ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಚಿಕ್ಕಮ್ಮರ ಕುಟುಂಬದ ಮೇಲೆ ಹಿಂಸಾತ್ಮಕ ದಾಳಿ: ತನಿಖೆಗೆ ರೈನಾ ಆಗ್ರಹ
ವೈಯಕ್ತಿಕ ಕಾರಣಗಳನ್ನು ನೀಡಿ ಐಪಿಎಲ್ನಿಂದ ಹಿಂದೆ ಸರಿದಿರುವ ಭಾರತ ಮಾಜಿ ಕ್ರಿಕೆಟ್ ಆಟಗಾರ ಸುರೇಶ್ ರೈನಾ, ತಮ್ಮ ಚಿಕ್ಕಮ್ಮನ ಕುಟುಂಬದ ಮೇಲೆ ನಡೆದಿರುವ ಹಿಂಸಾತ್ಮಕ ದಾಳಿಯ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.
ಆಗಸ್ಟ್ 19 ಮತ್ತು 20ರ ಮಧ್ಯರಾತ್ರಿ ಪಂಜಾಬ್ನ ಪಠಾಣ್ಕೋಟ್ ಜಿಲ್ಲೆಯ ತರಿಯಾಲ್ ಗ್ರಾಮದಲ್ಲಿ ರೈನಾ ಅವರ ಸಂಬಂಧಿಕರ ಮೇಲೆ ಹಲ್ಲೆ ನಡೆಸಲಾಗಿದೆ. ಹಿಂಸಾತ್ಮಕ ದಾಳಿಯಲ್ಲಿ ರೈನಾ ಅವರ ಚಿಕ್ಕಪ್ಪ ಮತ್ತು ಸೋದರ ಸಂಬಂಧಿ ಸಾವನ್ನಪ್ಪಿದ್ದಾರೆ.
ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗುವ ಐಪಿಎಲ್ ಆಡಲು ಯುಎಇಗೆ ತೆರಳಿದ್ದ ರೈನಾ, ಘಟನೆಯ ನಂತರ ಐಪಿಎಲ್ನಲ್ಲಿ ಆಡುವುದಿಲ್ಲ ಎಂದು ಭಾರತಕ್ಕೆ ಮರಳಿದಿದ್ದರು. ತಾವು ಐಪಿಎಲ್ ತೊರೆದ ಬಗ್ಗೆ ಟ್ವೀಟ್ ಮಾಡಿದ್ದ ಅವರು, ಭಾರತಕ್ಕೆ ಹಿಂದಿರುಗಲು ಕಾರಣ ಪಠಾಣ್ಕೋಟ್ನಲ್ಲಿ ದರೋಡೆ ಪ್ರಕರಣವೆಂದು ಹೇಳಿರಲಿಲ್ಲ.
ತಮ್ಮ ಸಂಬಂಧಿಗಳ ಕುಟುಂಬದ ಬಗ್ಗೆ ಇಂದು ಮೌನ ಮುರಿದಿರುವ ರೈನಾ, “ನನ್ನ ಕುಟುಂಬಕ್ಕೆ ಏನಾಯಿತು. ಪಂಜಾಬ್ ಭಯಾನಕವಾಗಿದೆ. ನನ್ನ ಚಿಕ್ಕಪ್ಪನನ್ನು ಹತ್ಯೆ ಮಾಡಲಾಯಿತು, ನನ್ನ ಚಿಕ್ಕಮ್ಮ ಸೋದರಸಂಬಂಧಿಗಳಿಗೆ ತೀವ್ರವಾದ ಗಾಯಗಳಾಗಿವೆ. ದುರದೃಷ್ಟವಶಾತ್ ನನ್ನ ಸೋದರಸಂಬಂಧಿ ಸಹ ಕಳೆದ ರಾತ್ರಿ ಜೀವನಕ್ಕಾಗಿ ಹೋರಾಡಿದ ನಂತರ ನಿಧನರಾದರು. ನನ್ನ ಬುವಾ (ಚಿಕ್ಕಮ್ಮ) ಅವರ ಪರಿಸ್ಥಿತಿ ತಿವ್ರತರವಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.
“ಇಲ್ಲಿಯವರೆಗೆ ಆ ರಾತ್ರಿ ನಿಖರವಾಗಿ ಏನಾಯಿತು ಮತ್ತು ಯಾರು ಇದನ್ನು ಮಾಡಿದರು ಎಂದು ನಮಗೆ ತಿಳಿದಿಲ್ಲ. ಈ ವಿಷಯವನ್ನು ಪರಿಶೀಲಿಸುವಂತೆ ನಾನು ಪಂಜಾಬ್ ಪೋಲಿಸ್ ಅನ್ನು ವಿನಂತಿಸುತ್ತೇನೆ. ಅವರಿಂದ ಈ ಘೋರ ಕೃತ್ಯವನ್ನು ಯಾರು ಮಾಡಿದ್ದಾರೆಂದು ತಿಳಿಯವು ಹಕ್ಕಿದೆ. ಆ ಅಪರಾಧಿಗಳನ್ನು ತಪ್ಪಿಸಿಕೊಳ್ಳಲು ಬಿಡಬಾರದು. ಅದು ಮತ್ತಷ್ಟು ಕೃತ್ಯಗಳಿಗೆ ಪ್ರೇರೇಪಿಸುತ್ತ” ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ಆಗಸ್ಟ್ 15 ರಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ನಿವೃತ್ತಿ ಹೊಂದಿದ ಸಂದರ್ಭದಲ್ಲಿಯೇ ರೈನಾ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದರು.
ಇದನ್ನೂ ಓದಿ: ‘ಇದು ಯಾರನ್ನೂ ವೈಯಕ್ತಿಕವಾಗಿ ಆಕ್ರಮಣ ಮಾಡುವ ಪ್ರಯತ್ನವಲ್ಲ’ – ಇಂದ್ರಜಿತ್