ರಾಜ್ಯದ ಆದಾಯಕ್ಕಾಗಿ ಬೇರೆ ಉತ್ತಮ ಮಾರ್ಗ ಹುಡುಕಿರಿ ಎಂದು ರಜಿನಿಕಾಂತ್ ತಾಕೀತು ಮಾಡಿದ್ದಾರೆ.
இந்த நேரத்தில் அரசு டாஸ்மாக் கடைகளை மறுபடி திறந்தால் மீண்டும் ஆட்சிக்கு வரும் கனவை மறந்து விட வேண்டும். தயவுகூர்ந்து #கஜானாவை_நிரப்ப_நல்ல_வழிகளை_பாருங்கள்
— Rajinikanth (@rajinikanth) May 10, 2020
ಮೂರನೇ ಹಂತದ ಲಾಕ್ ಡೌನ್ನಲ್ಲಿ ಹಲವು ಸಡಿಲಿಕೆಗಳನ್ನ ನೀಡಲಾಗಿದೆ. ಅದರಂತೆ ಮದ್ಯದಂಗಡಿಗಳನ್ನು ತೆರೆಯಲಾಗಿದೆ. ಆದರೆ, ವೈನ್ ಶಾಪ್ಗಳಲ್ಲಿ ಜನರು ಯಾವುದೇ ಎಚ್ಚರಿಕೆ ಇಲ್ಲದೇ ಸಾಮಾಜಿಕ ಅಂತರ ಇಲ್ಲದೆ ಮುಗಿಬಿದ್ದಿದ್ದರು. ಈ ಹಿನ್ನೆಲೆಯಲ್ಲಿ ಮದ್ರಾಸ್ ಹೈಕೋರ್ಟ್ ವೈನ್ ಶಾಪ್ಗಳನ್ನು ಮುಚ್ಚಬೇಕೆಂದು ಆದೇಶಿಸಿತು. ಆದರೆ, ಆನ್ಲೈನ್ನಲ್ಲಿ ಬುಕ್ ಮಾಡಿದವರ ಮನೆಬಾಗಿಲಿಗೆ ಮದ್ಯ ತಲುಪಿಸುವುದಕ್ಕೆ ಮಾತ್ರ ಉಚ್ಚ ನ್ಯಾಯಾಲಯ ಅನುಮತಿಸಿದೆ.
ಆದರೆ, ರಾಜ್ಯಾದ್ಯಂತ ಆನ್ಲೈನ್ನಲ್ಲಿ ಮದ್ಯ ಮಾರಾಟ ಮತ್ತು ಸರಬರಾಜು ಸಾಧ್ಯವಿಲ್ಲ. ಮದ್ಯದಂಗಡಿಯಲ್ಲಿ ಮಾರಾಟಕ್ಕೆ ಅವಕಾಶ ಕೊಡಿ ಎಂದು ತಮಿಳುನಾಡು ಸರ್ಕಾರ ವಾದ ಮುಂದಿಟ್ಟಿದೆ.