ಭಾರತದಲ್ಲಿ ಒಂದೇ ದಿನ 32,000 ಕೊರೊನಾ ಕೇಸ್ : 600 ಮಂದಿ ಮಹಾಮಾರಿಗೆ ಬಲಿ!
ದೇಶದಲ್ಲಿ ಹೆಚ್ಚಾಗುತ್ತಲೇ ಇರುವ ಕೊರೊನಾ ಸೋಂಕಿತರ ಸಂಖ್ಯೆ ಜನರ ನಿದ್ದೆಗೆಡಿಸಿದೆ. ಮಕ್ಕಳು ಹಾಗೂ ವಯಸ್ಸಾದವರಲ್ಲಿ ಮಹಾಮಾರಿ ವೈರಸ್ ಹೆಚ್ಚು ಪರಿಣಾಮ ಬೀರಲಿರುವುದರಿಂದ ಮನೆಬಿಟ್ಟು ಹೊರಬಾರದ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಪುಷ್ಠಿ ಎಂಬಂತೆ ಭಾರತದಲ್ಲಿ ಒಂದೇ ದಿನ ಹೊಸದಾಗಿ 32,000 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 970,169ಕ್ಕೆ ತಲುಪಿದೆ.
ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುವ ಸೋಂಕು ನಿಯಂತ್ರಣಕ್ಕೆ ಬರುವ ಯಾವುದೇ ಲಕ್ಷಣಗಳು ಕಾಣ ಸಿಗುತ್ತಿಲ್ಲ. ಬುಧುವಾಋ ಒಂದೇ ದಿನ 600 ಮಂದಿ ಮಹಾಮಾರಿ ವೈರಸ್’ಗೆ ಬಲಿಯಾಗಿದ್ದಾರೆ. ಆ ಮೂಲಕ ಕೊರೊನಾಗೆ ಬಲಿಯಾದವರ ಸಂಖ್ಯೆ 24,929ಕ್ಕೆ ತಲುಪಿದೆ. ಒಟ್ಟು ಸೋಂಕಿತರಲ್ಲಿ 21415 ಮಂದಿ ಗುಣಮುಖರಾಗಿದ್ದು, ಈವರೆಗೆ 970,169 ಮಂದಿ ಸೋಂಕಿತರ ಪೈಕಿ ಒಟ್ಟು ಗುಣಮುಖರಾದವರ ಸಂಖ್ಯೆ 610430ಕ್ಕೆ ತಲುಪಿದೆ.
ದೇಶದಲ್ಲಿ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಮುಂಚುಣಿಯಲ್ಲಿರುವ ಮಹಾರಾಷ್ಟ್ರದಲ್ಲಿ ಒಂದೇ ದಿನ 7975 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 233 ಜನ ಸಾವನ್ನಪ್ಪಿದ್ದಾರೆ. ಕರ್ನಾಟಕ ರಾಜ್ಯದಲ್ಲಿ 3176 ಕೇಸು ಪತ್ತೆಯಾಗಿದ್ದು, 87 ಮಂದಿ ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ 1674 ಕೇಸು ದಾಖಲಾಗಿದ್ದು, 41 ಜನರು ಸಾವನ್ನಪ್ಪಿದ್ದಾರೆ. ಉಳಿದಂತೆ ತಮಿಳುನಾಡಿನಲ್ಲಿ 4496 ಹೊಸ ಕೇಸು ಪತ್ತೆಯಾಗಿದ್ದು, 68 ಜನರು ಸಾವನ್ನಪ್ಪಿದ್ದಾರೆ.
ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ 24 ಗಂಟೆಗಳಲ್ಲಿ ದೇಶಾದ್ಯಂತ 3,26,826 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದೆ.