ಮೊಹರಂ ಮೆರವಣಿಗೆಯಲ್ಲಿ ಹಿಂಸಾಚಾರ; ಕಣ್ಣು ಕಳೆದುಕೊಂಡ ವಿದ್ಯಾರ್ಥಿ
ಜಮ್ಮು-ಕಾಶ್ಮೀರದ ಶ್ರೀನಗರದ ಬಮೀನಾದಲ್ಲಿ ಪೊಲೀಸರ ಅನುಮತಿ ನಿರಾಕರಣೆ ನಡುವೆಯೂ ನಡೆಯುತ್ತಿದ್ದ ಮೊಹರಂ ಮೆರವಣಿಗೆ ಚದುರಿಸಲು ಭದ್ರತಾ ಪಡೆಗಳು ನಡೆಸಿದ ಪೆಲೆಟ್ ಫೈರಿಂಗ್ನಲ್ಲಿ ಹಲವರು ದೃಷ್ಠಿ ಕಳೆದುಕೊಂಡಿದ್ದಾರೆ.
ಭದ್ರತಾ ಪಡೆಗಳ ದಾಳಿಯಿಂದಾಗಿ ಅಲಿಗಡ್ನಲ್ಲಿ 10ನೇ ತರಗತಿ ಓದುತ್ತಿದ್ದ ತನ್ವೀರ್ ಅಹ್ಮದ್ ಎಂಬ ಬಾಲಕನ ಎರಡು ಕಣ್ಣುಗಳು ದೃಷ್ಠಿ ಕಳೆದುಕೊಳ್ಳುವ ಅಪಾಯದಲ್ಲಿವೆ ಎಂದು ಎಸ್ಎಂಎಚ್ಎಸ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ನಾವು ತುಂಬಾ ಶಾಂತಿಯಿಂದಲೇ ಮೆರವಣಿಗೆ ನಡೆಸುತ್ತಿದ್ದೆವು. ಪೊಲೀಸರೇ ಮೊದಲು ಲಾಠಿಚಾರ್ಜ್ ಮಾಡಿ, ಪೆಲೆಟ್ ಫೈರಿಂಗ್ ಆರಂಭಿಸಿದರು. ನಾನು ಮನೆಗೆ ಹೊರಡುವವನಿದ್ದೆ. ಏನಾಗುತ್ತಿದೆ ಎಂದು ನೋಡಲು ಹಿಂತಿರುಗಿದೆ. ಆಗಲೇ ನನಗೆ ಗುಂಡುಗಳು ಬಿದ್ದವು ಎನ್ನುತ್ತಾರೆ ಗಾಯಾಳು ತನ್ವೀರ್.
ನನ್ನ ಮಗ ಅಲಿಗಡ್ನಲ್ಲಿ 6ನೇ ತರಗತಿಯಿಂದಲೂ ಓದುತ್ತಿದ್ದ. ಲಾಕ್ಡೌನ್ನಿಂದಾಗಿ ಇಲ್ಲಿಗೆ ಬಂದಿದ್ದ, ಆತನಿಗಾಗಿ ದೃಷ್ಠಿ ಬರಲಿ ಎಂದು ನಾವು ಪ್ರಾರ್ಥಿಸುತ್ತಿದ್ದೆ ಎಂದು ತನ್ವೀರ್ ತಂದೆ ನಜೀರ್ ಅಹ್ಮದ್ ಭಟ್ ಕಣ್ಣೀರು ಹಾಕಿದ್ದಾರೆ.
ವೈದ್ಯರು ಹೇಳುವಂತೆ ತನ್ವೀರ್ಗೆ ಕನಿಷ್ಟ 15 ಗುಂಡುಗಳಾದರೂ ಕಣ್ಣಿಗೆ ಬಿದ್ದಿವೆ. ಕಣ್ಣಿನಲ್ಲಿ ರಂಧ್ರವಿರುವ ಸಾಧ್ಯತೆಯಿದೆ ಎನ್ನುತ್ತಾರೆ.
ಇನ್ನು ತನ್ವೀರ್ ನಂತೆಯೇ ಗಾಯಗೊಂಡಿರುವ 12ನೇ ತರಗತಿ ವಿದ್ಯಾರ್ಥಿ ಸುಹೇಲ್ ಅಬ್ಬಾಸ್ ಮೀರ್ ಕೂಡ ನಮ್ಮ ಮೆರವಣಿಗೆ ಶಾಂತಿಯುತವಾಗಿತ್ತು, ನಮ್ಮ ಧಾರ್ಮಿಕ ಆಚರಣೆಯನ್ನು ನಾವು ಮಾಡುತ್ತಿದ್ದೆವು ಎನ್ನುತ್ತಾನೆ. ಈತನಿಗೂ ಎಡಗಣ್ಣು, ಎಡಗೈಗಳಿಗೆ ಗಾಯಗಳಾಗಿವೆ.
ಸದ್ಯ ಗಾಯಾಳು ಸುಹೇಲ್ಗೆ ಒಂದು ಶಸ್ತ್ರ ಚಿಕಿತ್ಸೆ ನಡೆದಿದ್ದು, ಕೆಲ ದಿನಗಳಲ್ಲಿ ಎಡಗಣ್ಣಿಗೆ ಮತ್ತೊಂದು ಶಸ್ತ್ರ ಚಿಕಿತ್ಸೆ ಮಾಡಬೇಕಾಗಿದೆ. ಸರಿಯಾದ ಚಿಕಿತ್ಸೆ ಮತ್ತು ಉತ್ತಮ ಆರೈಕೆಯಿಂದ ಆತನಿಗೆ ದೃಷ್ಠಿ ಮರಳಬಹುದು ಎಂದು ವೈದ್ಯರು ಭರವಸೆ ನೀಡುತ್ತಾರೆ. ಘಟನೆಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಸೇರಿ 19 ಮಂದಿ ತೀವ್ರವಾಗಿ ಗಾಯಗೊಂಡಿದ್ದರೇ, 200-250ಕ್ಕೂ ಹೆಚ್ಚು ಮಂದಿಗೆ ಸಣ್ಣಪುಟ್ಟ ಗಾಯಾಗಳಾಗಿವೆ.
ಇದನ್ನೂ ಓದಿ: ಟ್ವೀಟ್ ಮಾಡಿದ್ದು ನನ್ನ ಕರ್ತವ್ಯ; ಕೋರ್ಟ್ ಗೌರವಿಸಿ ದಂಡ ಕಟ್ಟುತ್ತೇನೆ: ಪ್ರಶಾಂತ್ ಭೂಷಣ್