Different Plan : ಮಂಗಗಳ ಹಾವಳಿ ತಪ್ಪಿಸಲು ಮನೆಯಲ್ಲಿ ಹುಲಿ ಸಾಕಿದ ಕೃಷಿಕ….!
ಕೋತಿಗಳ ಕಾಟದಿಂದ ಬೇಸತ್ತ ರೈತನೊಬ್ಬ ಮನೆಯಲ್ಲಿ ಡೂಬ್ಲಿಕೇಟ್ ಹುಲಿ ಸಾಕಿದ ಘಟನೆ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆದಿದೆ.
ಹೌದು… ಮಂಗಗಳಿಂದ ಬೆಳೆ ಹಾನಿ ತಪ್ಪಿಸಲು ಕರ್ನಾಟಕದ ಕೃಷಿಕರೊಬ್ಬರು ತಮ್ಮ ನಾಯಿಗೆ ಹುಲಿ ಮಾದರಿಯಲ್ಲಿ ಬಣ್ಣ ಬಳಿದಿದ್ದಾರೆ.
ಮಲೆನಾಡಿನಲ್ಲಿ ಹೆಚ್ಚುತ್ತಿರುವ ಮಂಗಗಳ ಹಾವಳಿಯನ್ನು ತಡೆಯಲು ರೈತರು ವಿವಿಧ ಉಪಾಯಗಳ ಮೊರೆ ಹೋಗುತ್ತಿದ್ದಾರೆ. ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಶ್ರೀಕಾಂತ ಗೌಡ ಎಂಬ ರೈತ ನಾಯಿಯ ದೇಹಕ್ಕೆ ಹುಲಿ ಪಟ್ಟೆ ಚಿತ್ರಿಸಿದವರು.
4 ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬಳಿ ರೈತರು ಹುಲಿ ಗೊಂಬೆಗಳನ್ನು ಬಳಸುವುದನ್ನು ಕಂಡಿದ್ದ ಇವರು, ತಮ್ಮ ಹೊಲದಲ್ಲಿ ಹುಲಿ ಗೊಂಬೆ ಇಟ್ಟಿದ್ದರು. ಆಶ್ಚರ್ಯವೆಂಬಂತೆ ಗೊಂಬೆಗೆ ಹೆದರಿದ ಮಂಗಗಳು ಹೊಲಕ್ಕೆ ದಾಳಿ ಮಾಡುವುದನ್ನು ನಿಲ್ಲಿಸಿದ್ದವು. ಎರಡು ದಿನಗಳ ನಂತರ ಮತ್ತೊಂದು ಕಡೆ ಇದೇ ರೀತಿ ಗೊಂಬೆ ಇಟ್ಟಾಗ ಅಲ್ಲೂ ಮಂಗಗಳ ಹಾವಳಿ ನಿಂತಿತು.
ಇದೇ ರೀತಿಯ ಉಪಾಯವನ್ನು ಶ್ರೀಕಾಂತ ಗೌಡ ಅವರು ಮಾಡಿದ್ದಾರೆ. ಆದರೆ ಇದರ ಮೇಲೆಯೇ ಹೆಚ್ಚು ದಿನಗಳ ಕಾಲ ಅವಲಂಬಿತವಾಗಿರಲು ಸಾಧ್ಯವಿಲ್ಲ ಎಂಬುದನ್ನು ಅರಿತ ಶ್ರೀಕಾಂತ ಗೌಡ ತಮ್ಮ ನಾಯಿಯನ್ನೇ ಹುಲಿಯಂತೆ ಚಿತ್ರಿಸಿ, ಮಂಗಗಳ ಕಾಟದಿಂದ ಮುಕ್ತಿ ಪಡೆದಿದ್ದಾರೆ.