ಕೆಲ ಷರತ್ತು ವಿಧಿಸಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಅಸ್ತು…
ವಿವಾದಿತ ರಾಮಜನ್ಮಭೂಮಿ ಪ್ರಕರಣದ ವಿವಾದ ವಿಚಾರದಲ್ಲಿ ಸುಪ್ರೀಂಕೋರ್ಟ್ ಇಂದು ತೀರ್ಪು ಪ್ರಕಟ ಮಾಡಿದೆ. ಎಲ್ಲಾ ಧರ್ಮವನ್ನೂ ಗೌರವಿಸುವುದಾಗಿ ಹೇಳಿದ ಸುಪ್ರೀಂ ಕೋರ್ಟ್ನ ಸಾಂವಿಧಾನಿಕ ಪೀಠ, ಕೇವಲ ನಂಬಿಕೆಗಳಿಂದ ಭೂಮಿಯ ಹಕ್ಕುದಾರಿಕೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಜತೆಗೆ ಹಿಂದೂಗಳಿಗೆ ಕೆಲವು ಷರತ್ತುಗಳನ್ನು ವಿಧಿಸಿ ಅಯೋಧ್ಯೆಯಲ್ಲಿ ಜಾಗವನ್ನು ನೀಡಿ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಸುಪ್ರೀಂಕೋರ್ಟ್ ವಿವಾದಿತ ಜಾಗ ರಾಮಲಲ್ಲಾಗೆ ನೀಡಿದೆ. ಆದರೆ, ರಾಮಲಲ್ಲಾಗೆ ಮಂದಿರ ನಿರ್ಮಾಣದ ಹಕ್ಕಿಲ್ಲ ಎಂದು ಹೇಳಿದೆ. ವಿವಾದಿತ ಜಾಗವನ್ನು ಕೇಂದ್ರಸರ್ಕಾರಕ್ಕೆ ಒಪ್ಪಿಸಬೇಕು. ಕೇಂದ್ರ ಸರ್ಕಾರ ಮೂರು ತಿಂಗಳ ಒಳಗೆ ಟ್ರಸ್ಟ್ ರಚಿಸಬೇಕು. ಟ್ರಸ್ಟ್ ಮೇಲುಸ್ತುವಾರಿಯಲ್ಲೇ ಮಂದಿರ ನಿರ್ಮಾಣವಾಗಬೇಕು. ಇದರಲ್ಲಿ ಬೇರೆ ಯಾರೊಬ್ಬರೂ ತಲೆ ಹಾಕುವಂತಿಲ್ಲ.
ಜಾಗದ ಹಕ್ಕುದಾರಿಕೆಗೆ ಅರ್ಜಿ ಹಾಕಿದ್ದ ಸುನ್ನಿ ಬೋರ್ಡ್ಗೆ 5 ಎಕರೆ ಪರ್ಯಾಯ ಜಾಗ ನೀಡಲಾಗುತ್ತಿದೆ. ಇಲ್ಲಿ ಮಸೀದಿ ನಿರ್ಮಾಣ ಮಾಡಬೇಕೋ ಅಥವಾ ಬೇಡವೋ ಎನ್ನುವುದು ಸುನ್ನಿ ಬೋರ್ಡ್ ವಿವೇಚನೆಗೆ ಬಿಟ್ಟಿದ್ದು. ಪರ್ಯಾಯ ಜಾಗವನ್ನು ಇತರೆ ಅವಶ್ಯಕತೆಗೂ ಬಳಸಬಹುದು ಎಂದು ಕೋರ್ಟ್ ಹೇಳಿದೆ.