ವಿಧಾನ ಪರಿಷತ್ನಲ್ಲಿ ಹಳ್ಳಿಹಕ್ಕಿಗಿಲ್ಲ ಸ್ಥಾನ; ಅಂತ್ಯವಾಗುತ್ತಾ ವಿಶ್ವನಾಥ್ ರಾಜಕೀಯ ಜೀವನ!
ಕೊರೊನಾ ಸಂಕಷ್ಟ, ಲಾಕ್ಡೌನ್ ನಿರ್ವಹಣೆ ಹಾಗೂ ವೈರಸ್ ಹರಡುವಿಕೆಯನ್ನು ತಡೆಗಟ್ಟುವ, ಕೊರೊನಾ ಆಸ್ಪತ್ರೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಗಿಸುವ ಕಲಸದ ನಡುವೆಯೂ ರಾಜ್ಯ ರಾಜಕೀಯ ಚಟುವಟಿಕೆಗಳು ನಡೆಯುತ್ತಲೇ ಇವೆ. ಸಧ್ಯ, ವಿಧಾನ ಸಭೆಯಿಂದ ವಿಧಾನ ಪರಿಷತ್ಗೆ ಚುನಾವಣೆಗೆ ಮುಗಿದಿದ್ದರೂ, ವಿಧಾನ ಪರಿಷತ್ಗೆ ಇನ್ನೂ 05 ಸದಸ್ಯರನ್ನು ನಾನಿರ್ದೇಶನ ಮಾಡುವ ಅವಕಾಶ ರಾಜ್ಯ ಬಿಜೆಪಿಗಿದೆ.
ನಾಮನಿರ್ದೇಶನಗೊಳ್ಳುವ ಐದು ಸ್ಥಾನಗಳಿಗಾಗಿ ಬಿಜೆಪಿಯಲ್ಲಿ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಬೆಳೆಯುತ್ತಿದೆ. ಈ ಪೈಕಿ ಹುಣಸೂರಿನ ಹಳ್ಳಿಹಕ್ಕಿ ವಿಶ್ವಾನಾಥ್ ಕೂಡ ಒಬ್ಬರು.
ವಿಧಾನ ಪರಿಷತ್ತಿನ ಐದು ಸ್ಥಾನಗಳ ಪೈಕಿ ವಿಶ್ವನಾಥ್ ಅವರನ್ನು ಒಂದು ಸ್ಥಾನಕ್ಕೆ ನಾಮನಿರ್ದೇಶನ ಮಾಡುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಇರಾದೆಗೆ ಬಿಜೆಪಿಯ ದಿಲ್ಲಿ ಪ್ರಭುತ್ವ ಕೆಂಪು ಬಾವುಟ ಹಾರಿಸಿದೆ ಎನ್ನಲಾಗಿದೆ.
ವಿಶ್ವನಾಥ್ ಸೇರಿದಂತೆ ಸಿಎಂ ಸೂಚಿಸಿರುವ ಮೂವರ ಹೆಸರುಗಳಿಗೆ ಬಿಜೆಪಿ ಹೈಕಮಾಂಡ್ ತೀರಾ ತಣ್ಣನೆಯ ಪ್ರತಿಕ್ರಿಯೆ ನೀಡಿದೆ. ಈ ಬಾರಿಯೂ ವಿಶ್ವನಾಥ್ಗೆ ಟಿಕೆಟ್ ಇಲ್ಲ ಎಂದು ವರದಿಯಾಗಿದೆ.
ರಾಜ್ಯ ರಾಜಕೀಯ ಅಧಿಕಾರ ಗದ್ದುಗೆಗೆ ಯಡಿಯೂರಪ್ಪ ಏರಿ ಮುಖ್ಯಮಂತ್ರಿಯಾಗಲು ಭಾರೀ ಶ್ರಮಿಸಿದ್ದ ಹಳ್ಳಿಹಕ್ಕಿ ವಿಶ್ವನಾಥ್ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರ ಆಪ್ತರಾಗಿದ್ದಾರೆ ಎಂದೇ ಹೇಳಬಹುದು. ಆದರೆ, ಆಪ್ತರೋ ಅಲ್ಲವೋ ಗೊತ್ತಿಲ್ಲ. ತಾನು ಮುಖ್ಯಮಂತ್ರಿಯಾಗಲು ಸಹಾಯ ಮಾಡಿ ಅಧಿಕಾರ ಕಳೆದುಕೊಂಡಿದ್ದಾರೆ ಎಂಬ ಸಿಂಪತಿಗೂ ಯಡಿಯೂರಪ್ಪನವರು ವಿಶ್ವನಾಥ್ಗೆ ಅಧಿಕಾರ ಕೊಡಿಸಲು ಹರಸಾಹಸ ಪಡುತ್ತಿದ್ದಾರೆ.
ಕಳೆದ ವಿಧಾನ ಪರಿಷತ್ ಚುನಾವಣೆಗೆ ಆಕಾಂಕ್ಷಿಯಾಗಿದ್ದ ವಿಶ್ವನಾಥ್ ಹೆಸರನ್ನು ರಾಜ್ಯ ಬಿಜೆಪಿ ನಾಯಕರು ಸೂಚಿಸಿದ್ದರು. ಆದರೆ, ವಿಶ್ವನಾಥ್ ಹೆಸರನ್ನು ಕೈಬಿಟ್ಟಿದ್ದ ದಿಲ್ಲಿ ಕಮಾಂಡ್ ಹಳ್ಳಿಹಕ್ಕಿಗೆ ಟಿಕೆಟ್ ಇಲ್ಲ ಎಂದು ಹೇಳಿತ್ತು.
