ಮರು ಪಾವತಿಸಬೇಕಾದ ಸಾಲದ ಬಡ್ಡಿಗೆ ಬಡ್ಡಿ ವಿಧಿಸಲಾಗುತ್ತದೆಯೇ: ಆರ್ಬಿಐಗೆ ಸುಪ್ರೀಂ ಪ್ರಶ್ನೆ
ಲಾಕ್ಡೌನ್ ಸಂದರ್ಭದಲ್ಲಿ ಸಾಲದ ಕಂತುಗಳ ಪಾವತಿಯನ್ನು ಆರ್ಬಿಐ ಮುಂದೂಡಿದ್ದು, ಆ ಸಾಲದ ಕಂತುಗಳ ಬಡ್ಡಿಗೆ ಬಡ್ಡಿ ವಿಧಿಸಲಾಗಿದೆಯೇ ಎಂದು ಸ್ಪಷ್ಟಪಡಿಸುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಸ್.ಕೆ.ಕೌಲ್ ಮತ್ತು ಎಂ.ಆರ್.ಷಾ ಅವರ ನ್ಯಾಯಪೀಠವು ಮೂರು ದಿನಗಳಲ್ಲಿ ಸಭೆ ನಡೆಸುವಂತೆ ಹಣಕಾಸು ಸಚಿವಾಲಯ ಮತ್ತು ಆರ್ಬಿಐಗೆ ಸೂಚಿಸಿದೆ.
“ಈ ಪ್ರಕ್ರಿಯೆಗಳಲ್ಲಿ 3 ತಿಂಗಳವರೆಗೆ ಮುಂದೂಡಲ್ಪಟ್ಟ ಬಡ್ಡಿಯನ್ನು ನಂತರ ಪಾವತಿಸಬೇಕಾದ ಸಾಲದ ಮೊತ್ತಕ್ಕೆ ಸೇರಿಸಲಾಗುತ್ತದೆಯೇ ಮತ್ತು ಬಡ್ಡಿಗೆ ಬಡ್ಡಿ ವಿಧಿಸಲಾಗುತ್ತದೆಯೇ ಎಂಬುದು ನಮ್ಮ ಕಾಳಜಿ” ಎಂದು ನ್ಯಾಯಪೀಠ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ತಿಳಿಸಿದೆ. ಆರ್ಬಿಐ ಜೊತೆ ಸಭೆ ನಡೆಸಲು ಕೋರಿದ್ದೇನೆ ಎಂದು ಮೆಹ್ತಾ ಪ್ರತಿಕ್ರಿಯಿಸಿದ್ದಾರೆ.
“ನಾವು ಕೇಳಿರುವ ಪ್ರಶ್ನೆಯನ್ನೂ ಮೀರಿದಂತೆ ಆರ್ಬಿಐನ ಉತ್ತರಗಳಿರಬಹುದು. ಅವರು ಒಂದನ್ನು ಇನ್ನೊಂದಕ್ಕೆ ತಳ್ಳಲು ಪ್ರಯತ್ನಿಸಬಹುದು. ಅದರ ಬಗ್ಗೆ ಸಾಕಷ್ಟು ಅಭಿಪ್ರಾಯಗಳಿವೆ. ನಮ್ಮ ಪ್ರಶ್ನೆ ಸೀಮಿತವಾಗಿದ್ದು, ಪಾವತಿಯು ಬಡ್ಡಿಗೆ ಬಡ್ಡಿಯನ್ನು ವಿಧಿಸುತ್ತದೆಯೆ? ” ಎಂಬುದು ಎಂದು ನ್ಯಾಯಪೀಠ ಮಿಶ್ರಾ ಅವರಿಗೆ ತಿಳಿಸಿದೆ.
ಈ ವಿಚಾರದ ಬಗ್ಗೆ ಸುಪ್ರೀಂ ಕೋರ್ಟ್ ಜೂನ್ 17 ರಂದು ಮತ್ತೆ ವಿಚಾರಣೆ ನಡೆಸಲಿದೆ.