ಈ ನಡುವೆ ರಾಜಸ್ಥಾನ ರಾಜಕೀಯ ಬಿಕ್ಕಟ್ಟಿಗೆ ಸಿಲುಕಿರುವ ಸಂದರ್ಭದಲ್ಲಿ ಬಿಜೆಪಿಯ ರಾಜ್ಯ ನಾಯಕರೇ ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡದಿದ್ದರೂ, ವಿಶ್ವನಾಥ್ ಮೈಸೂರಿನಲ್ಲಿ ಪ್ರೆಸ್ಮೀಟ್ ಮಾಡಿ ರಾಜಸ್ಥಾನದ ರಾಜಕೀಯ ಸಂದಿಗ್ಧತೆಗೆ ನಾವೇ ಕಾರಣ ಎಂದು ಹೇಳಿದ್ದರು. ಇದು ಬಿಜೆಪಿ ಹೈಕಮಾಂಡ್ ನಾಯಕರನ್ನು ಮನವೊಲಿಸುವ ತಂತ್ರದ ಭಾಗವಾಗಿದೆ ಎಂದು ಹೇಳಲಾಗುತ್ತಿದೆ.
ಅದಾದ ನಂತರ, ನಾಮನಿರ್ದೇಶನಕ್ಕಾದರೂ ತಮ್ಮ ಹೆಸರು ಸೇರಿಸಿಕೊಳ್ಳಲು ವಿಶ್ವನಾಥ್ ದಂಬಾಲು ಬಿದ್ದಿದ್ದಾರೆ. ಆದರೆ, ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ನಂತರ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರನ್ನೇ ನಡೆಸಿಕೊಳ್ಳುತ್ತಿರುವ ರೀತಿ ನೋಡಿದರೆ, ಅವರ ಮಾತಿಗೆ ಹೈಕಮಾಂಡ್ ಕವಡೆ ಕಾಸಿನ ಕಿಮ್ಮತ್ತು ನೀಡುವಂತೆ ಕಾಣುತ್ತಿಲ್ಲ.
ಯಡಿಯೂರಪ್ಪನವರ ಮಾತೇ ನಡೆಯುವುದಿಲ್ಲ ಎಂದ ಮೇಲೆ ವಿಶ್ವನಾಥ್ಗೆ ಅಧಿಕಾರಕ್ಕೆ ಏರಲು ಬೇರೆ ಯಾವುದೇ ದಾರಿಯೂ ಇಲ್ಲ. ಮೈತ್ರಿ ಸರ್ಕಾರ ಉರುಳಿಸಿ, ಬಿಜೆಪಿಯನ್ನು ಅಧಿಕಾರಕ್ಕೆ ತರವು ಶ್ರಮಿಸಿದ ಈ ಸಂದರ್ಭದಲ್ಲಿಯೇ ವಿಶ್ವನಾಥ್ಗೆ ಟಿಕೆಟ್ ನೀಡದೇ ಇರುವ ಬಿಜೆಪಿ ಹೈಕಮಾಂಡ್, ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಇಂದ ಟಿಕೆಟ್ ನೀಡುವುದೇ, ವಿಶ್ವನಾಥ್ ಮತ್ತೆ ಚುನಾವಣಾ ಕಣಕ್ಕೆ ಇಳಿಯಲು ಸಾಧ್ಯವೇ? ಬಿಜೆಪಿಯು ವಿಶ್ವನಾಥ್ ಅವರನ್ನು ನಿರ್ಲಕ್ಷಿಸುತ್ತಿದ್ದು, ಬಿಜೆಪಿಯಲ್ಲಿ ವಿಶ್ವನಾಥ್ಗೆ ರಾಜಕೀಯ ಭವಿಶ್ಯವಿಲ್ಲ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಬಿಜೆಪಿ ವಿಶ್ವನಾಥ್ರನ್ನು ನಿರ್ಲಕ್ಷಿಸಿದ್ದೇ ಆದಲ್ಲಿ, ಹಳ್ಳಿಹಕ್ಕಿ ವಿಶ್ವನಾಥ್ ಅವರ ರಾಜಕೀಯ ಜೀವನ ಇಲ್ಲಿಗೆ ಫುಲ್ ಸ್ಟಾಪ್ ಪಡೆದುಕೊಳ್ಳುವುದು ನಿಶ್ಚಿತವಾಗಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಗುಸುಗುಸು ಕೇಳಿಬರುತ್ತಿದೆ.
ಇದನ್ನೂ ಓದಿ: ರಾಜಸ್ಥಾನ ಬಿಕ್ಕಟ್ಟಿಗೆ ನಾವೇ ಕಾರಣ ಎಂದ ವಿಶ್ವನಾಥ್; ಸತ್ಯ ಒಪ್ಪಿಕೊಂಡಿತಾ ಬಿಜೆಪಿ!